ಮುಂಬೈ: ಭಾರತೀಯ ರಿಸರ್ವ್ ಬ್ಯಾಂಕ್ನ ಮಧ್ಯಪ್ರವೇಶದಿಂದಾಗಿ ದೇಶದ ಆರ್ಥಿಕ ಸ್ಥಿತಿಯು ಕೋವಿಡ್–19 ಸಾಂಕ್ರಾಮಿಕ ಸೃಷ್ಟಿಸಿದ ಬಿಕ್ಕಟ್ಟಿನಿಂದ ಹೊರಬಂದು ಬಹಳ ವೇಗವಾಗಿ ಚೇತರಿಕೆ ಕಂಡುಕೊಳ್ಳುತ್ತಿದೆ ಎಂದು ರೇಟಿಂಗ್ಸ್ ಸಂಸ್ಥೆ ಕ್ರಿಸಿಲ್ ಹೇಳಿದೆ.
ಬಡ್ಡಿದರ ಕಡಿತಕ್ಕೆ ಸಂಬಂಧಿಸಿದಂತೆ ಆರ್ಬಿಐ ತಾಳಿದ ಹೊಂದಾಣಿಕೆಯ ನಿಲುವಿನಿಂದಾಗಿ ಆರ್ಥಿಕ ಸ್ಥಿತಿಯ ಮೇಲಿನ ಒತ್ತಡವು ಅಲ್ಪಾವಧಿಗೆ ಕಡಿಮೆ ಆಗಿದೆ. ಆರ್ಥಿಕತೆಗೆ ಸಾಂಕ್ರಾಮಿಕವು ಮಾಡಿದ್ದ ಹಾನಿಯನ್ನು ಸರಿಪಡಿಸಲು ಕೇಂದ್ರೀಯ ಬ್ಯಾಂಕ್ನ ಕ್ರಮಗಳು ನೆರವಾಗಿವೆ ಎಂದು ಅದು ಹೇಳಿದೆ.
ಆರ್ಥಿಕ ವ್ಯವಸ್ಥೆಯ ಮೇಲಿನ ಒತ್ತಡವು ಇನ್ನೂ ಇದೆ ಎಂದೂ ಹೇಳಿರುವ ಕ್ರಿಸಿಲ್, ‘ಬ್ಯಾಂಕ್ ಸಾಲ ನೀಡಿಕೆಯ ಬೆಳವಣಿಗೆ ದುರ್ಬಲವಾಗಿದೆ. ಸರ್ಕಾರದ ಸಾಲ ಸಂಗ್ರಹವು ಗರಿಷ್ಠ ಮಟ್ಟದಲ್ಲಿ ಇದೆ’ ಎಂದಿದೆ.