ಬೀಜಿಂಗ್ : ಪಾಕಿಸ್ತಾನ ಆಕ್ರಮಿತ ಕಾಶ್ಮೀರ ಪ್ರದೇಶದಲ್ಲಿ ಹಾದು ಹೋಗುವ ಚೀನಾ– ಪಾಕಿಸ್ತಾನ ಆರ್ಥಿಕ ಕಾರಿಡಾರ್ಗೆ (ಸಿಪಿಇಸಿ) ಸಂಬಂಧಿಸಿದಂತೆ ಭಾರತದೊಂದಿಗಿನ ಭಿನ್ನಾಭಿಪ್ರಾಯವನ್ನು ಮಾತುಕತೆ ಮೂಲಕ ಪರಿಹರಿಸಿಕೊಳ್ಳಲು ಸಿದ್ಧ ಎಂದು ಚೀನಾ ಸೋಮವಾರ ಹೇಳಿದೆ.
ಚೀನಾದಲ್ಲಿನ ಭಾರತದ ರಾಯಭಾರಿ ಗೌತಮ್ ಬಂಬವಾಲೆ ಅವರು ಸರ್ಕಾರಿ ಮಾಧ್ಯಮ ‘ಗ್ಲೋಬಲ್ ಟೈಮ್ಸ್’ಗೆ ನೀಡಿದ ಸಂದರ್ಶನದಲ್ಲಿ, ‘ಸಿಪಿಇಸಿಗೆ ಸಂಬಂಧಿಸಿದ ವಿಚಾರವನ್ನು ನಿರ್ಲಕ್ಷಿಸಬಾರದು’ ಎಂದಿದ್ದರು.
ಈ ಹೇಳಿಕೆಗೆ ಪ್ರತಿಕ್ರಿಯಿಸಿದ ಚೀನಾ ವಿದೇಶಾಂಗ ಸಚಿವಾಲಯದ ವಕ್ತಾರೆ ಹುವಾ ಚುನ್ಯಿಂಗ್, ‘ಭಾರತ– ಚೀನಾ ವೈರಿಗಳಲ್ಲ. ಈ ಎರಡೂ ಸಹಭಾಗಿ ರಾಷ್ಟ್ರಗಳ ನಡುವೆ ಶಾಂತಿಯುತ ಮಾರ್ಗದಲ್ಲಿ ಬಿಕ್ಕಟ್ಟಿಗೆ ಪರಿಹಾರ ಕಂಡುಕೊಳ್ಳಬೇಕು’ ಎಂದಿದ್ದಾರೆ.
‘ನಾವು ನಮ್ಮ ನಿಲುವನ್ನು ಮತ್ತೆ ಮತ್ತೆ ಸ್ಪಷ್ಟಪಡಿಸಿದ್ದೇವೆ. ಸಿಪಿಇಸಿ ಭಿನ್ನಾಭಿಪ್ರಾಯವು ನಮ್ಮ ಇತರ ಹಿತಾಸಕ್ತಿಗಳ ಮೇಲೆ ಅಡ್ಡ ಪರಿಣಾಮ ಬೀರಬಾರದು. ಮಾತುಕತೆಗೆ ನಾವು ಸಿದ್ಧ’ ಎಂದು ಅವರು ಹೇಳಿದ್ದಾರೆ.