ಮೈಸೂರು: ಕೊಳಚೆ ನೀರು ಕಾವೇರಿ ನದಿ ಸೇರುವುದನ್ನು ತಪ್ಪಿಸಲು ಸಾಧ್ಯ ವಿರುವ ಎಲ್ಲ ರೀತಿಯ ನೆರವನ್ನು ನೀಡ ಲಾಗುವುದು ಎಂದು ನಗರಾಭಿವೃದ್ಧಿ ಸಚಿವ ರೋಷನ್ಬೇಗ್ ಇಲ್ಲಿ ಗುರುವಾರ ಭರವಸೆ ನೀಡಿದರು. ಕೆಸರೆಯಲ್ಲಿ ನಿರ್ಮಾಣವಾಗುತ್ತಿರುವ ಕೊಳಚೆನೀರು ಶುದ್ಧೀಕರಣ ಘಟಕಕ್ಕೆ ಭೇಟಿ ಅವರು ಪರಿಶೀಲಿಸಿದರು.
‘ಮುಡಾ’ ಹಾಗೂ ಖಾಸಗಿ ಬಡಾವಣೆಗಳು ಈ ಭಾಗದಲ್ಲಿ ಅಸ್ತಿತ್ವಕ್ಕೆ ಬಂದ ನಂತರ ಒಳಚರಂಡಿ ನೀರನ್ನು ಮುಖ್ಯ ಕೊಳವೆಗೆ ಸೇರಿಸದೇ ಎಲ್ಲೆಂದರಲ್ಲಿ ಬಿಡಲಾಯಿತು. ಇದರಿಂದ ನಗುವಿನಹಳ್ಳಿ ಬಳಿ ಕಾವೇರಿ ನದಿಗೆ ಕೊಳಚೆ ನೀರು ಸೇರುತ್ತಿದೆ ಎಂದು ಶಾಸಕ ವಾಸು ವಿವರಿಸಿದರು.
ದಳವಾಯಿ ಕೆರೆಗೂ ಒಳಚರಂಡಿ ನೀರು ಸೇರುತ್ತಿದೆ. ನಗರದ ಎಲ್ಲ ಕೊಳಚೆ ನೀರು ಶುದ್ಧೀಕರಣ ಘಟಕಕ್ಕೆ ಬರುವಂತೆ ಮಾಡಲು ಸದ್ಯ ಇರುವ ₹ 24 ಕೋಟಿ ಮೊತ್ತದ ಯೋಜನೆಯಿಂದ ಆಗುವುದಿಲ್ಲ. ಇದಕ್ಕೆ ಕನಿಷ್ಠ ಎಂದರೂ ₹ 75 ಕೋಟಿ ಹಣ ಬೇಕಾಗುತ್ತದೆ ಎಂದು ಪಾಲಿಕೆ ಆಯುಕ್ತ ಜಿ.ಜಗದೀಶ್ ತಿಳಿಸಿದರು.
ಎಲ್ಲ ರೀತಿಯ ನೆರವು ನೀಡಲು ಸಿದ್ಧ. ರೂಪುಗೊಳ್ಳುವ ಯೋಜನೆಯಿಂದ ಒಳಚರಂಡಿ ನೀರು ನದಿಗೆ ಸೇರುವು ದನ್ನು ತಡೆಯುವಂತಹ ಕೆಲಸ ಆಗಬೇಕು ಎಂದು ರೋಷನ್ ಬೇಗ್ ಸೂಚಿಸಿದರು.
ಹಳೇ ಉಂಡವಾಡಿ ಯೋಜನೆ ಪರಿಶೀಲನೆ: ನಗರಕ್ಕೆ ನೀರು ಪೂರೈಸುವ ಹಳೇ ಉಂಡವಾಡಿ ಯೋಜನೆ ಜಾರಿ ಕುರಿತು ಇರುವ ಅಡೆತಡೆಗಳ ಕುರಿತು ರೋಷನ್ ಬೇಗ್ ಮಾಹಿತಿ ಪಡೆದರು. ಕೆಐಎಡಿಬಿ ಬೇರೊಂದು ಸಂಸ್ಥೆಗೆ ಉದ್ದೇಶಿತ ಜಾಗವನ್ನು ನೀಡಿದೆ. ಇದನ್ನು ಡಿನೋಟಿಫೈ ಮಾಡಬೇಕಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು. ಕೆಐಎಡಿಬಿ ಅಧಿಕಾರಿಗಳನ್ನು ದೂರವಾಣಿ ಮೂಲಕ ಸಂಪರ್ಕಿಸಿದ ಸಚಿವರು ಕಡತವನ್ನು ಸರ್ಕಾರಕ್ಕೆ ಕಳುಹಿಸಲು ಸೂಚಿಸಿದರು.
‘ಟ್ರಿಣ್ಟ್ರಿಣ್’ ಜಾರಿಗೆ ಗಡುವು: ಅಶೋಕಪುರಂನಲ್ಲಿರುವ ‘ಟ್ರಿಣ್ ಟ್ರಿಣ್’ ಬೈಸಿಕಲ್ ನಿಲ್ದಾಣ ಪರಿಶೀಲಿಸಿದ ರೋಷನ್ ಬೇಗ್, ಯೋಜನೆ ಜಾರಿ ವಿಳಂಬವಾಗಿರುವುದಕ್ಕೆ ಅಸಮಾಧಾನ ವ್ಯಕ್ತಪಡಿಸಿದರು.
ಒಟ್ಟು 48 ನಿಲ್ದಾಣಗಳ ಪೈಕಿ 38 ನಿಲ್ದಾಣಗಳು ಈಗಾಗಲೇ ಸಿದ್ಧವಾಗಿವೆ. ಇನ್ನು 10 ನಿಲ್ದಾಣಗಳ ನಿರ್ಮಾಣ ಕೆಲಸ ಪ್ರಗತಿಯಲ್ಲಿದೆ ಎಂದು ಜಗದೀಶ್ ಮಾಹಿತಿ ನೀಡಿದರು. ಒಂದು ತಿಂಗಳಲ್ಲಿ ಯೋಜನೆ ಜಾರಿಯಾಗಲೇಬೇಕು ಎಂದು ರೋಷನ್ ಬೇಗ್ ಸೂಚಿಸಿದರು.
ಪ್ರಗತಿ ಪರಿಶೀಲನೆ: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಪ್ರಗತಿ ಪರಿಶೀಲನೆ ನಡೆಸಿದ ಸಚಿವರು, ‘ಗುಂಪು ಮನೆ’ ಯೋಜನೆ ಜಾರಿಯಾಗಿಲ್ಲ ದಿರುವುದಕ್ಕೆ ಅತೃಪ್ತಿ ವ್ಯಕ್ತಪಡಿಸಿದರು.
‘ಗುಂಪು ಮನೆ’ ಹೊಸ ಯೋಜನೆ ಯಾಗಿದ್ದು, ಇದಕ್ಕೆ ಸೂಕ್ತ ನಿಯಮಾವಳಿ ರೂಪಿಸುವಂತೆ ನಗರಾಭಿವೃದ್ಧಿ ಇಲಾಖೆಗೆ ಪ್ರಸ್ತಾವ ಸಲ್ಲಿಸಲಾಗಿದೆ ಎಂದು ‘ಮುಡಾ’ ಆಯುಕ್ತ ಡಾ.ಎಂ.ಮಹೇಶ್ ತಿಳಿಸಿದರು. ಆದಷ್ಟು ಶೀಘ್ರ ನಿಯಮಾವಳಿ ರೂಪಿಸು ವಂತೆ ಇಲಾಖೆಯ ಅಧಿಕಾರಿಗಳಿಗೆ ಸಚಿವರು ಸೂಚಿಸಿದರು.
ನಾಗರಿಕ ಸೇವಾ ನಿವೇಶನ (ಸಿ.ಎ) ಗಳಲ್ಲಿ ಗಿಡಗಂಟಿಗಳು ಬೆಳೆದಿವೆ.
ಈ ಕುರಿತು ಅರ್ಹರಿಗೆ ನಿವೇಶನ ನೀಡ ಬೇಕು. ಆರ್.ಟಿ.ನಗರ ಕುರಿತ ಪ್ರಕರಣ ಗಳ ಇತ್ಯರ್ಥಕ್ಕೆ ಆದ್ಯತೆ ನೀಡಬೇಕು. ಬಲ್ಲಹಳ್ಳಿ ಹಾಗೂ ಇತರ ಬಡಾವಣೆ ಯೋಜನೆಗಳನ್ನು ಜಾರಿಗೊಳಿಸುವ ಪ್ರಯತ್ನ ಚುರುಕುಗೊಳಿಸಬೇಕು. ನಿವೇಶನ ಹಂಚಿಕೆಗೆ ಕ್ರಮ ವಹಿಸಬೇಕು ಎಂದು ಸೂಚನೆ ನೀಡಿದ್ದಾರೆ ಎಂದು ಗೊತ್ತಾಗಿದೆ.
ಮತ್ತೆರಡು ತ್ಯಾಜ್ಯ ವಿಲೇವಾರಿ ಘಟಕ ಶೀಘ್ರ
ವಿದ್ಯಾರಣ್ಯಪುರಂನಲ್ಲಿರುವ ತ್ಯಾಜ್ಯ ವಿಲೇವಾರಿ ಘಟಕಕ್ಕೆ ಭೇಟಿ ನೀಡಿದ ಸಚಿವ ರೋಷನ್ ಬೇಗ್, ಅಲ್ಲಿನ ಪರಿಸ್ಥಿತಿ ಕಂಡು ಬೇಸರ ವ್ಯಕ್ತಪಡಿಸಿದರು. ಇರುವ ಒಂದು ಘಟಕದಿಂದ ಕಸ ವಿಲೇವಾರಿ ಸಾಧ್ಯವಾಗುತ್ತಿಲ್ಲ ಎಂದು ಶಾಸಕ ಎಂ.ಕೆ.ಸೋಮಶೇಖರ್ ಅಸಹಾಯಕತೆ ವ್ಯಕ್ತಪಡಿಸಿದರು. ಕೆಸರೆ ಹಾಗೂ ರಾಯನಕೆರೆಗಳಲ್ಲಿ ತ್ಯಾಜ್ಯ ವಿಲೇವಾರಿ ಘಟಕ ನಿರ್ಮಿಸಲು ಶೀಘ್ರ ಮಂಜೂರಾತಿ ನೀಡಲಾಗುವುದು ಎಂದು ರೋಷನ್ ಬೇಗ್ ಭರವಸೆ ನೀಡಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.