ಬೆಳಗಾವಿಯಿಂದ ಕೊಲ್ಹಾಪುರದ ಕಡೆಗೆ ಹೊರಟಿದ್ದೆ. ಅದು ಸೂಪರ್ ಹೈವೇ ಆದ್ದರಿಂದ ವಾಹನಗಳು ವೇಗದಿಂದ ಸುಮಾರು 100–-120 ಕಿಲೋಮೀಟರ್ ವೇಗದಲ್ಲಿ ಚಲಿಸುವುದು ಸಾಮಾನ್ಯ. ದಾರಿಯಲ್ಲಿ ಹತ್ತರಗಿ ಎಂಬ ಒಂದು ಪುಟ್ಟ ಪಟ್ಟಣವನ್ನು ದಾಟುತ್ತಿದ್ದೆವು. ನನ್ನ ಕಾರಿನ ಮುಂದೆ ಮತ್ತೊಂದು ಕಾರು. ಅದರ ಮುಂದೆ ಒಂದು ಮಿನಿ ಲಾರಿ. ನಾನು ಮುಂದೆ ಡ್ರೈವರ್ ಪಕ್ಕದಲ್ಲಿ ಕುಳಿತು ಕಿಟಕಿಯಿಂದ ನೋಡುತ್ತ ಕುಳಿತಿದ್ದೆ.
ದೂರದಲ್ಲಿ ರಸ್ತೆಯ ಎಡಭಾಗದಲ್ಲಿ ಒಬ್ಬ ಹೆಣ್ಣುಮಗಳು ನಿಂತಿದ್ದು ಕಂಡಿತು. ಆಕೆ ಕೈ ಮಾಡಿ ರಸ್ತೆಯ ಇನ್ನೊಂದು ಬದಿಯಿದ್ದ ಬಾಲಕನಿಗೆ ಏನೋ ಹೇಳುತ್ತಿದ್ದಂತಿತ್ತು. ಅದೇನಾಯಿತೋ ತಿಳಿಯದು. ಆಕೆ ರಸ್ತೆಗೆ ಇಳಿದು ದಾಟಲು ತೊಡಗಿರಬೇಕು. ಮರುಕ್ಷಣದಲ್ಲಿ ಮಿನಿ ಲಾರಿ ಜೋರಾಗಿ ಬ್ರೇಕ್ ಹಾಕಿದಾಗ ಆಗುವ ಕಿರ್ ಎಂಬ ಸಪ್ಪಳ ಕೇಳಿಸಿತು. ಅಷ್ಟು ವೇಗವಾಗಿ ಹೋಗುತ್ತಿದ್ದ ವಾಹನ ನಿಲ್ಲಬೇಕಾದರೆ ಕನಿಷ್ಠ ನೂರೈವತ್ತು ಅಡಿಗಳಷ್ಟಾದರೂ ಅಂತರ ಬೇಕು. ಅದರ ಹಿಂದಿನ ಕಾರಿನ ಮತ್ತು ನನ್ನ ಕಾರಿನ ಡ್ರೈವರ್ ಜೋರಾಗಿ ಬ್ರೇಕ್ ಹಾಕಿ ನಿಲ್ಲಿಸಿದರು. ಮುಂದೆ ಕಂಡದ್ದು ಅನಾಹುತ. ಆ ಮಹಿಳೆಗೆ ಮಿನಿ ಲಾರಿ ಡಿಕ್ಕಿ ಹೊಡೆದು ದೇಹವನ್ನು ಅಷ್ಟೂ ದೂರ ಎಳೆದುಕೊಂಡು ಹೋಗಿದೆ. ಸುಮಾರು ಇಪ್ಪತ್ತು ಅಡಿ ಹಿಂದಿನಿಂದ ಅಲ್ಲಲ್ಲಿ ಮಾಂಸದ ಮುದ್ದೆಗಳು, ಮಿದುಳಿನ ಚೂರುಗಳು ಚೆಲ್ಲಾಡಿವೆ.
ಆ ದೇಹ ಗುರುತು ಹತ್ತುವುದೂ ಸಾಧ್ಯವಿಲ್ಲ. ದೇಹದೊಳಗಿದ್ದ ಭಾಗಗಳೆಲ್ಲ ಹೊರಬಂದಿವೆ. ಒಂದು ಕ್ಷಣದಲ್ಲಿ ಚೈತನ್ಯವಾಗಿದ್ದ ದೇಹ ಈಗ ಚಿಂದಿಯಾಗಿ ರಸ್ತೆಯಲ್ಲಿ ಬಿದ್ದಿತ್ತು. ಆಕೆಯ ಮಗ ಓಡಿ ಬಂದ. ಹೋ ಎಂದು ಕೂಗುತ್ತ ಕೆಳಗೆ ಬಿದ್ದ. ತಾಯಿಯ ದೇಹವನ್ನು ಮುಟ್ಟುವ ಧೈರ್ಯವೂ ಅವನಿಗಿಲ್ಲ. ಜನ ಸೇರಿದರು. ರಸ್ತೆಯಲ್ಲಿ ಸಂಚಾರ ನಿಂತುಹೋಯಿತು. ಯಾರೋ ಫೋನ್ ಮಾಡಿರಬೇಕು, ಐದು ನಿಮಿಷದಲ್ಲಿ ಆಂಬುಲೆನ್ಸ್ ಬಂದಿತು, ಪೋಲೀಸರು ಬಂದರು. ಆ ತಾಯಿ ಯಾಕೆ ಹಾಗೆ ರಸ್ತೆಯಲ್ಲಿ ಓಡಿದಳೋ? ಮಗ ಎಲ್ಲಿ ಮರಳಿ ರಸ್ತೆಯಲ್ಲಿ ಬಂದಾನೋ ಎಂಬ ಆತಂಕದಿಂದಲೋ, ಅಥವಾ ತಾನೇ ಅವನನ್ನು ಬೇಗನೇ ಸೇರಬೇಕೆಂಬ ತವಕದಿಂದಲೋ? ಆಕೆಯ ತಲೆಯಲ್ಲಿ ಯಾವ ವಿಚಾರವಿತ್ತೋ? ಯಾವ ಕೆಲಸಕ್ಕಾಗಿ ಬಂದಿದ್ದಳೋ? ಮನೆಗೆ ಹೋಗಿ ಏನು ಮಾಡಬೇಕೆಂದು ಹವಣಿಸಿದ್ದಳೋ? ಮರುದಿನ, ಮರುವಾರ, ಮುಂದಿನ ತಿಂಗಳು, ಮುಂದಿನ ವರ್ಷ ಏನೇನೋ ಮಾಡಬೇಕು ಎಂಬ ಆಸೆ ಹೊತ್ತಿರಬೇಕಲ್ಲವೇ? ತಲೆ ಗಿರ್ರೆಂದಿತು.
ಅಷ್ಟರಲ್ಲಿ ಪೋಲೀಸರು ಆ ದೇಹ-ವನ್ನು ಮರೆಮಾಚಲು ಒಂದು ಬಟ್ಟೆಯನ್ನು ಹೊಚ್ಚಿದರು, ವಾಹನಗಳನ್ನು ಅತ್ತಿತ್ತ ಸರಿಸಿ ಸಂಚಾರ ಸರಿಮಾಡಿದರು. ಕ್ಷಣದಲ್ಲೇ ಕಣ್ಣಮುಂದೆ ಗಾಜಿನ ಬುಡ್ಡಿಯಂತೆ ಕರಗಿ ಹೋದ ಜೀವವನ್ನು ಕಂಡಿದ್ದ ನಾನು ಭಾರವಾದ ಹೃದಯದಿಂದ ಕಾರಿನಲ್ಲಿ ಕುಳಿತು ಮತ್ತೆ ನನ್ನ ಹೃದಯದಲ್ಲಿ ಅಂದು ಸಂಜೆ, ನಾಳೆ, ನಾಡಿದ್ದು ಮಾಡಬೇಕಾದ ಕೆಲಸಗಳ ಕನಸುಗಳನ್ನು ಚಿಗುರಿಸಿಕೊಂಡು ಧಾವಿಸಿದೆ, ನಾಳೆ ಇದ್ದೀತು ಎಂಬ ಭರವಸೆಯಲ್ಲಿ. ನಾವು ಕನಸುಗಳನ್ನು ಹೆಣೆಯುತ್ತೇವೆ, ಅವು ಸಾಕಾರವಾದಾವು ಎಂಬ ನಂಬಿಕೆಯಲ್ಲಿ ಪರಿಶ್ರಮಿಸುತ್ತೇವೆ. ಆದರೆ, ಒಂದೇ ಕ್ಷಣದಲ್ಲಿ ಅದೆಲ್ಲ ಶೂನ್ಯವಾಗಿ ಬಿಡಬಹುದೆಂಬ ವಿಚಾರ ತಿಳಿದೂ ಅದನ್ನು ಪ್ರಜ್ಞಾಪೂರ್ವಕವಾಗಿ ಮರೆಯುತ್ತೇವೆ.
ಬಹುಶಃ ಇದೇ ಮನುಷ್ಯ ಜೀವನದ ಬಹುದೊಡ್ಡ ಪವಾಡ. ಮುಂದಿನ ಕ್ಷಣವೇ ಬದುಕು ಇಲ್ಲವಾಗುವ ಸಾಧ್ಯತೆಯನ್ನು ತಿಳಿದೂ ಹತ್ತು ವರ್ಷಗಳಲ್ಲಿ ಮಾಡಬೇಕಾದ ಕಾರ್ಯಗಳನ್ನು ಯೋಜಿಸುತ್ತೇವೆ. ಮಗನ ಶಾಲೆ, ನೌಕರಿ, ಮಗಳ ಮದುವೆ, ಅವಳ ಸಂಸಾರ, ಸೈಟು, ಮನೆ, ಹೊಸ ಕಾರುಗಳು ಇವೆಲ್ಲವುಗಳ ಆಸೆ ನಮ್ಮನ್ನು ದುಡಿಸುತ್ತವೆ. ನನಗೆ ಈ ಘಟನೆಯಲ್ಲಿ ಒಂದು ಸಂದೇಶ ಕಂಡಿತು. ಹೌದು, ಬದುಕು ಅನಿಶ್ಚಿತ. ಈ ಅನಿಶ್ಚಿತತೆಯೇ ಅದರ ಸೌಂದರ್ಯ. ನಾಳೆ ನಾನು ಬದುಕಿರಲಾರೆ ಎಂಬ ಭಯದಿಂದ ಕಾರ್ಯಮಾಡದಿರುವುದು ಹೇಡಿತನ. ಇಂದೇ ನನ್ನ ಕೊನೆಯ ದಿನವೆಂಬಂತೆ, ಅಷ್ಟರೊಳಗೆ ಸಾಧ್ಯವಾದಷ್ಟನ್ನು ಮಾಡಿಯೇ ತೀರಬೇಕೆಂಬ ಉತ್ಸಾಹದಿಂದ, ಯಾರನ್ನೂ ದ್ವೇಷಿಸದೆ ಕಾರ್ಯತತ್ಪರರಾದರೆ ಮತ್ತಷ್ಟು ದಿನಗಳು ದೊರೆತಾವು. ಆ ಪ್ರಯತ್ನ ನಮ್ಮ ಜೀವನವನ್ನು ಎತ್ತರಕ್ಕೆ ಕೊಂಡೊಯ್ಯಬಹುದು. ಆಗ ಸಾವು ನಮ್ಮನ್ನು ಹೆದರಿಸಲಾರದು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.