ನವದೆಹಲಿ: ಕೇಂದ್ರ ಸರ್ಕಾರದ ಮಧ್ಯಪ್ರವೇಶದಿಂದಾಗಿಸಕ್ಕರೆ ಕಾರ್ಖಾನೆಗಳು ರೈತರಿಗೆ ನೀಡಬೇಕಿರುವ ಕಬ್ಬು ಬಾಕಿ ಮೊತ್ತದಲ್ಲಿ ಇಳಿಕೆಯಾಗಿದೆ ಎಂದು ಕೇಂದ್ರ ಆಹಾರ ಸಚಿವ ರಾಮ್ ವಿಲಾಸ್ ಪಾಸ್ವಾನ್ ಹೇಳಿದ್ದಾರೆ.
ಮಂಗಳವಾರ ಲೋಕಸಭೆಗೆ ಲಿಖಿತ ರೂಪದಲ್ಲಿ ಉತ್ತರ ನೀಡಿದ ಅವರು,‘2018–19ನೇ ಮಾರುಕಟ್ಟೆ ವರ್ಷದಲ್ಲಿ ರೈತರಿಗೆ ನೀಡಬೇಕಿರುವ ಬಾಕಿ ಮೊತ್ತ ₹ 15,222 ಕೋಟಿಗೆ ಇಳಿಕೆಯಾಗಿದೆ ಎಂದು ತಿಳಿಸಿದ್ದಾರೆ.
‘2017–18 ಮತ್ತು 2018–19ನೇ ಮಾರುಕಟ್ಟೆ ವರ್ಷದಲ್ಲಿ ಬೇಡಿಕೆಗಿಂತಲೂ ಅಧಿಕ ಸಕ್ಕರೆ ಉತ್ಪಾದನೆ ಆಗಿತ್ತು. ಹೀಗಾಗಿ ಸಕ್ಕರೆ ಬೆಲೆಯಲ್ಲಿ ಇಳಿಕೆ ಕಂಡುಬಂದು ಸಕ್ಕರೆ ಕಾರ್ಖಾನೆಗಳು ನಗದು ಬಿಕ್ಕಟ್ಟು ಎದುರಿಸುವಂತಾಯಿತು. ಪರಿಣಾಮ ರೈತರಿಂದ ಪಡೆದ ಕಬ್ಬಿನ ಮೊತ್ತ ಬಾಕಿ ಉಳಿಯುವಂತಾಗಿದೆ’ ಎಂದು ಅವರು ವಿವರಿಸಿದ್ದಾರೆ.
ಸರ್ಕಾರದ ಕ್ರಮಗಳು: ‘2018ರ ಜೂನ್ನಲ್ಲಿ ಸಕ್ಕರೆಗೆ ಕನಿಷ್ಠ ಮಾರಾಟ ದರ (ಎಂಎಸ್ಪಿ) ಪ್ರತಿ ಕೆ.ಜಿಗೆ ₹ 29 ನಿಗದಿ ಮಾಡಲಾಯಿತು. 2019ರ ಫೆಬ್ರುವರಿ 14 ರಿಂದ ಜಾರಿಗೆ ಬರುವಂತೆ ಎಂಎಸ್ಪಿಯನ್ನು ಪ್ರತಿ ಕೆ.ಜಿಗೆ 31ಕ್ಕೆ ಹೆಚ್ಚಿಸಲಾಯಿತು’ ಎಂದು ತಿಳಿಸಿದ್ದಾರೆ.