ಸೊರಬ: ಅನವಶ್ಯಕ ಹವ್ಯಾಸ ಬೆಳೆಸಿಕೊಳ್ಳುವ ಬದಲು ಆರೋಗ್ಯಕರವಾದ ಕ್ರೀಡೆಯಲ್ಲಿ ಪ್ರತಿಯೊಬ್ಬರು ತೊಡಗಿಕೊಳ್ಳಬೇಕು ಎಂದು ತಾಲ್ಲೂಕು ಪಂಚಾಯ್ತಿ ಅಧ್ಯಕ್ಷೆ ನೀಲಮ್ಮ ಸುರೇಶ್ ಸಲಹೆ ನೀಡಿದರು.
ಪಟ್ಟಣದ ಬಂಗಾರಪ್ಪ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ತಾಲ್ಲೂಕು ಮಟ್ಟದ ದಸರಾ ಕ್ರೀಡಾಕೂಟವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಪ್ರಶಸ್ತಿಗೋಸ್ಕರ ಮಾತ್ರ ಆಟದಲ್ಲಿ ಭಾಗವಹಿಸುವ ಮನೋಭಾವ ಇರಬಾರದು. ಸ್ಪರ್ಧಾತ್ಮಕ ಮನೋಭಾವ ಬೆಳೆಯಲು ಕ್ರೀಡೆ ವ್ಯಕ್ತಿಗೆ ಉತ್ತೇಜನ ನೀಡಬಲ್ಲದು ಎಂದರು.
ಚಿಂತಕ ಟಿ. ರಾಜಪ್ಪ ಮಾಸ್ತರ್ ಮಾತನಾಡಿದರು. ಕ್ರೀಡಾ ಮತ್ತು ಯುವ ಜನ ಇಲಾಖೆಯ ಅಧಿಕಾರಿ ಬಣಗಾರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ತಾಲ್ಲೂಕು ಶಾಖೆಯ ನೌಕರರ ಸಂಘದ ಅಧ್ಯಕ್ಷ ಹೊಳೆಲಿಂಗಪ್ಪ, ಯುವ ಒಕ್ಕೂಟಗಳ ಸಂಘದ ಅಧ್ಯಕ್ಷ ಕುಮಾರಸ್ವಾಮಿ, ನಿವೃತ್ತ ದೈಹಿಕ ಶಿಕ್ಷಕ ಬಸವಣ್ಯಪ್ಪ, ಸುರೇಶ್, ಮಹಾದೇವಪ್ಪ, ಯಶೋಧರ ಮೂರ್ತಿ, ಮಹೇಶ್, ಕೆರೆಸ್ವಾಮಿ, ಕರವೇ ಅಧ್ಯಕ್ಷ ಬಲೀಂದ್ರಪ್ಪ ಮತ್ತಿತರು ಹಾಜರಿದ್ದರು.