ಬೆಂಗಳೂರು: ಕೇಂದ್ರ ಸರ್ಕಾರದ ಬಜೆಟ್ನಲ್ಲಿ ಬ್ರಾಂಡೆಡ್ ಆಭರಣಗಳ ಮೇಲೆ ಶೇ 1ರಷ್ಟು ಅಬಕಾರಿ ತೆರಿಗೆಯನ್ನು ಮರು ಜಾರಿಗೊಳಿಸಿರುವ ಕ್ರಮವನ್ನು ಅಖಿಲ ಭಾರತ ಚಿನ್ನಾಭರಣ ವ್ಯಾಪಾರಿಗಳ ಒಕ್ಕೂಟ ವಿರೋಧಿಸಿದೆ. ‘ಇದು ಇಡೀ ಉದ್ಯಮದ ಹಿನ್ನಡೆಗೆ ಕಾರಣವಾಗಬಹುದು. ತೆರಿಗೆಯನ್ನು ಹಿಂದಕ್ಕೆ ಪಡೆಯುವಂತೆ ಹಣಕಾಸು ಸಚಿವರಿಗೆ ಮನವಿ ಮಾಡಲಾಗುವುದು’ ಎಂದು ಅಖಿಲ ಭಾರತ ಚಿನ್ನಾಭರಣ ವ್ಯಾಪಾರಿಗಳ ಒಕ್ಕೂಟದ ಅಧ್ಯಕ್ಷ ವಿನೋದ್ ಹಯಗ್ರೀವ್ ಹೇಳಿದ್ದಾರೆ.
ಕಳೆದ ಎರಡು ವರ್ಷಗಳ ಹಿಂದೆ ಸರ್ಕಾರ ಬ್ರಾಂಡೆಡ್ ಆಭರಣಗಳ ಮೇಲಿನ ಅಬಕಾರಿ ತೆರಿಗೆಯನ್ನು ತೆಗೆದು ಹಾಕಿತ್ತು. ಇದೀಗ ಮತ್ತೆ ಅದನ್ನು ಜಾರಿಗೊಳಿಸಲಾಗಿದೆ. ಇದರ ಹಿಂದಿರುವ ಮರ್ಮ ತಿಳಿಯುತ್ತಿಲ್ಲ. ಇಡೀ ಉದ್ಯಮ ಪಾರದರ್ಶಕವಾಗಿ ಕೆಲಸ ಮಾಡುತ್ತಿದೆ. ಈ ರೀತಿಯ ಕ್ರಮಗಳಿಂದ ಇದು ಉದ್ಯಮದ ಮೇಲೆ ಕೆಟ್ಟ ಪರಿಣಾಮ ಬೀರಲಿದೆ ಎಂದು ಹೇಳಿದ್ದಾರೆ. ನಿರ್ದಿಷ್ಟ ಗುರುತಿನ ಚಿಹ್ನೆ ಇರುವ ಎಲ್ಲಾ ಆಭರಣಗಳು ‘ಬ್ರಾಂಡೆಡ್’ ಆಭರಣಗಳ ವ್ಯಾಪ್ತಿಗೆ ಬರುತ್ತವೆ. ಇದರಿಂದ ತೆರಿಗೆಯ ಹೊರೆ ಎಲ್ಲ ವರ್ತಕರನ್ನು ತಟ್ಟಲಿದೆ. ಹೆಚ್ಚುವರಿ ತೆರಿಗೆಯನ್ನು ತೆಗೆದು ಹಾಕುವಂತೆ ಮನವಿ ಮಾಡಲಾಗುವುದು ಎಂದರು.