ನವದೆಹಲಿ: ಗ್ರಾಹಕರು ತಮಗೆ ಇಷ್ಟವಾದ ವಿದ್ಯುತ್ ವಿತರಣಾ ಕಂಪನಿಯನ್ನು (ಎಸ್ಕಾಂ) ಆಯ್ಕೆ ಮಾಡಿಕೊಳ್ಳಲು ಅವಕಾಶ ಕಲ್ಪಿಸುವ ಯೋಜನೆಯನ್ನು ಆರಂಭಿಸುವುದಾಗಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಬಜೆಟ್ನಲ್ಲಿ ಘೋಷಿಸಿದ್ದಾರೆ.
ವಿದ್ಯುತ್ ವಿತರಣಾ ಕ್ಷೇತ್ರದಲ್ಲಿ ಏಕಸ್ವಾಮ್ಯ ತಪ್ಪಿಸುವುದಕ್ಕೆ ಹಾಗೂ ಗ್ರಾಹಕರಿಗೆ ನಿರಂತರ ವಿದ್ಯುತ್ ಪೂರೈಕೆ ನೀಡುವುದಕ್ಕೆ ಆದ್ಯತೆ ನೀಡಲಾಗುವುದು. ಇದರಿಂದ ಗ್ರಾಹಕರು ತಮಗೆ ಇಷ್ಟವಾದ ಎಸ್ಕಾಂ ಅನ್ನು ಆಯ್ಕೆ ಮಾಡಿಕೊಳ್ಳಲು ಅನುಕೂಲವಾಗುವುದು ಎಂದು ಸಚಿವ ಸೀತಾರಾಮನ್ ಪ್ರತಿಪಾದಿಸಿದರು.
ದೇಶದ ಅನೇಕ ರಾಜ್ಯಗಳಲ್ಲಿ ಎಸ್ಕಾಂಗಳು ಅಸ್ತಿತ್ವದಲ್ಲಿದ್ದು, ಅವುಗಳು ರಾಜ್ಯ ಸರ್ಕಾರಗಳ ಒಡೆತನದಲ್ಲಿವೆ. ಅನೇಕ ಕಂಪನಿಗಳು ಹಣಕಾಸು ಬಿಕ್ಕಟ್ಟು ಇಲ್ಲವೇ ನಷ್ಟದಲ್ಲಿವೆ. ಹೀಗಾಗಿ ಅವುಗಳಿಂದ ನಿರಂತರ ವಿದ್ಯುತ್ ಪೂರೈಕೆ ಸಾಧ್ಯವಾಗುತ್ತಿಲ್ಲ ಎಂದು ಕೇಂದ್ರ ಸರ್ಕಾರ ಹೇಳಿದೆ.