ಕೋಲಾರ: ಮೂಢನಂಬಿಕೆ ತೊರೆದರೆ ಮಾತ್ರ ಯಾವುದೇ ಸಮಾಜದ ಅಭಿವೃದ್ಧಿ ಸಾಧ್ಯ ಸಾಧ್ಯ ಎಂದು ಗಾಯಕ ಪಿಚ್ಚಹಳ್ಳಿ ಶ್ರೀನಿವಾಸ್ ಹೇಳಿದರು.
ನಗರದಲ್ಲಿ ಗುರುವಾರ ದಲಿತ ಸಂಘರ್ಷ ಸಮಿತಿಯು ಡಾ.ಬಿ,ಆರ್.ಅಂಬೇಡ್ಕರ್ ಪರಿನಿರ್ವಾಣದ ಪ್ರಯುಕ್ತ ನಂಬಿಕೆ ಮತ್ತು ಮೂಢನಂಬಿಕೆ ಕುರಿತು ಏರ್ಪಡಿಸಿದ್ದ ಚಿಂತನಾ ಗೋಷ್ಠಿ ಉದ್ಘಾಟಿಸಿ ಮಾತನಾಡಿದರು.
ನಿಧಿ ಆಸೆ ಗೋಸ್ಕರ ಮಕ್ಕಳನ್ನು ಬಲಿಕೊಡುವುದು, ಬ್ರಾಹ್ಮಣರು ಉಂಡೆದ್ದ ಎಲೆಗಳ ಮೇಲೆ ಉರುಳಾಡಿ ಪುಣ್ಯಕ್ಕಾಗಿ ಹಪಹಪಿಸುವುದು ಮೂಢನಂಬಿಕೆಯ ಪರಮಾವಧಿ ಎಂದರು.
ಇಂದಿಗೂ ಹಳ್ಳಿಗಳಲ್ಲಿ ನಿಧಿ ಇದೆ ಎಂದು ಮಕ್ಕಳನ್ನೇ ಬಲಿಕೊಡುವುದು ನಡೆಯುತ್ತಿದೆ. ಈ ರೀತಿ ಕಂದಾಚಾರಗಳು ಮತ್ತು ಎಲ್ಲ ಜಾತಿ ಧರ್ಮಗಳಲ್ಲಿರುವ ಮಾನವ ವಿರೋಧಿ ಮೂಢನಂಬಿಕೆ ಕಿತ್ತೊಗೆಯಬೇಕು. ಮೂಢನಂಬಿಕೆಗಳ ವಿರುದ್ಧ ಎಲ್ಲೋ ಮೆಟ್ರೋ ನಗರಗಳಲ್ಲಿ ಕುಳಿತು ಚರ್ಚೆ ಮಾಡುವುದಕ್ಕಿಂತ ಗ್ರಾಮೀಣ ಪ್ರದೇಶಗಳ ಜನರ ನಡುವೆ ಚರ್ಚಿಸಿ ಸಾಧಕ -ಭಾದಕಗಳನ್ನು ತಿಳಿಯಬೇಕಾಗಿದೆ ಎಂದರು.
ಮೂಢನಂಬಿಕೆಗಳ ವಿರುದ್ಧ ರಚಿಸಿರುವ ಕರಡು ವಿಧೇಯಕವು ಕಂದಾಚಾರಗಳಿಂದ ಜನಸಮುದಾಯವನ್ನು ವಿಮೋಚನೆ ಮತ್ತು ಬೆಳಕಿನಡೆಗೆ ಕೊಂಡೊಯ್ಯತ್ತದೆ ಎಂದು ತಿಳಿಯಬೇಕು. ಪ್ರಕೃತಿಗೆ ವಿರುದ್ಧವಾದ ಹಾಗೂ ಸಹಜಕ್ಕೆ ದೂರವಾದ ನಂಬಿಕೆಗಳನ್ನು ಕಿತ್ತೊಗೆಯಬೇಕು ಎಂದರು.
ರಾಜ್ಯ ಸರ್ಕಾರ ಜಾರಿಗೆ ತಂದಿರುವ ಮೂಢನಂಬಿಕೆ ನಿಷೇಧ ಕಾಯ್ದೆಯನ್ನು ಎಲ್ಲರೂ ಸ್ವಾಗತಿಸಬೇಕಾಗಿದೆ. ಕಾಯ್ದೆಯನ್ನು ಮುಖ್ಯಮಂತ್ರಿಗಳು ಯಾವುದೇ ಕಾರಣಕ್ಕೂ ಹಿಂತೆಗೆದುಕೊಳ್ಳಬಾರದು ಎಂದು ಆಗ್ರಹಿಸಿದರು.
ಮೂಢನಂಬಿಕೆ ವಿರುದ್ಧದ ಹೋರಾಟ ಸುಮಾರು ಶತಮಾನಗಳದ್ದಾಗಿದ್ದು, ವೈದಿಕ ಧರ್ಮ ತನ್ನ ಶ್ರೇಷ್ಠತೆಯನ್ನು ಹೇರುವ ಸಲುವಾಗಿ ಶ್ರಮ ಶಕ್ತಿ ಸಮುದಾಯಗಳಲ್ಲಿ ಮೂಢನಂಬಿಕೆಗಳನ್ನು ಬಿತ್ತಿ, ಎಲ್ಲಾ ರೀತಿಯಲ್ಲೂ ಶೋಷಣೆಗೆ ಒಳಪಡಿಸಿದ ಪರಿಣಾಮ ಸಮಾಜದಲ್ಲಿ ದೊಡ್ಡ ಪ್ರಮಾಣದಲ್ಲಿ ಅಸಮಾನತೆ ಮತ್ತು ಬಡತನ ಬೆಳೆದು ನಿಂತಿದೆ ಎಂದರು.
ನಂಬಿಕೆಯೇ ಮುಖ್ಯ. ಮೂಢನಂಬಿಕೆಗಳಲ್ಲ. ಮೂಢನಂಬಿಕೆಗಳಿಗೆ ಬಲಿಯಾಗುತ್ತಿರುವುದು ಅನಕ್ಷರಸ್ಥರು ಮತ್ತು ಕೆಳವರ್ಗದ ಜನ ಮಾತ್ರ. ಮೂಢನಂಬಿಕೆಗಳ ವಿರುದ್ಧ ಆಂದೋಲನವನ್ನು ರೂಪಿಸುತ್ತಿರುವ ನಿಡುಮಾಮಿಡಿ ಸ್ವಾಮೀಜಿ ವಿರುದ್ಧ ದ್ವೇಷದಿಂದ ಟೀಕೆ ಮಾಡುವವರು ತಪ್ಪು ಹೇಳಿಕೆಗಳನ್ನು ನೀಡಿದರೆ, ಬೆದರಿಕೆಗಳನ್ನು ಹಾಕಿದರೆ ದಲಿತ ಸಂಘಟನೆಗಳು ಒಂದಾಗಿ ಹಳ್ಳಿಹಳ್ಳಿಯಿಂದ ದೊಣ್ಣೆಗಳನ್ನು ಹಿಡಿದು ಸ್ವಾಮೀಜಿ ರಕ್ಷಣೆಗೆ ನಿಲ್ಲಬೇಕು ಎಂದರು.
ವಿಭಾಗೀಯ ಸಂಚಾಲಕ ಎ.ಮಂಜುನಾಥ್, ಬೆಂಗಳೂರು ಜಿಲ್ಲಾ ಸಂಚಾಲಕ ಐ.ಆರ್.ನಾರಾಯಣಸ್ವಾಮಿ, ಹಿರೇಕರಪನಹಳ್ಳಿ ಯಲ್ಲಪ್ಪ, ದೊಡ್ಡಮಲೆ ರವಿ ಕುಮಾರ್, ಮಾರ್ಜೇನಹಳ್ಳಿ ಮುನಿಸ್ವಾಮಿ, ವಿಜಿ ಕುಮಾರ್, ಮಹಿಳಾ ಅಧ್ಯಕ್ಷೆ ಉಮಾ, ನಾಗ, ಯಲ್ಲಪ್ಪ, ಮುನಿರಾಜು, ಸಿ.ವಿ.ನಾಗರಾಜ್, ಭಾಗವಹಿಸಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.