ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೃಷ್ಣ, ಕನಕ ಮತ್ತು ಪ್ರಸ್ತುತ ರಾಜಕೀಯ

Last Updated 11 ನವೆಂಬರ್ 2013, 19:30 IST
ಅಕ್ಷರ ಗಾತ್ರ

ರ್ನಾಟಕದ ಬಹುಮುಖ್ಯ ಸಮುದಾಯ ವಾದ ಕುರುಬರು ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾದ ನಂತರ ತಮ್ಮನ್ನು ಹೆಚ್ಚೆಚ್ಚು ಪ್ರಕಟಪಡಿಸಿಕೊಳ್ಳುತ್ತಿದ್ದಾರೆ. ಅದು ಸಹಜವೂ ಹೌದು. ‘ಅಹಿಂದ’ ಸಂಘಟನೆಯ ಮೂಲಕ ಜನನಾಯಕರಾಗಿ ಮೂಡಿಬಂದ ಸಿದ್ದರಾಮಯ್ಯನವರಿಂದಾಗಿ ಆ ಸಮುದಾಯ ಗಳಿಗೆ ದನಿ ಬಂದಂತಾಗಿದೆ.

ಅಂಬೇಡ್ಕರ್‌ ಅವರು ಸಮುದಾಯದ ಬೆಳವಣಿಗೆಗೆ ರಾಜಕೀಯ ಅಧಿಕಾರ ಬೇಕು ಎಂದು ಬಯಸಿದ್ದನ್ನು ಇಲ್ಲಿ ನೆನೆಯಬಹುದು. ಕರ್ನಾಟಕದ ಪಶುಪಾಲಕ ಸಮುದಾಯ ಗಳಲ್ಲಿ ಕುರುಬರು ಪ್ರಮುಖರು. ಇವರು ಮೂಲತಃ ಕನ್ನಡಿಗರು. ಪಶುಪಾಲನೆಯನ್ನೇ ಉಳಿಸಿಕೊಂಡು ಅರೆ ಅಲೆಮಾರಿಗಳಾಗಿ ಬದುಕುವ ಕುರುಬರು ಇಂದಿಗೂ ಇದ್ದಾರೆ. ಅವರು ಕಾಡುಗೊಲ್ಲರಂತೆ ಹುಲ್ಲುಗಾವಲು ಗಳನ್ನು ಅರಸಿ ನಾಡಿನುದ್ದಗಲಕ್ಕೂ ಓಡಾಡುತ್ತಾರೆ.

ಕೃಷಿ ವಿಸ್ತರಿಸಿದಂತೆ, ಜನವಸತಿ ಹೆಚ್ಚಿದಂತೆ ಹುಲ್ಲುಗಾವಲುಗಳು ಕರಗುತ್ತಿವೆ.  ಇಷ್ಟಾದರೂ ಪುರಾತನವಾದ ಪಶುಪಾಲನಾ ವಿಧಾನವನ್ನೇ ಅನುಸರಿಸುತ್ತಾ ಬಂದಿರುವುದು ವಿಶೇಷವೇ ಸರಿ. ಆದ್ದರಿಂದ ಅವರು ಮಾತನಾಡುವ ಭಾಷೆ ಯಲ್ಲೂ ತನ್ನ ಪ್ರಾಚೀನತೆಯು ಉಳಿದಿದೆ. ಅದ ರಲ್ಲೂ ಜೇನು ಕುರುಬರ ಮಾತಿನಲ್ಲಿ ಕನ್ನಡದ ಮೂಲ ಪದಗಳು ಉಳಿದು ಬಂದಿವೆ.

ಕುರುಬ ರಲ್ಲಿ ಕೆಲವರು ಪಶುಪಾಲಕರ ಹಂತದಲ್ಲಿದ್ದರೆ, ಮತ್ತೆ ಕೆಲವರು ಬುಡಕಟ್ಟು ಹಂತದಲ್ಲೇ ಇದ್ದಾರೆ. ಹೆಚ್ಚಿನವರು ಕೃಷಿಕರಾಗಿ ನೆಲೆ ನಿಂತಿದ್ದಾರೆ. ಪ್ರಸ್ತುತ ಕೃಷಿ ಹಂತದಿಂದ ಮೇಲೆದ್ದು ಆಧುನಿಕತೆಯ ಕಡೆಗೆ ದಾಪುಗಾಲು ಹಾಕಿದೆ ಈ ಸಮುದಾಯ. ಇದು ಅವರನ್ನು ರಾಜಕೀಯವಾಗಿ ಸಮರ್ಥವಾಗುವಂತೆ ಮಾಡಿದೆ.

ತಮ್ಮ ‘ಐಡೆಂಟಿಟಿ’ಗಾಗಿ ಶಿಕ್ಷಿತ ಸಮುದಾಯ ಇಂದು ಚರ್ಚೆಗಿಳಿದಿರುವುದು ಕಾಣಬರುತ್ತದೆ. ಈ ಐಡೆಂಟಿಟಿಗಳಲ್ಲಿ ಕನಕದಾಸರಿಗೆ ಸಾಂಸ್ಕೃತಿಕ ನಾಯಕತ್ವ ಕೊಡಲಾಗಿ, ಕನಕ ಕೇಂದ್ರಿತವಾದ ಹಲವು ಪ್ರಶ್ನೆಗಳು ತಲೆಯೆತ್ತುತ್ತಿವೆ. ಕನಕರು ವೈಷ್ಣವ ಪಂಥಾನುಯಾಯಿಯಾಗಿ ದಾಸವರೇಣ್ಯರಲ್ಲಿ ಒಬ್ಬರಾಗಿದ್ದರು. ಆದಾಗ್ಯೂ ಸಾಮರಸ್ಯ ಮತ್ತು ಸಂಘರ್ಷಗಳನ್ನು ತಮ್ಮ ಸಾಹಿತ್ಯದಲ್ಲಿ ಪ್ರಕಟಪಡಿಸಿದ್ದು ಅಧ್ಯಯನಕ್ಕೆ ಇಂದೂ ಗ್ರಾಸವಾಗಿದೆ.

ಕನಕರು ವೈಷ್ಣವರಾದ ಕಾರಣಕ್ಕೆ ಕುರುಬರು ವೈಷ್ಣವ ಪಂಥವನ್ನು ಅನುಸರಿಸಬೇಕೇ, ಅನುಸರಿ ಸಬಾರದೇ ಎಂಬ ಪ್ರಶ್ನೆ ಇಂದು ಉಡುಪಿಯ ಶ್ರೀ ಕೃಷ್ಣನ ದೇಗುಲಕ್ಕೂ, ಮಠಕ್ಕೂ ಹೋಗಿ ನಿಲ್ಲುತ್ತದೆ. ಚರಿತ್ರೆಯನ್ನು ಮುಂದಿಟ್ಟು ಇಂದಿನ ಉಡುಪಿಯ ದೇಗುಲದ ನಂಬಿಕೆಗಳನ್ನು ಪ್ರಶ್ನಿಸು ವುದು ನನ್ನ ಉದ್ದೇಶವಲ್ಲ. ಆದರೆ, ಚರಿತ್ರೆಯ ವಿಚಾರಗಳನ್ನು ಮುಂದಿಟ್ಟು ಜನ ವಾದಕ್ಕಿಳಿಯು ವುದರಿಂದ, ಕನಕನ ಚರಿತ್ರೆ ಮತ್ತೆ ಮತ್ತೆ ಪರಾಮರ್ಶನಗೊಳ್ಳುತ್ತಿದೆ.

ಸುಮಾರು 2,300 ವರ್ಷಗಳ ಹಿಂದೆ ಕರಾವಳಿಗೆ ಉತ್ತರದಿಂದ ಬರುತ್ತಿದ್ದ ವ್ಯಾಪಾರಗಾರರು ಬೌದ್ಧರಾಗಿದ್ದು ಇಲ್ಲಿ ಬೌದ್ಧ ಕೇಂದ್ರಗಳನ್ನು ಸ್ಥಾಪಿಸಿದ್ದರು. ಅಂತಹ ಕೇಂದ್ರಗಳಲ್ಲಿ ಉಡುಪಿಯೂ ಒಂದು. ಕರಾವಳಿಯ ದೇವಾಲಯಗಳು ಸಾಗರದಲ್ಲಿ ಬರುವ ವ್ಯಾಪಾರಗಾರರಿಗೆ ದೀಪಸ್ತಂಭಗಳಾಗಿ ದಾರಿ ತೋರಿಸುತ್ತಿದ್ದವು. ಆ ಕಾರಣಕ್ಕೂ ದೇವರು ಪಶ್ಚಿಮ ಮುಖವಾಗಿರುವ ಸಾಧ್ಯತೆ ಇದೆ.

ಮಾಧ್ವರು ಉಡುಪಿಯನ್ನು ಕೈಗೆತ್ತಿಕೊಳ್ಳುವ ಹೊತ್ತಿಗೆ ಮೂಲದಲ್ಲಿದ್ದ ಬೌದ್ಧ ಯಕ್ಷನ ಪ್ರತಿಮೆ ಯನ್ನು ಜನರು ಕೃಷ್ಣನೆಂದು ಆರಾಧಿಸ ತೊಡಗಿದ್ದರು. ದಂಡ ಹಿಡಿದ ಯಕ್ಷನನ್ನು ಕಡೆ ಗೋಲ ಕೃಷ್ಣನೆಂದು ನಂಬಿ ದೇಗುಲ ಕಟ್ಟಿದರು. ವೈಷ್ಣವ ಮತ ಪ್ರಬಲವಾಗಿದ್ದ 14–15ನೇ ಶತ ಮಾನದಲ್ಲಿ ಅದರಲ್ಲೂ ವಿಜಯನಗರ ಸಾಮ್ರಾ ಜ್ಯದ ಎರಡನೆಯ ಅರ್ಧದಲ್ಲಿ ವೈಷ್ಣವ ಮತಕ್ಕೆ ಹೆಚ್ಚಿನ ಆದ್ಯತೆ ದೊರಕಿತು. ಹಾಗಾಗಿ ವೈಷ್ಣವ ದೇವಾಲಯಗಳೂ ಪ್ರಾಬಲ್ಯಕ್ಕೆ ಬಂದವು.

ಈ ಎಲ್ಲಾ ಹಿನ್ನೆಲೆಯಲ್ಲಿ ಕನಕ ತನ್ನ ಕುಲ ಮೂಲದ ದೇವರಾದ ಬೀರಪ್ಪನನ್ನು ಬಿಟ್ಟು ಆದಿ ಕೇಶವನನ್ನು ಹಾಡಿ ಹೊಗಳಿದರೆ, ಅದು ಸಮಾಜದಲ್ಲಿ ಮೇಲಿನ ಸ್ತರದಲ್ಲಿದ್ದ ವೈದಿಕರ ಸಮಕ್ಕೇರುವ ಪ್ರಯತ್ನವಾಗಿತ್ತು. ಆದರೆ ಹಾಗೆ ಏರುತ್ತಲೇ ತನ್ನ ಸಾಮರ್ಥ್ಯವನ್ನೂ, ಪ್ರತಿಭಟನೆ ಯನ್ನೂ ತೋರ್ಪಡಿಸುವ ಸಾಧ್ಯತೆಯಾಯಿತು.

ಇಂದು ನಡೆಯುತ್ತಿರುವ ಧರ್ಮಗುರುಗಳ ವಾದದಲ್ಲಿ ಕುರುಬರು ಮೂಲತಃ ಶೈವರು, ಆದ್ದರಿಂದ ಉಡುಪಿಯ ಪೇಜಾವರ ಶ್ರೀಗಳು ಅವರಿಗೆ ವೈಷ್ಣವ ದೀಕ್ಷೆಯ ವಿಚಾರವನ್ನು ಹೇಳು ವುದು ಅಸಮಂಜಸ ಎಂದು ಹೇಳಲಾಗುತ್ತಿದೆ. ಕುರುಬರ ಮೂಲ ದೇವರು ಬೀರಪ್ಪ, ಮೈಲಾರ, ಎಲ್ಲಮ್ಮ ಇತ್ಯಾದಿಯಾದ ಜನಪದ ದೇವತೆಗಳು. ಕರ್ನಾಟಕದಲ್ಲಿ ಶೈವ ಪಂಥ ಹರಡತೊಡಗಿ ದಾಗ ಮೂಲದ ಜನಪದ ದೇವತೆಗಳು ಶೈವ ಗೊಂಡವು. ಬೀರಪ್ಪ - ಬೀರೇಶ್ವರನಾದ, ಮೈಲಾರ -ಮೈಲಾರಲಿಂಗವಾಯಿತು.

ಮಾದಪ್ಪ- ಮಾದೇಶ್ವರನಾದ. ಹಾಗಾಗಿ ಕುರುಬರು ಶೈವರಾಗಿ ಕಾಣಿಸಿಕೊಳ್ಳುತ್ತಾರೆ. ಜನಪದರು ತಮ್ಮ ಜನಪದ ದೇವರುಗಳನ್ನು ಪೂಜಿಸುವುದಲ್ಲದೇ ಇತರರ ದೇವರುಗಳಿಗೂ ನಡೆದುಕೊಳ್ಳುತ್ತಾರೆ. ವೆಂಕಟೇಶ್ವರ, ಮಂಜುನಾಥ, ಉಡುಪಿಯ ಕೃಷ್ಣ– ಇವೆಲ್ಲಾ ರಾಜಾಶ್ರಯದಿಂದ ಬೆಳೆದು ನಿಂತಾಗ ಆ ದೇವರುಗಳಿಗೆ ಜನಪದರು ನಡೆದುಕೊಳ್ಳ ತೊಡಗಿದರು. ಅದರ ಅರ್ಥ ಅವರು ಶೈವ ರೆಂದಾಗಲೀ, ವೈಷ್ಣವರೆಂದಾಗಲೀ ಅಲ್ಲ.

ಹೆಚ್ಚೆಂದರೆ ಶಿವನಿಗೆ ನಡೆದುಕೊಳ್ಳುವವರು ಸೋಮವಾರವನ್ನೂ, ಶ್ರೀನಿವಾಸನಿಗೆ ನಡೆದು ಕೊಳ್ಳುವವರು ಶನಿವಾರವನ್ನೂ ವಾರವಾಗಿ ಆಚರಿಸುತ್ತಾರೆ. ಅದರಾಚೆಗೆ ಬದುಕಿನ ಕ್ರಮ ದಲ್ಲಿ ಹೆಚ್ಚೇನೂ ಅಂತರಗಳಿರುವುದಿಲ್ಲ. ಮಂಜುನಾಥ, ರಂಗನಾಥರಿಗೆ ಮಾತ್ರವಲ್ಲ ಹಾಸನ ಜಿಲ್ಲೆಯಲ್ಲಿ ಜಿನನಾಥನಿಗೂ ಪೂಜೆ ಕೊಡುತ್ತಾರೆ. ಉತ್ತರ ಕರ್ನಾಟಕದಾದ್ಯಂತ ಉರುಸ್, ಬಸವ ಜಯಂತಿಗಳನ್ನು ತಪ್ಪದೇ ಆಚರಿಸುತ್ತಾರೆ. ಹಾಗೆಂದು ಅವರು ಮುಸಲ್ಮಾನರೂ ಅಲ್ಲ, ಅಥವಾ ವೀರಶೈವ ದೀಕ್ಷೆಯನ್ನು ಸ್ವೀಕರಿಸಿದ ವರೂ ಅಲ್ಲ. ಜನಪದರಲ್ಲಿ ಪಂಥ ಸಿದ್ಧಾಂತ ಗಳನ್ನು ಮೀರಿದ ಉದಾರತೆ ಸಹಜವಾಗಿ ಕಾಣುತ್ತದೆ.

ದಕ್ಷಿಣ ಕರ್ನಾಟಕದಲ್ಲಿ ಅದರಲ್ಲೂ ಹಾಸನ, ಮೈಸೂರು, ತುಮಕೂರು ಜಿಲ್ಲೆಗಳಲ್ಲಿ ರಾಮಾನುಜಾಚಾರ್ಯರ ಪ್ರಭಾವದಿಂದ 12ನೇ ಶತಮಾನದಲ್ಲಿ ವೈಷ್ಣವಧರ್ಮ ಪ್ರಚಲಿತ ಗೊಂಡಿತು. ಆನಂತರದಲ್ಲಿ ಜನಪದ ದೇವರು ಗಳು ವೈಷ್ಣವಗೊಂಡಿವೆ. ಎಲ್ಲಾ ಊರ ದೇವತೆ ಗಳನ್ನು ಲಕ್ಷ್ಮಿಯ ಅಂಶವೆಂದೂ, ಗಂಡು ದೇವರು ಗಳನ್ನು ವಿಷ್ಣುವಿನ ಅಂಶ ಇಲ್ಲವೇ ನರಸಿಂಹ ಅಥವಾ ಗರುಡನ ಅವತಾರವೆಂದು ಭಾವಿಸ ತೊಡಗಿದರು.

ಗಿಡ್ಡಮ್ಮ, ಮೆಳ್ಳಳ್ಳಿಯಮ್ಮ, ತೆರಣ್ಯದಮ್ಮ ಎಲ್ಲರೂ ಲಕ್ಷ್ಮಿಯರೇ ಆಗಿದ್ದಾರೆ, ಹಾಗೆಂದರೆ ಇವರನ್ನು ಆರಾಧಿಸುವವರೆಲ್ಲಾ ವೈಷ್ಣವರೇ? ಅದ್ವೈತ, ದ್ವೈತ, ವಿಶಿಷ್ಟಾದ್ವೈತ, ಶಕ್ತಿ ವಿಶಿಷ್ಟಾದ್ವೈತ ಇವೆಲ್ಲಾ ಅವರು ಎಂದೂ ಕೇಳರಿಯದ ಪದಗಳು. ಅಥವಾ ಅವು ಅವರ ಬದುಕಿನ ಮೂಲಭೂತ ಸವಾಲುಗಳಲ್ಲ.

ನಮ್ಮಲ್ಲಿರುವ ಇವತ್ತಿನ ಕಲ್ಪನೆಯ ಶೈವವೂ ಒಂದು ಮೂಲದ್ದಲ್ಲ. ಪಾಶುಪತ, ಲಕುಲೀಶ,  ಕಾಪಾಲಿಕ, ರುದ್ರ, ಭೈರವ, ಮಹಾದೇವ, ನಾಥ, ಹೀಗೆ ಹಲವು ಭಿನ್ನ ಧಾರೆಗಳು ಅದರಲ್ಲಿ ಸೇರಿಹೋಗಿವೆ. ಹಾಗೆ ನೋಡಿದರೆ, ಯಾವುದೂ ಕನ್ನಡ ನಾಡಿನಲ್ಲಿ ಹುಟ್ಟಿ ಬೆಳೆದುದಲ್ಲ. ಹಲವು ಮೂಲೆಗಳಿಂದ ಹರಿದು ಬಂದವು. ವೀರಶೈವ ಪಂಥವೊಂದೇ ಈ ನಾಡಿನ ಕೊಡುಗೆ. ವೀರಶೈವ ಚಳವಳಿಯ ಸಂದರ್ಭದಲ್ಲಿ ಕುರುಬರು ವೀರ ಶೈವರಾದರು ಅಥವಾ ಅದರ ಪ್ರಭಾವದಿಂದ ಸಸ್ಯಾಹಾರಿಗಳಾದ ಹಲವು ಜಾತಿಗಳಲ್ಲಿ ಕುರುಬರೂ ಸೇರುತ್ತಾರೆ.

ವಿಜಯನಗರ ಸಾಮ್ರಾಜ್ಯದ ಹುಟ್ಟನ್ನು ಕುರುಬ ಜನಾಂಗದ ಮೂಲದಲ್ಲಿ ಗುರುತಿಸ ಲಾಗಿದೆ. ಹಂಪಿ ಪ್ರದೇಶದ ಬಹುಸಂಖ್ಯಾತ ಸಮುದಾಯವಾದ ಪಶುಪಾಲಕ ಹಿನ್ನೆಲೆಯಿಂದ ಬಂದ ಜನ ರಾಜತ್ವವನ್ನು ಹುಟ್ಟು ಹಾಕಿದ್ದರೆ, ಅದು ಸಹಜವಾದ ಪ್ರಕ್ರಿಯೆಯೇ ಆಗುತ್ತದೆ.

ಕನ್ನಡನಾಡಿನ ಮೂಲ ಜನರು ನಾಲ್ಕು ಹಿನ್ನೆಲೆಗಳಿಂದ ಬರುತ್ತಾರೆ. ಬಯಲು ಸೀಮೆಯ ಪಶುಪಾಲಕರು, ಕಡಲತೀರದ ಮೀನುಗಾರರು, ಗುಡ್ಡಗಾಡು ಪ್ರದೇಶದ ಬೇಡರು, ಆನಂತರದಲ್ಲಿ ನೆಲೆನಿಂತು ಕೃಷಿಕರಾದ ಸಮುದಾಯಗಳು. ಈ ನಾಲ್ಕು ಸಮುದಾಯಗಳ ಹಿನ್ನೆಲೆಯಲ್ಲಿ ರಾಜತ್ವದ ಹುಟ್ಟು ತಾರ್ಕಿಕವಾಗಿರುತ್ತದೆ. ಹಾಗೇ ಮಧ್ಯಕಾಲೀನ ಯುಗದಲ್ಲಿ ಬಂದ ವಿಜಯನಗರ ಸಾಮ್ರಾಜ್ಯದ ನಂತರ ಅಂದರೆ, ೧೫ನೆಯ ಶತಮಾನದ ನಂತರ ಆ ಸಮುದಾಯಕ್ಕೆ ಮತ್ತೆ ಅಧಿಕಾರ ಸಿಗಲು ೫೦೦ ವರ್ಷಗಳೇ ಕಳೆದಿವೆ. ಈ ಹೊತ್ತಿನಲ್ಲಿ ಸಿದ್ದರಾಮಯ್ಯನವರು ನಾಯಕತ್ವ ವಹಿಸಿರುವಾಗ ಜವಾಬ್ದಾರಿಗಳು ಅಷ್ಟೇ ಗುರುತರವಾಗಿವೆ.

ಹಾಗಾಗಿ, ಈ ನಾಯಕತ್ವಕ್ಕೆ ಬೆಂಬಲ ಕೊಡುವ ಜನರು ಮೈಮರೆಯದಂತೆ ಹೆಚ್ಚು ಜವಾಬ್ದಾರಿಯಿಂದ ನಡೆದುಕೊಳ್ಳಬೇಕಾಗು ತ್ತದೆ. ಉಡುಪಿಯಿಂದ ಎದ್ದಿರುವ ದಿಕ್ಕು ತಪ್ಪಿಸುವ ಪ್ರಶ್ನೆಗಳಿಗೆ ಮನ್ನಣೆ ಕೊಡುವುದಕ್ಕಿಂತ ಸಮುದಾಯ ಎದುರಿಸುತ್ತಿರುವ ಪ್ರಮುಖ ಸಾಮಾಜಿಕ ಸಮಸ್ಯೆಗಳನ್ನು ಕೈಗೆತ್ತಿಕೊಳ್ಳ ಬೇಕಾಗಿದೆ. ಇಂತಹ ವಾದಗಳು ಪ್ರಗತಿಯೆಡೆಗೆ ಸಾಗಬೇಕಾದ ಜನರ ಗಮನವನ್ನು ಅಡ್ಡದಾರಿ ಗೆಳೆಯುತ್ತವೆ.

ಕರ್ನಾಟಕದಲ್ಲಿ ಶೇಕಡ ೫೦ಕ್ಕೂ ಹೆಚ್ಚು ಹೆಣ್ಣುಮಕ್ಕಳು ೧೫ ವರ್ಷಕ್ಕೆ ಮೊದಲೇ ಮದುವೆಯಾಗುತ್ತಿದ್ದಾರೆ. ಉತ್ತರ ಕರ್ನಾಟಕದ ಜಿಲ್ಲೆಗಳಾದ ರಾಯಚೂರು, ಗುಲ್ಬರ್ಗ, ಕೊಪ್ಪಳ, ಹಾವೇರಿ, ಬಳ್ಳಾರಿ ಹಾಗೂ ದಕ್ಷಿಣ ಕರ್ನಾಟಕದ ಚಾಮರಾಜ ನಗರಗಳಲ್ಲಿ ಇವರ ಸಂಖ್ಯೆ ಅತ್ಯಂತ ಹೆಚ್ಚಾಗಿದೆ. ಅದರಲ್ಲೂ ಕುರುಬ ಸಮುದಾಯದ ಹೆಣ್ಣು ಮಕ್ಕಳಿಗೆ ನಾಲ್ಕೈದು ವರ್ಷಕ್ಕೇ ತಾಳಿ ಕಟ್ಟಲಾಗುತ್ತಿದೆ. ತೊಟ್ಟಿಲ ಮದುವೆಗಳು ಇಂದಿಗೂ ನಿರಂತರವಾಗಿ ನಡೆ ಯುತ್ತಿವೆ ಎಂದರೆ ಅದು ಅತಿಶಯೋಕ್ತಿಯಲ್ಲ.

ಯಾದಗಿರಿ ಸಮೀಪದ ಹಳ್ಳಿ ಕಾನಳ್ಳಿ. ಮಲ್ಲಮ್ಮ, ಬಸಮ್ಮ, ಸಾಕಮ್ಮ, ದೇವಮ್ಮ ಇವ ರೆಲ್ಲರೂ ಮೂರು–ನಾಲ್ಕು ವಯಸ್ಸಿಗೇ ಮದುವೆ ಯಾದವರು. ಸೋದರಮಾವನಿಗೆ, ಇಲ್ಲವೇ ಸೋದರಮಾವನ ಮಗ ಅಥವಾ ಮತ್ಯಾರಾ ದರೂ ಕುಟುಂಬದ ಹುಡುಗರಿಗೆ ಕೊಟ್ಟವರು. ಈ ಹುಡುಗಿಯರನ್ನು ಹನ್ನೆರಡು ಹದಿಮೂರಕ್ಕೆ ಮೈನೆರೆದಾಗ ಅವರ ಗಂಡನ ಮನೆಗೆ ಕಳುಹಿಸಿ ದ್ದಾರೆ. ಹದಿನೈದಕ್ಕೆ ತಾಯಿಯಾಗಿ, ಹದಿನಾರಕ್ಕೆ ಕಂಕುಳಲ್ಲಿ ಒಂದು, ಹೊಟ್ಟೆಯಲ್ಲಿ ಮತ್ತೊಂದನ್ನು ಹೊತ್ತ ಪುಟ್ಟ ತಾಯಂದಿ ರಾಗಿದ್ದಾರೆ.

ಕೂಲಿ ಮಾಡುತ್ತಾ ಬದುಕನ್ನು ತೇಯುತ್ತಿದ್ದಾರೆ. ಕುರುಬ, ಕಬ್ಬಲಿಗ ಈ ಜಾತಿ ಯಿಂದ ಬಂದ ಈ ಪುಟ್ಟ ತಾಯಂದಿರು ಬೆಂಗಳೂರಿನ ಬೀದಿ ಬೀದಿಗಳಲ್ಲಿ ಗಾರೆ ಕೆಲಸಕ್ಕೆ ಕಚ್ಚೆ ಕಟ್ಟಿ ನಿಂತಿದ್ದಾರೆ. ಇಲ್ಲವೇ ಮನೆ ಮನೆಯ ಕಸಗುಡಿಸಿ ಪಾತ್ರೆ ಬೆಳಗುತ್ತಾರೆ. ಚಾಮರಾಜ ನಗರದ ಉಪ್ಪಾರರೂ ಇಂತಹುದೇ ಸುಳಿಗೆ ಸಿಕ್ಕಿ ಮೂವತ್ತು ವಯಸ್ಸಿಗೆಲ್ಲಾ ಗಂಡ ಬಿಟ್ಟ ಒಂಟಿ ಹೆಣ್ಣುಗಳಾಗಿ ಉಳಿದು ಕೂಲಿ ನಾಲಿ ಮಾಡಿ  ಬದುಕನ್ನು ಕರಗಿಸುತ್ತಾರೆ.

ಇವರೆಲ್ಲರ ಬಿಡು ಗಡೆಗೆ ಶೈವ ಅಥವಾ ವೈಷ್ಣವ ಸಿದ್ಧಾಂತಗಳು ಸಹಾಯಕ್ಕೆ ಬರಲಾರವು. ಬಡತನಕ್ಕಂಟಿದ ಮೂಢನಂಬಿಕೆ ನಾಯಿಯ ಮೈಗೆ ಹತ್ತಿದ ಚಿಗಟದ ಹಾಗೆ ಜೊತೆಯಲ್ಲೇ ಸದಾ ರಕ್ತ ಹೀರು ತ್ತದೆ. ಬಿಡುಗಡೆಯ ಕುರಿತು ಯೋಚಿಸುವ ಸದ ವಕಾಶ ಅಹಿಂದ ಚಳವಳಿಯದಾಗಬಾರದೇಕೆ?

ನಿಮ್ಮ ಅನಿಸಿಕೆ ತಿಳಿಸಿ: editpagefeedback@prajavani.co.in

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT