ರಾಯಬಾಗ: ಮುಂದಿನ ಪ್ರಧಾನಿಯನ್ನಾಗಿ ನರೇಂದ್ರ ಮೋದಿಯವರನ್ನು ಬೆಂಬಲಿಸಿ ಬಿಜೆಪಿಯನ್ನು ಅತ್ಯಂತ ಬಹುಮದಿಂದ ಆಯ್ಕೆ ಮಾಡುವಂತೆ ಚಿಕ್ಕೋಡಿ ಲೋಕಸಭಾ ಬಿಜೆಪಿ ಅಭ್ಯರ್ಥಿ ರಮೇಶ ಕತ್ತಿ ಮನವಿ ಮಾಡಿದರು.
ಮಂಗಳವಾರ ಪಟ್ಟಣದ ಮಹಾದೇವ ಕಲ್ಯಾಣ ಮಂಟಪದಲ್ಲಿ ರಾಯಬಾಗ–ಕುಡಚಿ ಮತಕ್ಷೇತ್ರಗಳ ಬಿಜೆಪಿ ಕಾರ್ಯಕರ್ತರ ತಾಲ್ಲೂಕು ಮಟ್ಟದ ಸಮಾವೇಶದಲ್ಲಿ ಮತ ಯಾಚಿಸಿ ತಾವು ಇದೇ 24ರಂದು ನಾಮಪತ್ರ ಸಲ್ಲಿಸಲಿದ್ದು ಅಂದು ತಾವು ಬಂದು ಆಶೀರ್ವದಿಸುವಂತೆ ಮನವಿ ಮಾಡಿದರು.
ಸಮಾವೇಶವನ್ನು ಉದ್ಘಾಟಿಸಿದ ಮಾಜಿ ಸಚಿವ ಶಾಸಕ ಲಕ್ಮಣ ಸವದಿ ಮಾತನಾಡಿ ಕಳೆದ ಸಲ 54 ಸಾವಿರ ಅಂತರದಿಂದ ಆಯ್ಕೆಯಾದ ಸಂಸದ ರಮೇಶ ಕತ್ತಿಯವರನ್ನು ಈ ಸಲ ಲಕ್ಷಕ್ಕೂ ಮಿಕ್ಕಿ ಅಂತರದಿಂದ ಗೆಲ್ಲಿಸು ವಂತೆ ಮನವಿ ಮಾಡಿದರು. ಕಾಂಗ್ರೆಸ್ ಸರ್ಕಾರ ನಿಲ್ಲಿಸಿರುವ ನದಿ ಜೋಡಣೆ ಹಾಗೂ ಪ್ರದಾನ ಮಂತ್ರಿಗಳ ಸಡಕ್ ಯೋಜನೆಯನ್ನು ಪುನಃ ಜಾರಿ ಮಾಡುವಂತೆ ಆಗ್ರಹಿಸಿದರು.
ರಾಜ್ಯಸಭಾ ಸದಸ್ಯ ಪ್ರಭಾಕರ ಕೋರೆ ಮಾತನಾಡಿ ಈ ಸಲದ ಚುನಾವಣೆಗೆ ಇತಿಹಾಸವಿದೆ. ಮೋದಿ ಗಾಳಿ ಮುಂದೆ ಯಾರದೂ ಆಟ ನಡೆಯದು. ಅದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ. 10 ವರ್ಷದ ಕಾಂಗ್ರೆಸ್ ಅಧಿಕಾರದಲ್ಲಿ ಬೃಷ್ಠಚಾರದ ಬಗ್ಗೆ ಜನತೆ ಸೋತಿದ್ದಾರೆ. ಸದ್ಯ ಜನಪ್ರಿಯ ವಾಗಿರುವ ಮೋದಿ ತಕ್ಕ ವ್ಯಕ್ತಿಯಾಗಿದ್ದು ಮೋದಿಯವರನ್ನು ಪ್ರಧಾನಿಯಾಗಿಸಲು ಬಹುಮತದಿಂದ ರಮೇಶ ಕತ್ತಿಯವರನ್ನು ಗೆಲ್ಲಿಸುವಂತೆ ಮನವಿ ಮಾಡಿದರು.
ವಿಧಾನ ಪರಿಷತ್ ಸದಸ್ಯ ಮಹಾಂತೇಶ ಕವಟಗಿಮಠ ಮಾತನಾಡಿ ಕಾಂಗ್ರೆಸ್ ಹಟಾವೋ ದೇಶ ಬಚಾವೋ ಎಂದು ಹೇಳಿ ವಾಜಪೇಯಿಯವರ ಕನಸನ್ನು ನನಸಾಗಿಸಲು ಬಿಜೆಪಿಯನ್ನು ಬೆಂಬಲಿಸುವಂತೆ ಹೇಳಿದರು.
ಶಾಸಕರಾದ ದುರ್ಯೋಧನ ಐಹೊಳೆ, ರಾಜು ಕಾಗೆ, ಮಾಜಿ ಸಚಿವ ಉಮೇಶ ಕತ್ತಿ, ಮಹೇಶ ತಮ್ಮನ್ನವರ, ದುಂಡಪ್ಪ ಬೆಂಡವಾಡ, ಎಲ್.ಬಿ. ಚೌಗಲಾ ಮಾತನಾಡಿದರು.
ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಶಾಂತಾ ಕಲ್ಲೋಳಕರ, ಬಿಜೆಪಿ ಅಲ್ಪಸಂಖ್ಯಾತರ ಅಧ್ಯಕ್ಷ ಮೋದಿನ ಮೋಮಿನ, ಸುರೇಶ ಮಾಳಿ, ಜಿಲ್ಲಾ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ, ಗ್ರಾಮ ಪಂಚಾಯಿತಿ ಸದಸ್ಯರು ಹಾಗೂ ಕುಡಚಿ ರಾಯಬಾಗ ಮತಕ್ಷೇತ್ರದ ಕಾರ್ಯಕರ್ತರು ಸಮಾವೇಶದಲ್ಲಿ ಪಾಲ್ಗೊಂಡಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.