ರಾಯಬಾಗ: ಸಂವಿಧಾನದಲ್ಲಿರುವ ಎಲ್ಲಾ ಸಮಾನತೆ, ಸ್ವಾತಂತ್ರ್ಯ, ಘನತೆ, ಗೌರವ ಹಕ್ಕುಗಳು ಪ್ರತಿಯೊಬ್ಬರಿಗೂ ಸಿಗುವಂತಾಗಬೇಕು. ಈ ನಿಟ್ಟಿನಲ್ಲಿ ಸಾಮಾನ್ಯ ಜನರಿಗೆ ತಮ್ಮ ಹಕ್ಕುಗಳನ್ನು ತಿಳಿಸಿ ಅವರಲ್ಲಿ ಅರಿವು ಮೂಡಿಸುವ ಉದ್ದೇಶದಿಂದ ದೇಶದಾದ್ಯಂತ ಇಂದು ಮಾನವ ಹಕ್ಕುಗಳ ದಿನಾಚರಣೆಯನ್ನು ಆಚರಿಸಲಾಗುತ್ತಿದೆ ಎಂದು ಪ್ರಧಾನ ದಿವಾಣಿ ನ್ಯಾಯಾಧೀಶೆ ಎಂ.ಎಸ್. ಕಲ್ಪನಾ ಹೇಳಿದರು.
ತಾಲ್ಲೂಕು ಕಾನೂನು ಸೇವಾ ಸಮಿತಿ ಹಾಗೂ ವಕೀಲರ ಸಂಘದ ಸಂಯುಕ್ತ ಆಶ್ರಯದಲ್ಲಿ ಮಂಗಳವಾರ ಇಲ್ಲಿನ ನ್ಯಾಯಾಲಯದ ಆವರಣದಲ್ಲಿ ಏರ್ಪಡಿಸಿದ್ದ ಮಾನವ ಹಕ್ಕುಗಳ ದಿನಾಚರಣೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಜನಸಾಮಾನ್ಯರ ಮೇಲಿನ ದೌರ್ಜನ್ಯಗಳು ಕಡಿಮೆಯಾಗುವಂತೆ ತಿಳಿಸಿ, ಹೆಣ್ಣು ಮಕ್ಕಳ ಮೇಲಾಗುವ ದೌರ್ಜನ್ಯ, ಬಾಲ ಕಾರ್ಮಿಕ ಪದ್ದತಿ, ವೇಶ್ಯಾವಾಟಿಕೆಗಳಲ್ಲಿ ಮಾನವ ಹಕ್ಕುಗಳು ಉಲ್ಲಂಘನೆಯಾಗುತ್ತಿದೆ. ಇದನ್ನು ತಡೆಯಬೇಕು. ಇದರ ಬಗ್ಗೆ ಸಾಮಾನ್ಯ ಜನತೆಗೆ ಮಾನವ ಹಕ್ಕುಗಳ ಬಗ್ಗೆ ಅರಿವು ಮೂಡಿಸುವಂತೆ ಹೇಳಿದರು.
ಪಕ್ಷಗಾರ ಶಬ್ಬೀರ್ ಇಬ್ರಾಹಿಂ ಮುಲ್ಲಾ ಉದ್ಘಾಟಿಸಿದರು, ಸರ್ಕಾರಿ ಅಭಿಯೋಜಕ ವೈ.ಜಿ. ತುಂಗಳ ಹಿರಿಯ ವಕೀಲ ಎಲ್.ಬಿ. ಚೌಗಲಾ, ಮಾತನಾಡಿ, ಸಮಾಜದಲ್ಲಿ ಒಳ್ಳೆಯ ರೀತಿಯಿಂದ ಬದುಕಲು ನಾವು ಕಾನೂನನ್ನು ತಿಳಿದುಕೊಳ್ಳಬೇಕಲ್ಲದೆ, ಈ ನಿಟ್ಟಿನಲ್ಲಿ ತಾಲ್ಲೂಕು ಸೇವಾ ಸಮಿತಿಯಿಂದ ನೆರವು ಪಡೆದು ಕೊಳ್ಳುವಂತೆ ಸಲಹೆ ನೀಡಿದರು.
ಹಿರಿಯ ದಿವಾಣಿ ನ್ಯಾಯಾಧೀಶ ಎಚ್. ಗೋಪಾಲಕೃಷ್ಣ ಅಧ್ಯಕ್ಷತೆ ವಹಿಸಿ ಮಾತನಾಡಿದರು. ವಕೀಲರ ಸಂಘದ ಅಧ್ಯಕ್ಷ ವಿ.ಎಸ್. ಪೂಜಾರಿ, ಉಪಾಧ್ಯಕ್ಷ ಎಸ್.ಎಂ. ಖೆಮಲಾಪುರೆ, ಪಿ.ಎಂ. ಪಾಟೀಲ, ಎನ್.ಎಂ. ಯಡವನ್ನವರ, ಎನ್.ಎಂ, ಮಗದುಮ್, ಎ.ಬಿ. ಮಂಗಸೂಳಿ ಹಾಗೂ ಹಿರಿಯ ವಕೀಲರುಗಳು, ಕಕ್ಷಿಗಾರರು ಉಪಸ್ಥಿತರಿದ್ದರು.