ತುಮಕೂರು: ಈ ಬಾರಿ ಸೀಗೆಕಾಯಿಗೆ ಉತ್ತಮ ಬೆಲೆ ಬಂದಿದ್ದು, ನಗರದ ಎಪಿಎಂಸಿ ಮಾರುಕಟ್ಟೆಯಲ್ಲಿ ದಾಖಲೆ ದರಕ್ಕೆ ಮಾರಾಟವಾಗುತ್ತಿದೆ.
ಒಂದು ಕ್ವಿಂಟಲ್ ಸೀಗೆಕಾಯಿ ಧಾರಣೆ ₹15 ಸಾವಿರದಿಂದ ₹20 ಸಾವಿರದವರೆಗೂ ಇದೆ. ಹಿಂದಿನ ವರ್ಷಕ್ಕೆ ಹೋಲಿಸಿದರೆ ಮೂರು ಪಟ್ಟು ಬೆಲೆ ಹೆಚ್ಚಳವಾಗಿದೆ. ಯಾವ ವರ್ಷವೂ ಇಷ್ಟೊಂದು ಬೆಲೆ ಸಿಕ್ಕಿರಲಿಲ್ಲ. ಮುಂದಿನ ವಾರಗಳಲ್ಲಿ ಧಾರಣೆ ಮತ್ತಷ್ಟು ಏರಿಕೆಯಾಗಬಹುದು ಎಂದು ವ್ಯಾಪಾರಿಗಳು ಹೇಳುತ್ತಾರೆ. ಕಳೆದ ವರ್ಷದ ಹಾಗೂ ಕಪ್ಪಾಗಿರುವ ಸೀಗೆಕಾಯಿಯು, ಕ್ವಿಂಟಲ್ಗೆ ₹8 ಸಾವಿರದಿಂದ ₹10 ಸಾವಿರದ ವರೆಗೂ ಮಾರಾಟವಾಗುತ್ತಿದೆ.
ಕಳೆದ ವರ್ಷ ಕ್ವಿಂಟಲ್ಗೆ ₹6 ಸಾವಿರದಿಂದ ₹8 ಸಾವಿರದವರೆಗೂ ಮಾರಾಟವಾಗಿದ್ದ ಸೀಗೆಕಾಯಿ ಧಾರಣೆಯು ಈ ಸಲ ಒಮ್ಮೆಲೆ ಏರಿಕೆಯಾಗಿದೆ. ಇದರಿಂದ ಜಿಲ್ಲೆಯಲ್ಲಿ ಸೀಗೆಕಾಯಿ ಬೆಳೆದಿರುವ ರೈತರು ಉತ್ತಮ ಲಾಭ ಮಾಡಿಕೊಳ್ಳುತ್ತಿದ್ದಾರೆ.
ಬೆಲೆ ಏರಿಕೆಗೆ ಕಾರಣ ಏನು?: ಮಾರುಕಟ್ಟೆಗೆ ಆವಕ ಕಡಿಮೆ ಯಾಗಿರುವುದೇ ಬೆಲೆ ಹೆಚ್ಚಳಕ್ಕೆ ಪ್ರಮುಖ ಕಾರಣವಾಗಿದೆ. ಹಿಂದಿನ ವರ್ಷ ಇದೇ ಅವಧಿಯಲ್ಲಿ ತುಮಕೂರು ಎಪಿಎಂಸಿ ಮಾರುಕಟ್ಟೆಗೆ ಪ್ರತಿದಿನ 100ರಿಂದ 150 ಚೀಲ ಆವಕವಾಗುತಿತ್ತು. ಆದರೆ, ಈಗ ದಿನಕ್ಕೆ 20ರಿಂದ 25 ಚೀಲ ಆವಕವಾಗುತ್ತಿದೆ.
ಸೀಗೆಕಾಯಿ ಬಣ್ಣದ ಮೇಲೆ ಬೆಲೆ ನಿರ್ಧಾರವಾಗುತ್ತದೆ. ಕೆಂಪು ಬಣ್ಣ ಇದ್ದರೆ ಹೆಚ್ಚು ಬೆಲೆ ಸಿಗುತ್ತದೆ. ಕಾಯಿ ಕಪ್ಪಾಗಿದ್ದರೆ ದರ ಕಡಿಮೆಯಾಗುತ್ತದೆ. ಕಾಯಿಯ ಗುಣಮಟ್ಟ, ಬಣ್ಣದ ಆಧಾರದಲ್ಲಿ ಬೆಲೆ ನಿಗದಿಪಡಿಸಲಾಗುತ್ತದೆ. ಈ ಬಾರಿ ಕಡಿಮೆ ಗುಣಮಟ್ಟದ ಕಾಯಿಗೂ ಉತ್ತಮ ಬೆಲೆ ಸಿಗುತ್ತಿದೆ. ಸೀಗೆಕಾಯಿಗೆ ಬೇಡಿಕೆ ಇದ್ದು, ಖರೀದಿಗೂ ವ್ಯಾಪಾರಿಗಳು ಮುಂದಾಗಿದ್ದಾರೆ. ಆದರೆ, ಸರಕು ಬರುತ್ತಿಲ್ಲ ಎಂದು ವರ್ತಕರು ಹೇಳುತ್ತಾರೆ.
ಗ್ರಾಮೀಣ ಭಾಗದಲ್ಲಿ ಮಧ್ಯವರ್ತಿ ಗಳು ಕ್ವಿಂಟಲ್ಗೆ ₹10 ಸಾವಿರದಿಂದ ₹12 ಸಾವಿರದ ವರೆಗೂ ಖರೀದಿ ಸುತ್ತಿದ್ದಾರೆ. ಮಾರುಕಟ್ಟೆಯಲ್ಲಿ ದುಪ್ಪಟ್ಟು ಬೆಲೆಗೆ ಮಾರಾಟ ಮಾಡಿ, ಲಾಭ ಮಾಡಿಕೊಳ್ಳುತ್ತಿದ್ದಾರೆ.
ಬರದ ಪ್ರಭಾವ: ಪ್ರಮುಖವಾಗಿ ಬರ ದಿಂದ ಬೆಳೆ ಹಾಳಾಗಿದ್ದು, ಸಾಕಷ್ಟು ಕಡೆಗಳಲ್ಲಿ ಸೀಗೆಮೆಳೆಗಳು ಒಣಗಿ ಹೋಗಿವೆ. ಸೀಗೆಮೆಳೆ ಬದುಕಿ ಉಳಿದಿ ರುವ ಕಡೆಗಳಲ್ಲಿ ಇಳುವರಿ ಗಣನೀಯ ಪ್ರಮಾಣದಲ್ಲಿ ಕಡಿಮೆಯಾಗಿದೆ.
ನಾಲ್ಕು ಚೀಲ ಸಿಗುವ ಕಡೆಗಳಲ್ಲಿ ಅರ್ಧ ಚೀಲದಷ್ಟು ಕಾಯಿ ಸಿಗುತ್ತಿಲ್ಲ. ಅಲ್ಪಸ್ವಲ್ಪ ಕಾಯಿ ಸಿಕ್ಕರೆ ಜನರು ಮಾರಾಟ ಮಾಡದೆ ಮನೆ ಬಳಕೆಗೆ ಇಟ್ಟುಕೊಳ್ಳುತ್ತಾರೆ. ಹೆಚ್ಚಿನ ಪ್ರಮಾಣದಲ್ಲಿ ಇದ್ದರೆ ಅದನ್ನು ಮಾರಾಟ ಮಾಡುತ್ತಿದ್ದಾರೆ.
ಮಲೆನಾಡಿನಲ್ಲೂ ಇಳುವರಿ ಕುಸಿತ
ತುಮಕೂರು ಎಪಿಎಂಸಿ ಮಾರುಕಟ್ಟೆಯಲ್ಲಿ ಉತ್ತಮ ಬೆಲೆ ಸಿಗುತ್ತದೆ ಎಂಬ ಕಾರಣಕ್ಕೆ ಚಿಕ್ಕಮಗಳೂರು ಜಿಲ್ಲೆ ಹಾಗೂ ಇತರೆ ಕಡೆಗಳಿಂದ ಸೀಗೆಕಾಯಿ ಬರುತ್ತಿತ್ತು. ಈ ಬಾರಿ ಅಲ್ಲಿಂದಲೂ ಕಾಯಿ ಬರುತ್ತಿಲ್ಲ. ಹಾಗಾಗಿ, ಬೆಲೆ ಹೆಚ್ಚಳವಾಗಿದೆ ಎಂದು ವರ್ತಕರೊಬ್ಬರು ತಿಳಿಸಿದರು.
ಮಲೆನಾಡು ಭಾಗದಲ್ಲೂ ಸಮರ್ಪಕವಾಗಿ ಮಳೆಯಾಗದೆ ಇಳುವರಿ ಕುಸಿದಿದ್ದು, ಯಥೇಚ್ಛವಾಗಿ ಕಾಯಿ ಸಿಗದಿರುವುದರಿಂದ ಇಲ್ಲಿನ ಮಾರುಕಟ್ಟೆಗೆ ತರುತ್ತಿಲ್ಲ. ಸ್ಥಳೀಯವಾಗಿಯೇ ಮಾರಾಟ ಮಾಡುತ್ತಿದ್ದು, ಆವಕ ಕಡಿಮೆಯಾಗಿದೆ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.