ಬೆಂಗಳೂರು: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, 104 ಪುಟಗಳ ಬಜೆಟ್ ಭಾಷಣವನ್ನು ಸತತ 1ಗಂಟೆ 47 ನಿಮಿಷಗಳಲ್ಲಿ ನಿರರ್ಗಳವಾಗಿ ಓದಿದರು.
ಎಂದಿನಂತೆ ಬಿಳಿ ದಿರಿಸಿನ ಮೇಲೆ ಹಸಿರು ಶಾಲು ಹೊದ್ದು ಸದನಕ್ಕೆ ಬಂದ ಯಡಿಯೂರಪ್ಪ ಬೆಳಿಗ್ಗೆ 11 ಗಂಟೆಗೆ ಬಜೆಟ್ ಮಂಡನೆ ಆರಂಭಿಸಿದರು.
‘ರಾಷ್ಟ್ರಪಿತ ಮಹಾತ್ಮ ಗಾಂಧಿ ಅವರ 150ನೇ ವರ್ಷಾಚರಣೆ ಸಂದರ್ಭದಲ್ಲಿ ಸಮಗ್ರ ಸಮತೋಲಿತ ಹಾಗೂ ಸಾಮಾಜಿಕ ನ್ಯಾಯದ ಬಜೆಟ್ ಮಂಡಿಸುವ ಅವಕಾಶ ಕಲ್ಪಿಸಿದ್ದಕ್ಕೆ ರಾಜ್ಯದ ಜನತೆಗೆ ಚಿರಋಣಿಯಾಗಿದ್ದೇನೆ’ ಎಂದು ಸ್ಮರಿಸಿದರು.
ಏರಿಳಿತವಿಲ್ಲದೇ ಒಂದೇ ಓಘದಲ್ಲಿ ಬಜೆಟ್ ಓದಿದ ಅವರು ಒಮ್ಮೆಯೂ ನೀರನ್ನು ಕುಡಿಯಲಿಲ್ಲ. ನಡುನಡುವೆ ಶಾಲು ಸರಿಪಡಿಸಿಕೊಂಡರು.
82ನೇ ಪುಟದಲ್ಲಿ ನಾಡಪ್ರಭು ಕೆಂಪೇಗೌಡರ 100 ಅಡಿ ಎತ್ತರದ ಕಂಚಿನ ಪ್ರತಿಮೆಯನ್ನು ₹ 66 ಕೋಟಿ ವೆಚ್ಚದಲ್ಲಿ ಸ್ಥಾಪಿಸುವ ಕುರಿತ ವಿವರ ಓದದೇ ಬಿಟ್ಟರು. ಪಕ್ಷದ ಕೆಲ ಶಾಸಕರು ಈ ಲೋಪವನ್ನು ಗಮನಕ್ಕೆ ತಂದರು. ಬಳಿಕ ಈ ಪ್ಯಾರಾವನ್ನು ಯಡಿಯೂರಪ್ಪ ಓದಿದಾಗ ಪಕ್ಷದ ಶಾಸಕರು ಮೇಜು ಕುಟ್ಟಿ ಸ್ವಾಗತಿಸಿದರು.
ಭಾಷಣ ಮುಗಿಸುವಷ್ಟರಲ್ಲಿ ಮುಖ್ಯಮಂತ್ರಿ ಸ್ವಲ್ಪ ದಣಿದವರಂತೆ ಕಂಡುಬಂದರು.