ನವದೆಹಲಿ: ಎರಡು ದೇಶಗಳ ನಡುವೆ ಉದ್ಭವಿಸಿರುವ ಬಿಕ್ಕಟ್ಟಿನಿಂದಾಗಿ ಭಾರತೀಯ ಪ್ರವಾಸಿಗರಿಂದ ಮಾಲ್ದೀವ್ಸ್ಗೆ ಹೊಸ ಬುಕಿಂಗ್ ಸ್ಥಗಿತಗೊಂಡಿದೆ ಎಂದು ಭಾರತೀಯ ಪ್ರವಾಸ ನಿರ್ವಾಹಕರ ಸಂಘ (ಐಎಟಿಒ) ತಿಳಿಸಿದೆ.
‘ಮಾಲ್ದೀವ್ಸ್ ಪ್ರವಾಸಕ್ಕೆ ಈಗಾಗಲೇ ಬುಕಿಂಗ್ ಮಾಡಿರುವ ಪ್ರವಾಸಿಗರು ರದ್ದುಪಡಿಸಿಲ್ಲ. ಆದರೆ, ಮುಂದಿನ 15ರಿಂದ 20 ದಿನದೊಳಗೆ ಈ ಬಿಕ್ಕಟ್ಟು ಪ್ರವಾಸದ ಮೇಲೆ ಪರಿಣಾಮ ಬೀರಬಹುದು’ ಎಂದು ಐಎಟಿಒ ಅಧ್ಯಕ್ಷ ರಾಜೀವ್ ಮೆಹ್ರಾ ಹೇಳಿದ್ದಾರೆ.
‘ಭಾರತೀಯರ ಮೇಲೆ ಆ ದೇಶದ ಪ್ರವಾಸೋದ್ಯಮ ನಿಂತಿದೆ. ಆದರೆ, ಸಾಮಾಜಿಕ ಜಾಲತಾಣಗಳಲ್ಲಿ ಪ್ರವಾಸ ಬಹಿಷ್ಕಾರಕ್ಕೆ ಭಾರತೀಯರು ಕರೆ ನೀಡಿದ್ದಾರೆ. ಇದರಿಂದ ಆ ರಾಷ್ಟ್ರವು ಸಂಕಷ್ಟಕ್ಕೆ ಸಿಲುಕಿದೆ’ ಎಂದು ಟ್ರಾವೆಲ್ ಏಜೆಂಟ್ಸ್ ಅಸೋಸಿಯೆಷನ್ ಆಫ್ ಇಂಡಿಯಾ ಅಧ್ಯಕ್ಷೆ ಜ್ಯೋತಿ ಮಯಾಲ್ ಹೇಳಿದ್ದಾರೆ.
‘ಕೋವಿಡ್ಗೂ ಮೊದಲು ಆ ದೇಶದ ಅಭಿವೃದ್ಧಿಗೆ ಭಾರತೀಯರು ಅತಿದೊಡ್ಡ ಕೊಡುಗೆ ನೀಡಿದ್ದಾರೆ. ಹೀಗಿದ್ದರೂ ಭಾರತವನ್ನು ಅವಮಾನ ಮಾಡಿರುವುದು ಸರಿಯಲ್ಲ’ ಎಂದು ಅವರು ಪಿಟಿಐ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.