ಉಡುಪಿ: ಯಕ್ಷಗಾನ ಸಮಷ್ಠಿಯ ಕಲೆಯಾಗಿದ್ದು, ನಾಟ್ಯ– ನೃತ್ಯ, ಅಭಿನಯ ಮಾತುಗಾರಿಕೆ ಎಲ್ಲವನ್ನೂ ಒಳಗೊಂಡಿದೆ’ ಎಂದು ಪರ್ಯಾಯ ಸೋದೆ ವಾದಿರಾಜ ಮಠದ ವಿಶ್ವವಲ್ಲಭ ಸ್ವಾಮೀಜಿ ಹೇಳಿದರು.
ಉಡುಪಿ ಶ್ರೀ ಕೃಷ್ಣಮಠ, ಪರ್ಯಾಯ ಸೋದೆ ವಾದಿರಾಜ ಮಠದ ಆಶ್ರಯದಲ್ಲಿ ಶಿವಮೊಗ್ಗದ ನಾಟ್ಯಶ್ರೀ ಕಲಾತಂಡ ರಾಜಾಂಗಣದಲ್ಲಿ ಭಾನು ವಾರ ಏರ್ಪಡಿಸಿದ್ದ ’ಯಕ್ಷೋತ್ಸವ 2013’ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಸಾಧಕರಿಗೆ ಪ್ರಶಸ್ತಿ ಪ್ರದಾನ ಮಾಡಿ ಅವರು ಮಾತನಾಡಿದರು.
ಯಕ್ಷಗಾನದಲ್ಲಿ ಬದಲಾವಣೆಗಳಾ ಗುತ್ತಿದ್ದು, ಮಹತ್ವ ಕಡಿಮೆಯಾಗುತ್ತಿದೆ. ಸಾಮಾಜಿಕ ಪ್ರಸಂಗಗಳಲ್ಲಿ ಯಕ್ಷಗಾನದ ಗಾಂಭೀರ್ಯ ಮರೆಯಾಗುತ್ತಿದೆ ಎಂದು ಅವರು ಹೇಳಿದರು.
ಎಂಜಿಎಂ ಯಕ್ಷಗಾನ ಕೇಂದ್ರಕ್ಕೆ ‘ಯಕ್ಷಧನ್ಯತಾ ಪ್ರಶಸ್ತಿ’, ಮೈಸೂರಿನ ವೇದ ಶಾಸ್ತ್ರ ಪೋಷಣೆ ಸಭಾದ ಕಾರ್ಯದರ್ಶಿ ವಿದ್ವಾನ್ ಎ.ಎಂ ಚಂದ್ರಶೇಖರ್ ಮತ್ತು ಸಾಮಾಜಿಕ ಕ್ಷೇತ್ರದ ಸಾಧನೆಗಾಗಿ ಪದವಿ ಪೂರ್ವ ಶಿಕ್ಷಣ ಇಲಾಖೆಯ ನಿವೃತ್ತ ಶಾಖಾಧಿಕಾರಿ ವಿ.ಎಸ್.ರಾಮಮೂರ್ತಿ ಅವರಿಗೆ ‘ವಿದ್ವತ್ ಸನ್ಮಾನ’ ಹಾಗೂ ಯಕ್ಷಗಾನ ಕಲಾವಿದ ಅಶೋಕ್ ಭಟ್ ಸಿದ್ಧಾಪುರ ಅವರಿಗೆ ‘ನಾಟ್ಯಶ್ರೀ ಪುರಸ್ಕಾರ’ವನ್ನು ನೀಡಿ ಗೌರವಿಸಿದರು.
ಶಾಸಕ ಪ್ರಮೋದ್ ಮಧ್ವರಾಜ್, ಹೊರನಾಡು ಆದಿಶಕ್ತಿ ಅನ್ನ ಪೂರ್ಣೇಶ್ವರಿ ದೇವಸ್ಥಾನದ ಧರ್ಮ ದರ್ಶಿ ಡಾ. ಭೀಮೇಶ್ವರ ಜೋಷಿ, ಭಾರತೀಯ ಸಂಸ್ಕೃತಿ ಪ್ರತಿಷ್ಠಾನದ ಅಧ್ಯಕ್ಷ ರಾಜಶೇಖರ ಹೆಬ್ಬಾರ್, ಮಂಗಳೂರು ಕಲ್ಕೂರ ಪ್ರತಿಷ್ಠಾನದ ಅಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ, ಯಕ್ಷಗಾನ ಕಲಾ ರಂಗದ ಅಧ್ಯಕ್ಷ ತಲ್ಲೂರು ಶಿವರಾಮ ಶೆಟ್ಟಿ, ಸಾಹಿತಿ ಎಚ್. ಜನಾರ್ದನ ಹಂದೆ, ಮಣಿಪಾಲ ಎಂಐಟಿ ಪ್ರಾಧ್ಯಾಪಕ ಎಸ್.ವಿ. ಉದಯ್ ಕುಮಾರ್ ಶೆಟ್ಟಿ, ಯಕ್ಷಗುರು ಬನ್ನಂಜೆ ಸಂಜೀವ ಸುವರ್ಣ ಉಪಸ್ಥಿತರಿದ್ದರು.
ನಾಟ್ಯಶ್ರೀ ಸಂಸ್ಥೆಯ ಸಂಚಾಲಕ ವಿದ್ವಾನ್ ದತ್ತಮೂರ್ತಿ ಭಟ್ ಸ್ವಾಗತಿ ಸಿದರು. ಅರ್ಥಧಾರಿ ನಾರಾಯಣ ಯಾಜಿ ಸಾಲೇಬೈಲ್ ಅವರು ಅಭಿನಂದನಾ ಭಾಷಣ ಮಾಡಿದರು. ಜಿ.ಪಿ. ಪ್ರಭಾಕರ ಪ್ರಶಸ್ತಿ ಪತ್ರ ವಾಚಿಸಿದರು. ಸದಾನಂದ ಶರ್ಮ ಕಾರ್ಯಕ್ರಮ ನಿರೂಪಿಸಿದರು.
ಕಾರ್ಯಕ್ರಮದ ಬಳಿಕ ‘ಕರ್ಣ ಪರ್ವ’ ಯಕ್ಷಗಾನ ಪ್ರದರ್ಶನ ನಡೆಯಿತು.