ನವದೆಹಲಿ: ಚುನಾವಣಾ ಆಯೋಗದ ಒಪ್ಪಿಗೆ ಪಡೆದ ಬಳಿಕವೇ ಕೇಂದ್ರ ಸರ್ಕಾರವು ಈರುಳ್ಳಿ ರಫ್ತಿನ ಮೇಲೆ ವಿಧಿಸಿದ್ದ ನಿಷೇಧವನ್ನು ಹಿಂಪಡೆದಿದೆ ಎಂದು ಮೂಲಗಳು ತಿಳಿಸಿವೆ.
ದೇಶೀಯ ಮಾರುಕಟ್ಟೆಯಲ್ಲಿನ ಬೇಡಿಕೆ ಮತ್ತು ಬೆಲೆ ನಿಯಂತ್ರಿಸಲು ಕೇಂದ್ರವು ಈರುಳ್ಳಿ ರಫ್ತಿಗೆ ಕಳೆದ ವರ್ಷದ ಡಿಸೆಂಬರ್ 8ರಂದು ನಿಷೇಧ ವಿಧಿಸಿತ್ತು. ಈಗ ಲೋಕಸಭಾ ಚುನಾವಣೆಯಲ್ಲಿ ರೈತರ ಮತ ಸೆಳೆಯಲು ಈ ಆದೇಶವನ್ನು ವಾಪಸ್ ಪಡೆದಿದೆ ಎಂದು ಹೇಳಲಾಗಿತ್ತು.
ಸದ್ಯ ಚುನಾವಣಾ ನೀತಿಸಂಹಿತೆ ಜಾರಿಯಲ್ಲಿದೆ. ಹಾಗಾಗಿ, ಕೇಂದ್ರ ಹಣಕಾಸು ಸಚಿವಾಲಯವು ಆಯೋಗದ ಅನುಮತಿ ಪಡೆದ ಬಳಿಕವೇ ಈ ನಿರ್ಧಾರ ಕೈಗೊಂಡಿದೆ ಎಂದು ಮೂಲಗಳು ತಿಳಿಸಿವೆ.
ರಾಬಿ ಅವಧಿಯಲ್ಲಿ ಉತ್ಪಾದನೆಯ ಅಂದಾಜು ಹಾಗೂ ಮಾರುಕಟ್ಟೆಯಲ್ಲಿ ಬೆಲೆ ಸ್ಥಿರತೆ ಆಧಾರದ ಮೇಲೆ ರಫ್ತು ಆದೇಶವನ್ನು ಹಿಂದಕ್ಕೆ ಪಡೆಯಲಾಗಿದೆ ಎಂದು ಕೇಂದ್ರ ಹೇಳಿದೆ.
ಕನಿಷ್ಠ ರಫ್ತು ದರವನ್ನು ಪ್ರತಿ ಕೆ.ಜಿಗೆ ₹46 ನಿಗದಿಪಡಿಸಿದೆ. ಅಲ್ಲದೆ, ಶೇ 40ರಷ್ಟು ರಫ್ತು ಸುಂಕವನ್ನೂ ವಿಧಿಸಿದೆ.