ಶ್ರವಣಬೆಳಗೊಳ: ಮಹಾ ವಿರಾಗಿ ಬಾಹುಬಲಿಗೆ ನಡೆದ ಈ ಶತಮಾನದ ಎರಡನೇ ಮಹಾಮಜ್ಜನದ ಧಾರ್ಮಿಕ ವಿಧಿ ವಿಧಾನಗಳು ಭಾನುವಾರ ಸಂಪನ್ನಗೊಂಡವು. ಮತ್ತೆ 2030ಕ್ಕೆ ಜೈನಕಾಶಿ ಲಕ್ಷಾಂತರ ಭಕ್ತರ ಸಮಾಗಮಕ್ಕೆ ವೇದಿಕೆಯಾಗಲಿದೆ.
ಸರ್ವಾಂಗ ಸುಂದರ ಮೂರ್ತಿಗೆ ನಡೆದ 88ನೇ ಮಹಾಮಸ್ತಕಾಭಿಷೇಕವನ್ನು ಲಕ್ಷೋಪಾದಿಯಲ್ಲಿ ಜಿನ ಧರ್ಮಿಯರು, ಯಾತ್ರಾರ್ಥಿಗಳು ಕಣ್ತುಂಬಿಕೊಂಡರು. ದೇಶವಷ್ಟೇ ಅಲ್ಲದೆ ಪ್ರಪಂಚದ ಮೂಲೆ ಮೂಲೆಗಳಿಂದ ಬಂದಿದ್ದ ಭಕ್ತಗಣ, ಯಾತ್ರಾರ್ಥಿಗಳು, ಶ್ರಾವಕ, ಶ್ರಾವಕಿಯರು ವಿಂಧ್ಯ ಗಿರಿಯಿಂದ ನಿರ್ಗಮಿಸುತ್ತಿದ್ದಾರೆ.
ರಾಷ್ಟ್ರಪತಿ, ಉಪರಾಷ್ಟ್ರಪತಿ, ಪ್ರಧಾನಿ, ಮುಖ್ಯಮಂತ್ರಿ ಈ ಬಾರಿ ಮಹೋತ್ಸವದಲ್ಲಿ ಪಾಲ್ಗೊಳ್ಳುವ ಮೂಲಕ ಉತ್ಸವದ ಕಳೆ ಹೆಚ್ಚಿಸಿದರು.
ಪವಿತ್ರ ಜಲ, ಇಕ್ಷು ರಸ, ಕ್ಷೀರ, ಶ್ರೀಗಂಧ, ಚಂದನ, ಅಷ್ಟಗಂಧ, ಕೇಸರಿ, ಕಲ್ಕಚೂರ್ಣ, ಅರಿಸಿನ, ಕಷಾಯದ ಅಭಿಷೇಕದಿಂದ ಮಿಂದು ನಾನಾ ವರ್ಣಗಳಲ್ಲಿ ಕಂಗೊಳಿಸಿದ ಶಿಲಾ ಮೂರ್ತಿ ಈಗ ಮತ್ತೆ ಸಹಜ ರೂಪಕ್ಕೆ ಮರಳುತ್ತಿದೆ. ಕಳೆದ ಬಾರಿ ಹಾಗೂ ಈ ಬಾರಿಯ ಕಳಸಗಳ ಹರಾಜಿನಿಂದ ಬಂದ ಹಣವನ್ನು ಜನಕಲ್ಯಾಣ ಕಾರ್ಯಕ್ರಮಗಳಿಗೆ ಬಳಸಲು ಜೈನ ಮಠ
ನಿರ್ಧರಿಸಿದೆ.
ಗೊಮ್ಮಟ ಗಿರಿಯಲ್ಲಿ 19 ದಿನ ನಡೆದ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳು ಯಾತ್ರಿಗಳ ಮನಸೂರೆಗೊಂಡವು. ತಿಂಗಳ ಕಾಲ ಸರ್ವಾಲಂಕಾರದಿಂದ ಕಂಗೊಳಿಸಿದ ವಿಂಧ್ಯಗಿರಿ, ಚಂದ್ರಗಿರಿ, ಗೊಮ್ಮಟನಗರಿ ವಿರಾಗಿಯ ಮಜ್ಜನ ಮುಗಿಯುತ್ತಿದ್ದಂತೆ ಮನೆಯತ್ತ ಹೊರಟು ನಿಂತ ಭಕ್ತರಿಗೆ ವಿದಾಯದ ಜತೆಗೆ 'ಮತ್ತೆ ಬನ್ನಿ ಮಹಾಮಸ್ತಕಾಭಿಷೇಕಕ್ಕೆ' ಎಂದು ಸ್ವಾಗತವನ್ನೂ ಕೋರುತ್ತಿರುವಂತೆ ಭಾಸವಾಗುತ್ತಿದೆ.
ಕೊನೆ ದಿನದ ಮಜ್ಜನ: ‘ಕೇಸರಿಯಾ.. ಕೇಸರಿಯಾ..’ ಬಾಹುಬಲಿ ಸ್ವಾಮಿ ಜಗಕ್ಕೆಲ್ಲ ಸ್ವಾಮಿ ಶಾಂತಿಯ ಮೂರುತಿಯೇ..’ ಹಾಡಿಗೆ ನರ್ತಿಸುತ್ತ ಯುವಕ, ಯುವತಿಯರು ಭಕ್ತಿ ಮೆರೆಯುವ ಮೂಲಕ ಕೊನೆ ದಿನದ ಮಜ್ಜನ ಪೂರೈಸಿದರು. ಮಹೋತ್ಸವದ ಕೊನೆದಿನ ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಅವರು ಹೆಲಿಕಾಪ್ಟರ್ನಲ್ಲಿಯೇ ಬಾಹುಬಲಿ ದರ್ಶನ ಪಡೆದರು. ಜೈನಮಠದ ಬಳಿಯೇ ಏಕಶಿಲಾ ಮೂರ್ತಿಗೆ ಭಾವ ನಮನ ಸಲ್ಲಿಸಿ ‘ಈ ಅವಕಾಶ ಸಿಕ್ಕಿರುವುದು ನನ್ನ ಸೌಭಾಗ್ಯ’ ಎಂದರು.
ಜೂನ್ವರೆಗೂ ಪ್ರತಿ ಭಾನುವಾರ ಅಭಿಷೇಕ
ದೊಡ್ಡ ಉತ್ಸವ ಮಸ್ತಕಾಭಿಷೇಕ ಮುಕ್ತಾಯವಾಗಿದೆ. ಸೋಮವಾರ ಎಲ್ಲಾ ಉಪ ನಗರಗಳಿಗೆ ತೆರಳಿ ಕೃತಜ್ಞತೆ ಅರ್ಪಿಸಲಾಗುವುದು. ಈವರೆಗೂ ಲಕ್ಷಾಂತರ ಜನರು ಕ್ಷೇತ್ರಕ್ಕೆ ಬಂದು ಹೋಗಿದ್ದಾರೆ. ಇದು ಭಕ್ತಿಯ ಸಂಕೇತ ಮತ್ತು ಉತ್ಸಾಹ ತೋರುತ್ತದೆ. ಸಾಮಾನ್ಯ ಜನರು ಅಭಿಷೇಕದಲ್ಲಿ ಪಾಲ್ಗೊಳ್ಳಲು ಅವಕಾಶ ಕಲ್ಪಿಸಿಕೊಡುವ ಸಲುವಾಗಿ ಮುಂದಿನ ಜೂನ್ವರೆಗೂ ಪ್ರತಿ ಭಾನುವಾರ ವಿಶೇಷ ಮಹಾಮಸ್ತಕಾಭಿಷೇಕ ನಡೆಯಲಿದ್ದು, ಅವಶ್ಯವಿದ್ದಲ್ಲಿ ಆಗಸ್ಟ್ವರೆಗೂ ವಿಸ್ತರಿಸಲಾಗುವುದು ಎಂದು ಮಠದ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಹೇಳಿದರು.
ಮಹಾಭಿಷೇಕದ ಹೊಳೆಯಲ್ಲಿ ಮಿಂದರು
ಕೊನೆ ದಿನದ ಮಹಾಮಜ್ಜನಕ್ಕೆ ಸಾಗರೋಪಾದಿಯಲ್ಲಿ ಭಕ್ತರು ಬಂದಿದ್ದರು. ಅಟ್ಟಣಿಗೆ ಮೇಲೆ ಕಿಕ್ಕಿರಿದು, ಕಾಲು ಇಡಲು ಸಾಧ್ಯವಾಗದಷ್ಟು ತುಂಬಿ ಹೋಗಿದ್ದರು. ಮೂರ್ತಿ ಮೇಲಿಂದ ಧುಮ್ಮಿಕ್ಕುವ ಅಭಿಷೇಕದ ಧಾರೆಗೆ ಮೈ ಒಡ್ಡಿದ ಭಕ್ತರು, ಅಡಿಯಿಂದ ಮುಡಿವರೆಗೂ ಅಭಿಷೇಕಕ್ಕೆ ಶಿರಬಾಗಿದರು.
ಇನ್ನೂ ಕೆಲವು ಭಕ್ತರು ತಾಮ್ರದ ಕಳಸ, ಬಾಟಲಿಗಳಿಗೆ ಅಭಿಷೇಕವಾದ ದ್ರವ್ಯಗಳನ್ನು ತುಂಬಿಕೊಂಡು ತೆರಳಿದರು. ವೈರಾಗಿಯ ಮೇಲೆ ಪುಷ್ಪ ವೃಷ್ಟಿಯಾಗುತ್ತಿದ್ದಂತೆ ಆ ಪವಿತ್ರ ಹೂಗಳನ್ನು ಆಯ್ದುಕೊಳ್ಳಲು ಮುಗಿಬಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.