ರಾಯಚೂರು: ‘ಜಿಲ್ಲೆಯಲ್ಲಿ ನಾಲ್ಕಾರು ದಿನಗಳಿಂದ ಮಳೆ ಸುರಿದು ನಷ್ಟವಾಗಿದೆ. ಇದರ ಪರಿಹಾರ ಕಾರ್ಯಕ್ಕೆ ಸರ್ಕಾರ ತುರ್ತಾಗಿ 50 ಲಕ್ಷ ರೂಪಾಯಿ ಬಿಡುಗಡೆ ಮಾಡಿದೆ. ಈ ಮೊತ್ತದಲ್ಲಿ ಆಡಳಿತವು ಪ್ರಾಥಮಿಕ ಪರಿಹಾರ ಕಾರ್ಯ ಕೈಗೊಳ್ಳಲಿದೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ. ಶರಣಪ್ರಕಾಶ ಪಾಟೀಲ್ ಹೇಳಿದರು.
ಮಳೆಯಿಂದ ತೊಂದರೆಗೀಡಾದ ರಾಯಚೂರು ತಾಲ್ಲೂಕಿನ ಜೇಗರಕಲ್ ಮಲ್ಲಾಪುರ ಗ್ರಾಮ, ಮೀರಾಪುರ ಗ್ರಾಮ ಸುತ್ತಮುತ್ತಲಿನ ಪ್ರದೇಶಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಸಂದರ್ಭದಲ್ಲಿ ಈ ವಿಷಯ ತಿಳಿಸಿದರು.
ಒಂದು ವಾರದಲ್ಲಿ ಆದ ಮಳೆ ನಷ್ಟ ಅಂದಾಜು ಇನ್ನೂ ಗೊತ್ತಾಗಿಲ್ಲ. ಆದರೆ, ತುರ್ತು ಪರಿಹಾರ ಹಣ ಬಿಡುಗಡೆ ಮಾಡಲಾಗಿದೆ. ಅಧಿಕಾರಿಗಳಿಂದ ಹಾನಿಯ ಮಾಹಿತಿ ಪಡೆದ ಬಳಿಕ ಪೂರ್ಣ ಹಣ ಬಿಡುಗಡೆ ಮಾಡಲಾಗುತ್ತದೆ ಎಂದು ಹೇಳಿದರು.
ಬೆಳೆ ನಷ್ಟದ ಬಗ್ಗೆ ಕಂದಾಯ ಇಲಾಖೆ ಮತ್ತು ಕೃಷಿ ಇಲಾಖೆ ಅಧಿಕಾರಿಗಳು ಸಮೀಕ್ಷೆ ನಡೆಸಿದ್ದಾರೆ. ಸಮೀಕ್ಷಾ ವರದಿ ಬಳಿಕ ಬೆಳೆ ನಷ್ಟದ ಅಂದಾಜು ಗೊತ್ತಾಗಲಿದೆ ಎಂದು ತಿಳಿಸಿದರು.
ಪರಿಹಾರ ಚೆಕ್ ವಿತರಣೆ: ಜೇಗರಕಲ್ ಮಲ್ಲಾಪುರದಲ್ಲಿ ಮಳೆ ಬರುವಾಗ ಮನೆ ಕುಸಿದು ಸಾವನ್ನಪ್ಪಿದ ನಾಗಪ್ಪ ಅವರ ಕುಟುಂಬ ವರ್ಗಕ್ಕೆ ಸಚಿವ ಶರಣಪ್ರಕಾಶ್ ಒಂದೂವರೆ ಲಕ್ಷ ಮೊತ್ತದ ಪರಿಹಾರ ಚೆಕ್ ವಿತರಿಸಿದರು.
ಹೆಚ್ಚುವರಿ ಜಿಲ್ಲಾಧಿಕಾರಿ ತಿಮ್ಮಪ್ಪ, ಉಪವಿಭಾಗಾಧಿಕಾರಿ ಮಂಜುಶ್ರೀ, ತಹಶಿೀಲ್ದಾರ ಮಹಮ್ಮದ್ ಶಾನೂರ, ಶಾಸಕ ಪ್ರತಾಪಗೌಡ ಪಾಟೀಲ್, ಜಿಪಂ ಉಪಾಧ್ಯಕ್ಷ ಕೆ. ಶರಣಪ್ಪ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ವಸಂತಕುಮಾರ, ಜಿಲ್ಲಾ ಕಾರ್ಯದರ್ಶಿ ಅಮರೇಗೌಡ ಹಂಚಿನಾಳ ಹಾಗೂ ಇತರರಿದ್ದರು.