ನವದೆಹಲಿ : ದೇಶಿಯ ಮಾರುಟ್ಟೆಯಲ್ಲಿ ಈರುಳ್ಳಿ ಪೂರೈಕೆ ಸುಧಾರಿಸುವ ಉದ್ದೇಶದಿಂದ ಕೇಂದ್ರ ಸರ್ಕಾರವು ಈರುಳ್ಳಿ ರಫ್ತು ಮೇಲೆ ಶೇ 40ರಷ್ಟು ಸುಂಕವನ್ನು ವಿಧಿಸಿದೆ.
ರಫ್ತು ಸುಂಕವು ಡಿಸೆಂಬರ್ 31ರವರೆಗೆ ಜಾರಿಯಲ್ಲಿ ಇರಲಿದೆ ಎಂದು ಕೇಂದ್ರ ಹಣಕಾಸು ಸಚಿವಾಲಯವು ಪ್ರಕಟಣೆಯಲ್ಲಿ ತಿಳಿಸಿದೆ.
ಸರ್ಕಾರದ ಮಾಹಿತಿಯ ಪ್ರಕಾರ, ದೆಹಲಿಯಲ್ಲಿ ಶನಿವಾರ ಈರುಳ್ಳಿ ಚಿಲ್ಲರೆ ಮಾರಾಟ ದರ ಕೆ.ಜಿಗೆ ₹37ಕ್ಕೆ ತಲುಪಿದೆ. ಈರುಳ್ಳಿ ದರವು ಸೆಪ್ಟೆಂಬರ್ನಲ್ಲಿ ಏರಿಕೆ ಕಾಣಲಿದೆ ಎನ್ನುವ ವರದಿಗಳು ಬಂದಿರುವ ಹಿನ್ನೆಲೆಯಲ್ಲಿ ರಫ್ತು ಮೇಲೆ ಸುಂಕ ವಿಧಿಸಲಾಗಿದೆ.
ಏಪ್ರಿಲ್ 1 ರಿಂದ ಆಗಸ್ಟ್ 4ರವರೆಗೆಇನ ಅವಧಿಯಲ್ಲಿ 9.75 ಲಕ್ಷ ಟನ್ ಈರುಳ್ಳಿ ರಫ್ತಾಗಿದೆ. ಮೌಲ್ಯದ ಲೆಕ್ಕದಲ್ಲಿ ಭಾರತದಿಂದ ಹೆಚ್ಚು ಈರುಳ್ಳಿ ಆಮದು ಮಾಡಿಕೊಳ್ಳುತ್ತಿರುವ ದೇಶಗಳ ಸಾಲಿನಲ್ಲಿ ಬಾಂಗ್ಲಾದೇಶ, ಮಲೇಷ್ಯಾ ಮತ್ತು ಯುಎಇ ಮುಖ್ಯವಾಗಿವೆ.
ದೇಶಿ ಮಾರುಕಟ್ಟೆಯಲ್ಲಿ ಈರುಳ್ಳಿ ಲಭ್ಯತೆ ಹೆಚ್ಚಿಸಲು ಅದರಲ್ಲಿಯೂ ಮುಖ್ಯವಾಗಿ ಮುಂಬರುವ ಹಬ್ಬದ ಋತುವಿನಲ್ಲಿ ಈರುಳ್ಳಿ ಪೂರೈಕೆ ಸಾಕಷ್ಟು ಪ್ರಮಾಣದಲ್ಲಿ ಇರುವಂತೆ ಮಾಡುವ ಉದ್ದೇಶದಿಂದ ಶೇ 40ರಷ್ಟು ಆಮದು ಸುಂಕ ವಿಧಿಸಲಾಗಿದೆ ಎಂದು ಗ್ರಾಹಕ ವ್ಯವಹಾರಗಳ ಕಾರ್ಯದರ್ಶಿ ರೋಹಿತ್ ಕುಮಾರ್ ಸಿಂಗ್ ತಿಳಿಸಿದ್ದಾರೆ.
ಈಚಿನ ವರ್ಷಗಳಲ್ಲಿ ರಫ್ತು ತೀವ್ರವಾಗಿ ಹೆಚ್ಚಾಗುತ್ತಿರುವುದು ಗಮನಕ್ಕೆ ಬಂದಿದೆ ಎಂದೂ ಅವರು ಹೇಳಿದ್ದಾರೆ.
ರಫ್ತು ನಿರ್ಬಂಧಿಸಲು ಸರ್ಕಾರವು ಯಾವಾಗಲೂ ಕನಿಷ್ಠ ರಫ್ತು ದರ ಮಾರ್ಗ ಅನುಸರಿಸುತ್ತದೆ. ಹೀಗಿದ್ದರೂ ಇದೇ ಮೊದಲ ಬಾರಿಗೆ ಈ ವರ್ಷ ಈರುಳ್ಳಿ ರಫ್ತನ್ನು ಪರಿಣಾಮಕಾರಿಯಾಗಿ ನಿಯಂತ್ರಿಸಲು ರಫ್ತು ಸುಂಕ ವಿಧಿಸಲಾಗಿದೆ.
ಗ್ರಾಹಕ ವ್ಯವಹಾರಗಳ ಸಚಿವಾಲಯದ ಪ್ರಕಾರ, ದೇಶದಾದ್ಯಂತ ಈರುಳ್ಳಿಯ ಸರಾಸರಿ ಚಿಲ್ಲರೆ ಮಾರಾಟ ದರವು ಶನಿವಾರ ಕೆ.ಜಿಗೆ ₹30.72 ಇತ್ತು. ಕೆ.ಜಿಗೆ ಗರಿಷ್ಠ ₹ 63 ಮತ್ತು ಕನಿಷ್ಠ ₹10ರಷ್ಟು ಇತ್ತು.
ಮುಂಗಾರು ಅವಧಿಯಲ್ಲಿ ಈರುಳ್ಳಿ ಬಿತ್ತನೆ ಪ್ರಮಾಣ ಕಡಿಮೆ ಆಗಿದೆ ಎನ್ನುವ ವರದಿಯಿಂದಾಗಿ ಬೆಲೆ ಏರಿಕೆ ಕಾಣಲಾರಂಭಿಸಿದೆ.
ಸಗಟು ದರ ಸೂಚ್ಯಂಕದ ಪ್ರಕಾರ ಜುಲೈನಲ್ಲಿ ಈರುಳ್ಳಿ ದರ ಶೇ 7.13ಕ್ಕೆ ಏರಿಕೆ ಕಂಡಿದೆ. ಜೂನ್ನಲ್ಲಿ ಶೇ (–) 4.31ರಷ್ಟು ಇತ್ತು.