ಫ್ರಾಂಕ್ಫರ್ಟ್ (ಪಿಟಿಐ): ಜಮ್ಮುವಿನಲ್ಲಿ ನಡೆದ ಭಯೋತ್ಪಾದಕರ ದಾಳಿಯನ್ನು ಗುರುವಾರ ಇಲ್ಲಿ ಖಂಡಿಸಿರುವ ಪ್ರಧಾನಿ ಮನಮೋಹನ್ ಸಿಂಗ್, ‘ಶಾಂತಿ ಪ್ರಕ್ರಿಯೆಯನ್ನು ವಿರೋಧಿಸುವ ಶಕ್ತಿಗಳ ಕುಮ್ಮಕ್ಕಿನಿಂದ ಈ ದಾಳಿ ನಡೆದಿದೆ’ ಎಂದು ಟೀಕಿಸಿದ್ದಾರೆ.
ಭಯೋತ್ಪಾದಕರ ದಾಳಿಗೆ ಬಲಿಯಾದ ಸೇನಾ ಅಧಿಕಾರಿ, ಪೊಲೀಸ್ ಸಿಬ್ಬಂದಿ ಮತ್ತು ನಾಗರಿಕರ ಕುಟುಂಬ ವರ್ಗಕ್ಕೆ ಸಾಂತ್ವನ ಹೇಳಿರುವ ಅವರು, ಇಂತಹ ಹೇಯ ಕೃತ್ಯವನು್ನ ಖಂಡಿಸಲು ಯಾವ ಶಬ್ದಗಳೂ ಸಾಲದು ಎಂದಿದ್ದಾರೆ.
ಶಾಂತಿ ಮಾತುಕತೆಗೆ ಅಡ್ಡಿಪಡಿಸುವುದೇ ಈ ದಾಳಿಯ ಉದ್ದೇಶವಾಗಿದೆ. ಆದರೆ ತಾವು ಈಗಾಗಲೇ ನಿಗದಿಯಾಗಿರುವಂತೆ ಭಾನುವಾರ ಪಾಕಿಸ್ತಾನದ ಪ್ರಧಾನಿ ನವಾಜ್ ಷರೀಫ್ ಅವರ ಜತೆ ನ್ಯೂಯಾರ್ಕ್ನಲಿ್ಲ ಮಾತುಕತೆ ನಡೆಸುವುದಾಗಿ ಸಿಂಗ್ ಸ್ಪಷ್ಟಪಡಿಸಿದ್ದಾರೆ.
‘ಗಡಿಯಾಚಿಗಿನ ರಾಷ್ಟ್ರದ ಕುಮ್ಮಕ್ಕಿನಿಂದ ನಡೆಯುತ್ತಿರುವ ಭಯೋತ್ಪಾದಕ ಹಾವಳಿಯನ್ನು ತಡೆಯಲು ಶತಸಿದ್ಧ’ ಎಂದಿರುವ ಅವರು, ಪಾಕ್ ಹೆಸರನ್ನು ಪ್ರಸ್ತಾಪಿಸದೆ ಭಯೋತ್ಪಾದಕ ಚಟುವಟಿಕೆಗಳಿಗೆ ಆ ದೇಶವೇ ಕುಮ್ಮಕ್ಕು ನೀಡುತ್ತಿದೆ ಎಂಬುದನು್ನ ಸೂಚ್ಯವಾಗಿ ಹೇಳಿದ್ದಾರೆ.
‘ಗಡಿಭಾಗದಲ್ಲಿ ಪದೆಪದೇ ಪ್ರಚೋದನಾಕಾರಿ ದಾಳಿ ನಡೆಯುತ್ತಿದ್ದು, ಈಗ ಮತ್ತೊಮ್ಮೆ ಭಯೋತ್ಪಾದಕರು ಹೇಯ ಕೃತ್ಯ ಎಸಗಿದ್ದಾರೆ’ ಎಂದು ಅಮೆರಿಕಕ್ಕೆ ತೆರಳುತ್ತಿದ್ದ ಮಾರ್ಗಮಧ್ಯೆ ಅವರು ತಿಳಿಸಿದ್ದಾರೆ.
‘ಗಡಿ ಭಾಗದ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ನಾವು ನಡೆಸುವ ಮಾತುಕತೆಯ ಪ್ರಯತ್ನಕ್ಕೆ ಇಂತಹ ದಾಳಿಯಿಂದ ತಡೆ ಒಡ್ಡಲು ಸಾಧ್ಯವಿಲ್ಲ’ ಎಂದು ಅವರು ಹೇಳಿದ್ದಾರೆ.
ವಿಶ್ವಸಂಸ್ಥೆಯ ಮಹಾಸಭೆಯಲ್ಲಿ ಪಾಲ್ಗೊಳ್ಳಲು ನ್ಯೂಯಾರ್ಕ್ಗೆ ಫ್ರಾಂಕ್ಫರ್ಟ್ ಮೂಲಕ ಪ್ರಯಾಣಿ ಸುವ ವೇಳೆ ಬುಧವಾರ ರಾತ್ರಿ ಇಲ್ಲಿ ಉಳಿದುಕೊಂಡ ಪ್ರಧಾನಿ, ಗುರುವಾರ ಪ್ರಯಾಣವನ್ನು ಮುಂದುವರಿಸಿದರು.
ಹುಟ್ಟುಹಬ್ಬಕ್ಕೆ ಕರಿಮೋಡ
ಏರ್ ಇಂಡಿಯಾ ವಿಶೇಷ ವಿಮಾನ (ಪಿಟಿಐ): ಜಮ್ಮುವಿನಲ್ಲಿ ಉಗ್ರರ ದಾಳಿ ನಡೆದ ಕಾರಣ ಪ್ರಧಾನಿ ಮನಮೋಹನ್ ಸಿಂಗ್ ಅವರು ತಮ್ಮ 81ನೇ ಹುಟ್ಟು ಹಬ್ಬವನ್ನು ಆಚರಿಸಿಕೊಂಡಿಲ್ಲ.
ಅವರು ಒಬಾಮಾ ಜತೆ ಮಾತುಕತೆ ನಡೆಸಲು ಅಮೆರಿಕಕ್ಕೆ ತೆರಳುವ ಮಾರ್ಗಮಧೆ್ಯ ಏರ್ ಇಂಡಿಯಾ ವಿಮಾನದಲ್ಲಿ ಕೇಕ್ ಕತ್ತರಿಸಲಿಲ್ಲ. ಉಗ್ರರ ದಾಳಿಯಿಂದ 12 ಜನ ಸಾವನ್ನಪ್ಪಿರುವುದರಿಂದ ಪ್ರಧಾನಿ, ವಿಮಾನದಲ್ಲಿ ಬೇಸರದಲ್ಲಿದ್ದರು ಎನ್ನಲಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.