ಮಾನ್ವಿ: ಸಹಕಾರಿ ಸಂಘಗಳು ಹಾಗೂ ಬ್ಯಾಂಕ್ಗಳ ಸ್ಥಾಪನೆಯಿಂದ ಪ್ರತಿಯೊಬ್ಬರು ಸ್ವಾವಲಂಬಿ ಬದುಕು ಸಾಗಿಸಲು ಮತ್ತು ಯುವಕರ ನಿರುದ್ಯೋಗ ಸಮಸ್ಯೆ ನಿವಾರಿಸಲು ಸಾಧ್ಯ ಎಂದು ಮಾಜಿ ಶಾಸಕ ಬಸನಗೌಡ ಬ್ಯಾಗವಾಟ ಅಭಿಪ್ರಾಯಪಟ್ಟರು.
ಭಾನುವಾರ ಪಟ್ಟಣದ ರಿಕ್ರಿಯೇಷನ್ ಕ್ಲಬ್ ಆವರಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಚನ್ನಬಸವ ಪತ್ತಿನ ಸೌಹಾರ್ದ ಸಹಕಾರಿ ನಿಯಮಿತದ ವಾರ್ಷಿಕ ಸಭೆಯಲ್ಲಿ ಅವರು ಮಾತನಾಡಿದರು. ಗ್ರಾಮೀಣ ಜನರಲ್ಲಿ ಸಹಕಾರಿ ತತ್ವದ ಮಹತ್ವದ ಕುರಿತು ಜಾಗೃತಿ ಮೂಡಿಸಬೇಕು. ಸಹಕಾರಿ ಬ್ಯಾಂಕ್ಗಳು ಗ್ರಾಮೀಣ ಪ್ರದೇಶಗಳಲ್ಲಿ ಶಾಖೆಗಳನ್ನು ಸ್ಥಾಪಿಸುವ ಮೂಲಕ ಅಲ್ಲಿನ ರೈತರು ಹಾಗೂ ವರ್ತಕರಿಗೆ ಅನುಕೂಲ ಕಲ್ಪಿಸಬೇಕು ಎಂದು ಅವರು ಸಲಹೆ ನೀಡಿದರು.
ಪ್ರಾಸ್ತಾವಿಕ ಮಾತನಾಡಿದ ಬ್ಯಾಂಕಿನ ನಿರ್ದೇಶಕ ಮಲ್ಲನಗೌಡ ನಕ್ಕುಂದಿ, ಚೆನ್ನಬಸವ ಸೌಹಾರ್ದ ಸಹಕಾರಿ ಸಂಘವು 2012–-13ನೇ ಸಾಲಿನಲ್ಲಿ 20ಲಕ್ಷ ಲಾಭಗಳಿಸಿ ಸದಸ್ಯರಿಗೆ ಶೇ 20 ಲಾಭಾಂಶ ವಿತರಿಸಿದೆ. ಸಂಘದ ಬೆಳವಣಿಗೆಗೆ ಎಲ್ಲರ ಪರಿಶ್ರಮ ಕಾರಣ ಎಂದು ತಿಳಿಸಿದರು.
ಬ್ಯಾಂಕಿನ ಶಾಖಾ ವ್ಯವಸ್ಥಾಪಕ ಶರಣಬಸವ ವಾರ್ಷಿಕ ವರದಿ ಮಂಡಿಸಿದರು. ಸಹಕಾರಿ ಸಂಘದ ಅಧ್ಯಕ್ಷ ಶೇಖರಪ್ಪ ಪಾಟೀಲ ಅಧ್ಯಕ್ಷತೆ ವಹಿಸಿದ್ದರು.
ಅಡವಿ ಅಮರೇಶ್ವರ ಸುಕ್ಷೇತ್ರದ ಶಾಂತಮಲ್ಲ ಶಿವಾಚಾರ್ಯ ಸ್ವಾಮೀಜಿ ಸಭೆಯನ್ನು ಉದ್ಘಾಟಿಸಿದರು.
ಮಸ್ಕಿಯ ಭ್ರಮರಾಂಬ ಸಹಕಾರಿ ಬ್ಯಾಂಕಿನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ವೀರೇಶ ಹಿರೇಮಠ, ಸಂಘದ ಉಪಾಧ್ಯಕ್ಷೆ ನಾಗರತ್ನಮ್ಮ ಬಿ.ಪಾಟೀಲ, ಕರ್ನಾಟಕ ರಾಜ್ಯ ರೈತ ಸಂಘದ ಅಧ್ಯಕ್ಷ ಚಾಮರಸ ಪಾಟೀಲ, ಟಿಎಪಿಸಿಎಂಎಸ್ ಅಧ್ಯಕ್ಷ ಎಸ್.ತಿಮ್ಮಾರೆಡ್ಡಿ ಭೋಗಾವತಿ, ಚುಕ್ಕಿ ಸೂಗಪ್ಪ ಸಿರವಾರ, ಸಂಘದ ನಿರ್ದೇಶಕ ಮುದ್ದಪ್ಪ ಸಾಹುಕಾರ, ಕೆ.ಶರಣಬಸಪ್ಪ, ಎನ್.ಶರಣಬಸವ, ವೆಂಕಟರಾಯಗೌಡ ಸಂಗಾಪುರ, ಜೆ.ಅಮರೇಗೌಡ, ಮಲ್ಲನಗೌಡ ಇದ್ದರು. ಅಮರೇಗೌಡ ಜಾನೇಕಲ್ ಸ್ವಾಗತಿಸಿದರು. ರೇವಣಸಿದ್ದಯ್ಯ ಹಿರೇಮಠ ನಿರೂಪಿಸಿದರು.