ಬೆಳಗಾವಿ: ‘ವಿದ್ಯಾರ್ಥಿಗಳು ಸಾಧನೆಯ ಮಾರ್ಗದಲ್ಲಿ ಸಾಗುವಾಗ ತಮ್ಮ ಉದ್ದೇಶಿತ ಗುರಿಯ ಸ್ಪಷ್ಟ ತಿಳಿವಳಿಕೆ ಪಡೆಯುವುದು ಅತ್ಯಂತ ಮುಖ್ಯ’ ಎಂದು ವಾಯುಪಡೆ ನಿವೃತ್ತ ಕ್ಯಾಪ್ಟನ್ ಎಂ.ಎಸ್.ದೇಶಪಾಂಡೆ ಹೇಳಿದರು.
ಇಲ್ಲಿನ ಜೆಜಿಐ ಸಂಸ್ಥೆಯ ಜೈನ ಪದವಿಪೂರ್ವ ಮಹಾವಿದ್ಯಾಲಯದಲ್ಲಿ ಎರಡು ದಿನಗಳ ವರೆಗೆ ಹಮ್ಮಿಕೊಂಡಿರುವ ವಿದ್ಯಾರ್ಥಿಗಳ ಪ್ರತಿಭಾ ಅನ್ವೇಷಣೆಯ ಉತ್ಕರ್ಷ–-2013 ಸಾಂಸ್ಕೃತಿಕ ಉತ್ಸವಕ್ಕೆ ಶುಕ್ರವಾರ ಚಾಲನೆ ನೀಡಿ ಅವರು ಮಾತನಾಡಿದರು.
ಉದ್ದೇಶಿತ ಗುರಿಯ ತಿಳಿವಳಿಕೆಯೊಂದಿಗೆ ಗುರಿ ಸಾಧನೆಯ ಶಿಸ್ತು ಇರಬೇಕು. ಒಳ್ಳೆಯದನ್ನು ಸ್ವೀಕರಿಸುವ ಸ್ವಾಭಾವ ಜಾಗೃತವಾಗಿರಬೇಕು ಎಂದರು.
ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ನಿರ್ದೇಶಕ ಪ್ರೊ. ಆರ್.ಜಿ. ಧಾರವಾಡಕರ, ಆಯಾ ಕಾಲಮಾನದ ಒತ್ತಡದಿಂದ ವಿದ್ಯಾರ್ಥಿಗಳು ವೈವಿಧ್ಯಮಯ ಸೃಜನಶೀಲತೆಯ ರೂಪ ಪಡೆಯುತ್ತಾರೆ. ಅದರಲ್ಲೂ ವಿಶೇಷವಾಗಿ ಬೆಳಗಾವಿಯ ವಿದ್ಯಾರ್ಥಿಗಳು ಸಾಂಸ್ಕೃತಿಕ ವೈವಿಧ್ಯತೆಯಿಂದ ವಿಭಿನ್ನ ಹಾಗೂ ತೀವ್ರವಾದ ವೇಗದಲ್ಲಿದ್ದಾರೆ. ಇಂಥ ವೈವಿಧ್ಯಮಯ ಪ್ರತಿಭೆಯನ್ನು ಪ್ರೋತ್ಸಾಹಿಸಿ ಅಭಿವ್ಯಕ್ತಿಸಲು ಜೆಜಿಐ ಸಂಸ್ಥೆ ಸೂಕ್ತ ವೇದಿಕೆಗಳನ್ನು ಕಲ್ಪಿಸುತ್ತ ಬಂದಿದೆ. ಇನ್ನೂ ಮುಂದೆಯೂ ಉತ್ತಮವಾದ ವೇದಿಕೆಗಳನ್ನು ಕಲ್ಪಿಸಲು ಬದ್ಧವಾಗಿದೆ ಎಂದು ಹೇಳಿದರು.
ಜೆಜಿಐ ಕುಲಸಚಿವ ಪ್ರೊ. ಕೆ.ಜಿ. ಮಳಲಿ ಮಾತನಾಡಿದರು. ಪ್ರೊ. ಅಮೇಯ ದೇಸಾಯಿ ಪ್ರಸ್ತಾವಿಕವಾಗಿ ಮಾತನಾಡಿದರು. ಪ್ರಾಚಾರ್ಯ ಪ್ರೊ. ಎ.ಕೆ. ಜೋಶಿ ಸ್ವಾಗತಿಸಿದರು. ಪ್ರೊ. ನೋಯಲ್ ಬೋರ್ಜಸ್ ನಿರೂಪಿಸಿದರು. ಪ್ರೊ. ಎಂ.ಎಲ್. ಪಾಟೀಲ ವಂದಿಸಿದರು.