ಜನರ ಸಹಭಾಗಿತ್ವವಿದ್ದರೆ ಊರು ಸುಧಾರಣೆಯಾಗುತ್ತದೆ ಎಂಬುದಕ್ಕೆ ಗದಗ ಜಿಲ್ಲೆಯ ಶಿರಹಟ್ಟಿ ತಾಲ್ಲೂಕಿನ ಕೋಗನೂರು ಗ್ರಾಮ ಪಂಚಾಯ್ತಿ ವ್ಯಾಪ್ತಿಯ ನಾಗರಮಡುವು ಗ್ರಾಮ ಸಾಕ್ಷಿಯಾಗಿದೆ. ಹಲವಾರು ವರ್ಷಗಳಿಂದ ಕುಗ್ರಾಮಗಳಲ್ಲಿ ಒಂದಾಗಿದ್ದ ಈ ಹಳ್ಳಿಯಲ್ಲಿ ದಿಢೀರನೇ ಬದಲಾವಣೆಯಾಗಿದೆ.
ಇದಕ್ಕೆ ಮುಖ್ಯ ಕಾರಣ ಊರಿನ ಮಹಿಳೆಯರು. ಮನೆ–ಮಕ್ಕಳ ಮೇಲೆ ಕಾಳಜಿ ವಹಿಸುವಂತೆಯೇ, ಮಹಿಳೆಯರು ಒಟ್ಟಾಗಿ ಊರಿನ ಮೇಲೂ ಕಾಳಜಿ ತೋರಿದ್ದಾರೆ. ಆ ಮೂಲಕ ಗ್ರಾಮದ ಅಭ್ಯುದಯಕ್ಕೆ ಕಾರಣೀಭೂತರಾಗಿದ್ದಾರೆ. ಚಕ್ಕಡಿಯೂ ಸಲೀಸಾಗಿ ಹೋಗಲಾಗದಂತಹ ರಸ್ತೆಗಳು; ಎಲ್ಲ ಊರುಗಳಂತೆಯೇ ರಸ್ತೆಯ ಮೇಲೇ ಹರಿಯುವ ಕೊಳಚೆ ನೀರು; ಓಡಾಡಲು ಅಸಹ್ಯಪಡಬೇಕಾದ ಸ್ಥಿತಿ; ಬಯಲು ಶೌಚಾಲಯ; ರಸ್ತೆ ಒತ್ತುವರಿ... ಎಲ್ಲವನ್ನೂ ಕಂಡು ರೋಸಿ ಹೋಗಿದ್ದ ಈ ಗ್ರಾಮದ ಮಹಿಳೆಯರು, ಮೊಟ್ಟ ಮೊದಲು ಮಾಡಿದ ಕೆಲಸವೆಂದರೆ ಸರ್ಕಾರಿ ಜಾಗವನ್ನು ಒತ್ತುವರಿ ಮಾಡಿಕೊಂಡಿದ್ದವರ ಮನವೊಲಿಕೆ! ನಂತರ ಒತ್ತುವರಿ ತೆರವುಗೊಳಿಸಿ, ರಸ್ತೆಯನ್ನು ಉತ್ತಮ ಸ್ಥಿತಿಗೆ ತಂದಿದ್ದಾರೆ.
ಅಲ್ಲದೇ, ಕೊಳಚೆ ನೀರು ರಸ್ತೆಗೆ ಬಾರದಂತೆ ಚರಂಡಿ ನಿರ್ಮಿಸುವ ಮೂಲಕ ಇತರ ಹಳ್ಳಿಗಳಿಗೆ ಮಾದರಿಯಾಗಿದ್ದಾರೆ. ಇದಕ್ಕಿಂತಲೂ ಮುಖ್ಯವಾಗಿ ಗ್ರಾಮದಲ್ಲಿರುವ 250 ಮನೆಗಳ ಪೈಕಿ 230ಕ್ಕೆ ವೈಯಕ್ತಿಕ ಶೌಚಾಲಯಗಳನ್ನು ನಿರ್ಮಿಸಿಕೊಂಡು ಗ್ರಾಮ ನೈರ್ಮಲ್ಯಕ್ಕೂ ಒತ್ತು ನೀಡಿದ್ದಾರೆ. ಊರಿನ ಕೆಲಸಕ್ಕೆ ಅಲ್ಲಿಯ ನಿವಾಸಿಗಳೆಲ್ಲರೂ ಒಟ್ಟಾಗಿ ಕೈಜೋಡಿಸಿದ್ದಾರೆ. ಇಲ್ಲಿ ಪರಸ್ಪರ ಸಹಕಾರ–ಸಹಭಾಗಿತ್ವ ಕೆಲಸ ಮಾಡಿದೆ. ಜನರು ಮನಸ್ಸು ಮಾಡಿದರೆ ಎಂತಹ ಕೆಲಸವೂ ಸುಲಭ ಎಂಬುದನ್ನು ನಾಗರಮಡುವು ಗ್ರಾಮಸ್ಥರು ಸಾಬೀತು ಮಾಡಿದ್ದಾರೆ. ಅವರ ಈ ಕೆಲಸ ಇತರೆ ಗ್ರಾಮಗಳಿಗೆ ಆದರ್ಶಪ್ರಾಯವಾಗಿದೆ.
ಸರ್ಕಾರ ರೂಪಿಸಿದ ‘ಮಾದರಿ ಗ್ರಾಮ’, ‘ಸ್ವಚ್ಛ ಗ್ರಾಮ’ ‘ಸುವರ್ಣ ಗ್ರಾಮ’ ಯೋಜನೆಗಳು ಅನೇಕ ಕಡೆ ಹಳ್ಳ ಹಿಡಿದಿವೆ. ವಾಸ್ತವ ಸಂಗತಿ ಹೀಗಿರುವಾಗ ಇಂತಹ ಯಾವ ಯೋಜನೆ ಗ್ರಾಮಕ್ಕೆ ಮಂಜೂರು ಆಗಿಲ್ಲದಿದ್ದರೂ ತಾಲ್ಲೂಕು ಪಂಚಾಯ್ತಿ ಕಾರ್ಯನಿರ್ವಹಣಾಧಿಕಾರಿ ವೈ.ಎಂ.ಹಂಪಣ್ಣ ಅವರು ನೀಡಿದ ಮಾಹಿತಿ, ಸಲಹೆ, ಸೂಚನೆಗಳನ್ನು ರೂಢಿಸಿಕೊಂಡು ಜನರೇ ಗ್ರಾಮಾಭಿವೃದ್ಧಿಗೆ ಮುಂದಾದರು. ಈ ಗ್ರಾಮದ ಮಹಿಳೆಯರ ಆಸಕ್ತಿಯನ್ನು ಗಮನಿಸಿದ ಹಂಪಣ್ಣ, ಸರ್ಕಾರದ ವಿವಿಧ ಯೋಜನೆಗಳ ಮೂಲಕ ಹಣ ಒದಗಿಸಿ ಗ್ರಾಮವನ್ನು ಸ್ವಚ್ಛವಾಗಿಸಲು ನೆರವಾಗಿದ್ದಾರೆ.
ಇದೇ ರೀತಿಯ ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ತಾಲ್ಲೂಕಿನ ಎಲ್ಲ 86 ಗ್ರಾಮಗಳಲ್ಲೂ ಮಾಡಲಾಗಿದೆ. ಆದರೆ ಶೌಚಾಲಯಗಳನ್ನು ಕಟ್ಟಿಕೊಳ್ಳಲು ಮುಂದಾದ ಗ್ರಾಮಗಳ ಸಂಖ್ಯೆ ನಾಗರಮಡುವು ಜತೆಗೆ ಇನ್ನೆರಡು ಮಾತ್ರ. ಉಳಿದೆಡೆ ಗ್ರಾಮ ನೈರ್ಮಲ್ಯ ಕಾರ್ಯಕ್ರಮಗಳ ಬಗ್ಗೆ ಜನರು ಆಸಕ್ತಿ ತೋರುತ್ತಿಲ್ಲ. ನಮ್ಮ ಊರು ಚೆನ್ನಾಗಿರುವಂತೆ ನೋಡಿಕೊಳ್ಳುವಲ್ಲಿ ನಮ್ಮ ಪಾತ್ರವೂ ಇದೆ ಎಂಬುದನ್ನು ಜನರು ಅರಿತುಕೊಂಡು ಅಭಿವೃದ್ಧಿ ಪಥದತ್ತ ಹೆಜ್ಜೆ ಇಡಲು ಮುಂದಾಗಬೇಕಿತ್ತು. ಆದರೆ ತಮ್ಮ ಹಕ್ಕಿನ ಸೌಕರ್ಯಗಳನ್ನು ಪಡೆದುಕೊಳ್ಳಬೇಕು ಎಂಬ ಅರಿವು ಇನ್ನೂ ಉಳಿದ ಊರುಗಳ ಜನರಲ್ಲಿ ಮೂಡಿಲ್ಲ ಎಂದೆನಿಸುತ್ತದೆ.
ಭಾಷಣ ಕೇಳಿ ಸುಮ್ಮನೆ ಮನೆಗೆ ಹೋಗದ ನಾಗರಮಡುವು ಗ್ರಾಮದ ಸ್ತ್ರೀಶಕ್ತಿ ಸ್ವಸಹಾಯ ಸಂಘದ ಮಹಿಳೆಯರು ಗ್ರಾಮಕ್ಕೆ ಆಗಬೇಕಾದ ಕೆಲಸಗಳ ಪಟ್ಟಿ ಮಾಡಿಕೊಂಡು ಅವುಗಳ ಜಾರಿಗೆ ಮುಂದಾದರು. ಈ ಕಾರಣದಿಂದಲೇ ಇಂದು ಆ ಗ್ರಾಮ ಸುಧಾರಣೆಯತ್ತ ಮುಖ ಮಾಡಿದೆ ಎಂಬುದನ್ನು ಇತರೆ ಹಳ್ಳಿಗಳ ಜನರೂ ಅರಿತು, ಅಳವಡಿಸಿಕೊಳ್ಳಬೇಕು. ಗ್ರಾಮೀಣ ಭಾಗದ ಜನರ ಅಗತ್ಯಕ್ಕೆ ಅನುಗುಣವಾಗಿ ಕಾರ್ಯಕ್ರಮಗಳನ್ನು ರೂಪಿಸಿದರೆ ಎಲ್ಲವೂ ಸಾಧ್ಯವಾಗುತ್ತದೆ ಎಂಬುದಕ್ಕೆ ಈ ಊರು ನಿದರ್ಶನ. ನೈರ್ಮಲೀಕರಣದ ಬಗ್ಗೆ ತಿಳಿಸಿಕೊಡುವಾಗ ಗ್ರಾಮೀಣ ಜನರಿಗೆ ಮನಮುಟ್ಟುವಂತೆ ಹೇಳಬೇಕು. ಮೊದಲು ಅವರ ವಿಶ್ವಾಸ ಗಳಿಸಬೇಕು. ನಂತರ ಪರಿವರ್ತನೆ ತರಬಹುದು.
ನಮ್ಮಲ್ಲಿ ಸರ್ಕಾರ ರೂಪಿಸುವ ನಾನಾ ಗ್ರಾಮೀಣಾಭಿವೃದ್ಧಿ ಯೋಜನೆಗಳು ಸಮರ್ಪಕವಾಗಿ ಜಾರಿಯಾಗುವುದಿಲ್ಲ. ಇದಕ್ಕೆ ಮುಖ್ಯ ಕಾರಣ ಎಲ್ಲೋ ಕುಳಿತು ಹಳ್ಳಿಗೆ ಆಗಬೇಕಾದ ಯೋಜನೆಯನ್ನು ರೂಪಿಸುವ ಪದ್ಧತಿ. ಇಂತಹ ಯೋಜನೆಗಳನ್ನು ಗ್ರಾಮಗಳಲ್ಲಿ ಜಾರಿ ಮಾಡಲು ನಾನಾ ಅಡ್ಡಿಗಳು ಎದುರಾಗುವುದು ಸಹಜ. ಆದ್ದರಿಂದಲೇ ಪಂಚಾಯತ್ ರಾಜ್ ವ್ಯವಸ್ಥೆ ಜಾರಿಯಾದ ಮೇಲೆ ಗ್ರಾಮಗಳಿಗೆ ಅಗತ್ಯವಿರುವ ಕಾಮಗಾರಿಗಳನ್ನು ಗ್ರಾಮಸಭೆಗಳಲ್ಲೇ ತೀರ್ಮಾನಿಸಬೇಕು ಎಂಬ ನಿಯಮ ರೂಪಿಸಿರುವುದು. ಅದನ್ನು ಆಧರಿಸಿ ಸರ್ಕಾರ ನೀತಿ ರೂಪಿಸಬೇಕು.
ಆದರೆ ಈಗಲೂ ಎಷ್ಟೋ ಕಡೆ ಗ್ರಾಮಸಭೆಗಳೇ ನಡೆಯುವುದಿಲ್ಲ. ಇನ್ನು ಜನರಿಗೆ ಅಗತ್ಯವಾದ ಯೋಜನೆಗಳನ್ನು ಕೈಗೆತ್ತಿಕೊಳ್ಳುವುದು ಹೇಗೆ ಸಾಧ್ಯ? ಹಾಗಾಗಿಯೇ ಸರ್ಕಾರ ಘೋಷಿಸುವ ಅನೇಕ ಯೋಜನೆಗಳು ಕಾಗದದ ಮೇಲೆ ಮಾತ್ರ ಇರುತ್ತವೆ. ಇಲ್ಲವೇ, ಯಾವುದೋ ಕಾಮಗಾರಿಗೆ ಮಂಜೂರಾತಿ ಪಡೆದುಕೊಳ್ಳುವುದರ ಹಿಂದೆ ಇನ್ನಾರದೋ ಹಿತ ಅಡಗಿರುತ್ತದೆ. ಅದರ ಅವಶ್ಯಕತೆ ಗ್ರಾಮಕ್ಕಿಲ್ಲದಾಗ ಅದರ ಮೇಲೆ ಯಾರಿಗೂ ಲಕ್ಷ್ಯವಿರದು. ಆಗ ಅದರ ಅನುಷ್ಠಾನವೂ ಸಮರ್ಪಕವಾಗಿರುವುದಿಲ್ಲ. ರೊಕ್ಕ ಖರ್ಚಾಗಿರುತ್ತದೆ ಅಷ್ಟೆ.
ಉತ್ತರ ಕರ್ನಾಟಕದಲ್ಲಿ ‘ಸ್ವಚ್ಛ ಗ್ರಾಮ’, ‘ಸುವರ್ಣ ಗ್ರಾಮ’ ಮತ್ತಿತರ ಯೋಜನೆಗಳು ಅನುಷ್ಠಾನಗೊಂಡ ಹಳ್ಳಿಗಳಿಗೆ ಭೇಟಿ ನೀಡಿದರೆ ಈ ಮಾತಿನ ಸತ್ಯಾಂಶ ಗೊತ್ತಾಗುತ್ತದೆ. ಯೋಜನೆಗಳು ಬರುವ ಮುಂಚೆ ಆ ಗ್ರಾಮಗಳು ಹೇಗಿದ್ದವೋ ಯೋಜನೆಗಳ ಹಣ ವ್ಯಯವಾದ ಬಳಿಕವೂ ಹಾಗೇ ಇವೆ. ಪಂಚಾಯತ್ರಾಜ್ ವ್ಯವಸ್ಥೆಯ ತಿರುಳೇ ಸಹಭಾಗಿತ್ವ. ನೀತಿ ನಿರೂಪಕರು ಇದನ್ನು ಗಮನದಲ್ಲಿ ಇಟ್ಟುಕೊಳ್ಳಬೇಕು. ಸಾರ್ವಜನಿಕರು, ಅಧಿಕಾರಿಗಳು, ನೌಕರರು, ಚುನಾಯಿತ ಪ್ರತಿನಿಧಿಗಳು ಗ್ರಾಮದ ಏಳಿಗೆಗೆ ಒಟ್ಟಾಗಿ ಕೈಜೋಡಿಸಬೇಕು. ಪರಸ್ಪರ ಸಹಕಾರ, ಸಮನ್ವಯತೆ ಇದ್ದರೆ ಕೆಲಸ ಖಂಡಿತ ಆಗುತ್ತದೆ. ಆಗಷ್ಟೇ ರಾಮರಾಜ್ಯ ನಿರ್ಮಾಣ ಸಾಧ್ಯ. ಇಲ್ಲದಿದ್ದರೆ ಇದು ಬರೀ ಭಾಷಣದ ಸರಕಾಗುತ್ತದೆ.
ಗ್ರಾಮೀಣ ಪ್ರದೇಶದಲ್ಲಿ ಅನೇಕ ಅಭಿವೃದ್ಧಿ ಕಾರ್ಯಗಳ ಜಾರಿಗೆ ಸ್ವತಃ ಗ್ರಾಮ ಪಂಚಾಯ್ತಿ ಸದಸ್ಯರೇ ಅಡಚಣೆಯಾಗುತ್ತಾರೆ ಎಂಬ ಆರೋಪಗಳನ್ನು ತಳ್ಳಿಹಾಕುವಂತಿಲ್ಲ. ಅದೂ ತಮ್ಮ ಗಮನಕ್ಕೆ ತರದೇ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ ಅಥವಾ ತಮ್ಮ ವಿರೋಧಿ ನಿರ್ವಹಿಸಿದ ಕಾಮಗಾರಿಗೆ ಹಣ ಪಾವತಿ ಮಾಡಬಾರದು ಎಂಬಂತಹ ಕ್ಷುಲ್ಲಕ ಸಂಗತಿಗಳು ಅಭಿವೃದ್ಧಿಗೆ ಅಡ್ಡಿಯಾಗಿವೆ. ಇದರಲ್ಲಿ ರಾಜಕೀಯ ಲಾಭ ಪಡೆಯುವ ಹುನ್ನಾರವೂ ಅಡಗಿರುತ್ತದೆ. ಇದನ್ನೆಲ್ಲಾ ಮನಗಂಡೇ ಗ್ರಾಮ ಪಂಚಾಯ್ತಿಗೆ ಪಕ್ಷಾತೀತವಾಗಿ ಚುನಾವಣೆ ನಡೆಸಲಾಗುತ್ತಿದೆ.
ಆದರೂ ಒಂದಲ್ಲ ಒಂದು ಪಕ್ಷದೊಂದಿಗೆ ಗುರುತಿಸಿಕೊಂಡಿರುವ ಸದಸ್ಯರು ಅಭಿವೃದ್ಧಿಯಲ್ಲೂ ರಾಜಕೀಯವನ್ನೇ ಮಾಡುತ್ತಾರೆ. ಇದು ಸರಿಯಲ್ಲ. ಇಡೀ ಗ್ರಾಮದ ಅಭಿವೃದ್ಧಿ ಅವರ ಧ್ಯೇಯವಾಗಬೇಕು. ಚುನಾಯಿತ ಪ್ರತಿನಿಧಿಗಳು ಬದ್ಧತೆ, ಪ್ರಾಮಾಣಿಕತೆ, ನಿಷ್ಠೆ ರೂಢಿಸಿಕೊಂಡರೆ ಗ್ರಾಮಗಳು ಅಭಿವೃದ್ಧಿ ಹೊಂದುವುದರಲ್ಲಿ ಸಂಶಯವಿಲ್ಲ. ಇನ್ನು ಇತ್ತೀಚಿನ ದಿನಗಳಲ್ಲಿ ಹೊಸದಾಗಿ ಅಸ್ತಿತ್ವಕ್ಕೆ ಬರುವ ಸರ್ಕಾರಗಳಿಗೆ ಹೊಸ ಯೋಜನೆಗಳನ್ನು ಪ್ರಕಟಿಸುವುದು ಒಂದು ರೀತಿಯ ‘ಫ್ಯಾಷನ್’ ಆಗಿದೆ. ಜತೆಗೆ ಅವನ್ನು ತಮ್ಮ ಪಕ್ಷ ಸಂಘಟನೆಗೆ ಬಳಸಿಕೊಳ್ಳುವ ಉದ್ದೇಶ ಢಾಳಾಗಿ ಎದ್ದು ಕಾಣುತ್ತದೆ. ಬರೀ ಜನಪ್ರಿಯ ಯೋಜನೆಗಳು ಚುನಾವಣೆಯಲ್ಲಿ ಗೆಲುವಿನ ದಡ ಮುಟ್ಟಿಸುವುದಿಲ್ಲ ಎಂಬುದು ಗೊತ್ತಿದ್ದರೂ ಸರ್ಕಾರಗಳು ಪೈಪೋಟಿಗೆ ಬಿದ್ದಂತೆ ಇಂಥ ಕಾರ್ಯಕ್ರಮಗಳನ್ನು ಪ್ರಕಟಿಸುತ್ತಿವೆ.
ಹೀಗಾಗಿಯೇ ನಮ್ಮಲ್ಲಿ ಯೋಜನೆಗಳು ಮತ್ತು ಕಾರ್ಯಕ್ರಮಗಳು ದಂಡಿಯಾಗಿವೆ. ಅವುಗಳು ಅನುಷ್ಠಾನಗೊಂಡಿವೆಯೇ? ಅವುಗಳಿಂದ ಜನರಿಗೆ ಅನುಕೂಲವಾಗಿದೆಯೇ? ಸರ್ಕಾರದ ಉದ್ದೇಶ ಈಡೇರಿದೆಯೇ ಎಂಬ ಕುರಿತು ಮೌಲ್ಯಮಾಪನ ನಡೆಯುತ್ತಿಲ್ಲ. ಕಾರ್ಯಕ್ರಮಗಳ ಘೋಷಣೆಗೆ ನೀಡುವ ಒತ್ತನ್ನು ರಾಜಕೀಯ ಪಕ್ಷಗಳು ಅನುಷ್ಠಾನಕ್ಕೂ ನೀಡಿದ್ದಿದ್ದರೆ ಈ ವೇಳೆಗೆ ಭಾರತ ಅಭಿವೃದ್ಧಿ ಹೊಂದಿದ ದೇಶವಾಗಿರಬೇಕಿತ್ತು. ಈಗಿನಂತೆ ಕನಿಷ್ಠ ಸೌಕರ್ಯಕ್ಕೂ ಜನರು ಪರದಾಡಬೇಕಾದ ಸ್ಥಿತಿ ಇರುತ್ತಿರಲಿಲ್ಲ. ಇಷ್ಟಾಗಿಯೂ ವೈಫಲ್ಯಗಳಿಂದ ಸರ್ಕಾರ ಪಾಠ ಕಲಿತಿಲ್ಲದಿರುವುದು ಬೇಸರದ ಸಂಗತಿ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.