ಮುಂಬೈ: ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕವು ಬುಧವಾರದ ವಹಿವಾಟಿನಲ್ಲಿ 629 ಅಂಶಗಳ ಏರಿಕೆ ದಾಖಲಿಸಿದೆ.
ಶಕ್ತಿಕಾಂತ್ ದಾಸ್ ಅವರನ್ನು ಆರ್ಬಿಐ ಗವರ್ನರ್ ಆಗಿ ನೇಮಕ ಮಾಡಿರುವುದಕ್ಕೆ ಷೇಟೆಯು ಈ ಮೂಲಕ ತನ್ನ ಬೆಂಬಲದ ಮುದ್ರೆ ಒತ್ತಿದೆ.
ಉರ್ಜಿತ್ ನಿರ್ಗಮನದ ಬೆನ್ನಲ್ಲೇ ಕೇಂದ್ರ ಸರ್ಕಾರ ತ್ವರಿತವಾಗಿ ದಾಸ್ ಅವರನ್ನು ನೇಮಕ ಮಾಡಿರುವುದು ಮತ್ತು ನಗದು ಪರಿಸ್ಥಿತಿ ಸುಧಾರಿಸಲು ಇನ್ನಷ್ಟು ಕ್ರಮಗಳನ್ನು ಕೈಗೊಳ್ಳುವ ನಿರೀಕ್ಷೆಗಳು ಪೇಟೆಯಲ್ಲಿ ಖರೀದಿ ಉತ್ಸಾಹ ಹೆಚ್ಚಿಸಿವೆ ಎಂದು ವಿಶ್ಲೇಷಕರು ಹೇಳಿದ್ದಾರೆ.
ವಿತ್ತೀಯ ನೀತಿ ಮತ್ತು ವ್ಯಾಪಾರ ಕ್ಷೇತ್ರದಲ್ಲಿನ ದಾಸ್ ಅವರ ಅಪಾರ ಅನುಭವದಿಂದ ಹಣಕಾಸು ಮಾರುಕಟ್ಟೆಯು ಪ್ರಯೋಜನ ಪಡೆಯಲಿದೆ ಎನ್ನುವುದೂ ಪ್ರಭಾವ ಬೀರಿದೆ.
ಸಂವೇದಿ ಸೂಚ್ಯಂಕವು 629.06 ಅಂಶಗಳಷ್ಟು ಚೇತರಿಕೆ ಕಂಡು 35,779 ಅಂಶಗಳಿಗೆ ತಲುಪಿತು. ರಾಷ್ಟ್ರೀಯ ಷೇರುಪೇಟೆ ‘ನಿಫ್ಟಿ’ 188 ಅಂಶ ಹೆಚ್ಚಳಗೊಂಡು 10,737 ಅಂಶಗಳಿಗೆ ತಲುಪಿತು.
ಸಂವೇದಿ ಸೂಚ್ಯಂಕದಲ್ಲಿನ ಎಲ್ಲ 30 ಷೇರುಗಳು ಮತ್ತು ವಲಯವಾರು ಸೂಚ್ಯಂಕಗಳು ಉತ್ತಮ ಗಳಿಕೆ ಕಂಡವು. ರಿಯಾಲಿಟಿ, ವಾಹನ, ಲೋಹ, ಭಾರಿ ಯಂತ್ರೋಪಕರಣ ಮತ್ತು ಹಣಕಾಸು ಸಂಸ್ಥೆಗಳ ಷೇರುಗಳು ಗಳಿಕೆ ಬಾಚಿಕೊಂಡವು.
ಹೀರೊ ಮೋಟೊಕಾರ್ಪ್, ಭಾರ್ತಿ ಏರ್ಟೆಲ್, ಯೆಸ್ ಬ್ಯಾಂಕ್, ಅದಾನಿ ಪೋರ್ಟ್ಸ್, ಟಾಟಾ ಸ್ಟೀಲ್ ಮತ್ತು ಬಜಾಜ್ ಆಟೊ ಷೇರುಗಳು ಗರಿಷ್ಠ ಪ್ರಮಾಣದ ಏರಿಕೆ ಕಂಡವು.