1982ರಿಂದ 1986ರವರೆಗೆ ಸಿನಿಮಾ ಬಿಟ್ಟು ಬೇರೇನನ್ನೂ ಯೋಚಿಸಲು ನನಗೆ ಪುರುಸೊತ್ತೇ ಇರಲಿಲ್ಲ. ಯಾವುದಾದರೂ ಚಿತ್ರ ನೋಡಿ, ಅದು ಹಿಡಿಸಿದರೆ ಕನ್ನಡದಲ್ಲಿ ಅದನ್ನು ಹೇಗೆ ರೂಪಿಸಿದರೆ ಚೆನ್ನ ಎಂದು ತಕ್ಷಣಕ್ಕೆ ಮನಸ್ಸು ಯೋಚಿಸುತ್ತಿದ್ದ ಕಾಲಘಟ್ಟ ಅದು. `ಗೆದ್ದ ಮಗ', `ಬ್ರಹ್ಮಗಂಟು', `ಪ್ರಚಂಡ ಕುಳ್ಳ', `ಇಂದಿನ ರಾಮಾಯಣ', `ಮದುವೆ ಮಾಡು ತಮಾಷೆ ನೋಡು', `ಆನಂದ ಭೈರವಿ', `ಪೊಲೀಸ್ ಪಾಪಣ್ಣ', `ನೀ ಬರೆದ ಕಾದಂಬರಿ', `ಅಡತ್ತವಾರಿಸ್', `ನಾನ್ ಅಡಿಮೆ ಇಲ್ಲೈ', `ಗಂಗ್ವಾ' ಹೀಗೆ ಒಂದಾದಮೇಲೆ ಒಂದರಂತೆ ಚಿತ್ರಗಳನ್ನು ನಿರ್ಮಿಸಿದೆ. ಪ್ರೀತಿ ಪಾತ್ರರ ಒತ್ತಾಯಕ್ಕೆ ಮಣಿದು ನಿರ್ದೇಶಕನೂ ಆದೆ. ನಾಲ್ಕು ವರ್ಷದ ಅವಧಿಯಲ್ಲಿ ಹನ್ನೆರಡು ಚಿತ್ರಗಳನ್ನು ನಿರ್ಮಿಸುವುದು ತಮಾಷೆಯ ಮಾತಲ್ಲ. ಅವುಗಳಲ್ಲಿ ಮೂರು ರಜನೀಕಾಂತ್ ಅಭಿನಯದ ಚಿತ್ರಗಳೆಂಬುದು ಇನ್ನೊಂದು ಮುಖ್ಯವಾದ ಅಂಶ.