ನವದೆಹಲಿ: ಸರ್ಕಾರಿ ಸ್ವಾಮ್ಯದ ವಿಮಾನ ಯಾನ ಸಂಸ್ಥೆ ಏರ್ ಇಂಡಿಯಾವನ್ನು (ಎಐ) ಖಾಸಗಿಯವರಿಗೆ ಮಾರಾಟ ಮಾಡುವ ಸಂಬಂಧ ಹಣಕಾಸು ಸಚಿವಾಲಯವು ಹೊಸ ಪ್ರಸ್ತಾವ ಸಿದ್ಧಪಡಿಸುತ್ತಿದೆ.
ಹೊಸ ಪ್ರಸ್ತಾವದಲ್ಲಿ, ಕಚ್ಚಾ ತೈಲ ಬೆಲೆ ಮತ್ತು ಕರೆನ್ಸಿ ವಿನಿಮಯ ದರದಲ್ಲಿನ ಏರಿಳಿತವನ್ನೂ ಸೇರ್ಪಡೆ ಮಾಡಲಾಗುತ್ತಿದೆ. ಜತೆಗೆ, ಸಂಸ್ಥೆಯಲ್ಲಿನ ಸರ್ಕಾರದ ಶೇ 76ರಷ್ಟು ಪಾಲು ಬಂಡವಾಳವನ್ನು ಸಂಪೂರ್ಣವಾಗಿ ಮಾರಾಟ ಮಾಡುವ ಆಯ್ಕೆಯೂ ಇರಲಿದೆ.
ಸಂಸ್ಥೆಯ ಮಾರಾಟಕ್ಕೆ ಸಂಬಂಧಿಸಿದಂತೆ ಹಿಂದಿನ ವರ್ಷ ರಚಿಸಲಾಗಿದ್ದ ಸಚಿವರ ಸಮಿತಿಯನ್ನು ಪುನರ್ರಚಿಸಲಾಗುವುದು. ಸಮಿತಿಯಲ್ಲಿದ್ದ ಅರುಣ್ ಜೇಟ್ಲಿ ಮತ್ತು ಸುರೇಶ್ ಪ್ರಭು ಬದಲಿಗೆ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮತ್ತು ನಾಗರಿಕ ವಿಮಾನ ಯಾನ ಸಚಿವ ಹರ್ದೀಪ್ ಸಿಂಗ್ ಪುರಿ ಅವರನ್ನು ಸೇರ್ಪಡೆ ಮಾಡಲಾಗುವುದು. ಸಮಿತಿಯನ್ನು ಪುನರ್ರಚಿಸಿದಾಗ ಸಾರಿಗೆ ಸಚಿವ ನಿತಿನ್ ಗಡ್ಕರಿ ಅವರು ಮುಂದುವರೆಯುವ ಸಾಧ್ಯತೆ ಇದೆ.
ಹಿಂದಿನ ವರ್ಷವೇ ಸಂಸ್ಥೆಯಲ್ಲಿನ ತನ್ನ ಪಾಲು ಬಂಡವಾಳ ಮಾರಾಟ ಮಾಡಲು ಸರ್ಕಾರ ಬಿಡ್ ಆಹ್ವಾನಿಸಿತ್ತು. ಯಾರೂ ಮುಂದೆ ಬಂದಿರಲಿಲ್ಲ.