ನಮ್ಮ ವರ್ತನೆಯಲ್ಲಿ ಶಿಸ್ತು, ನಿಯಮಗಳು ಇರಬೇಕಾಗುತ್ತದೆ. ಹಾಗಿಲ್ಲದಿದ್ದರೆ ನಾವು ವಿಶ್ವಾಸಕ್ಕೆ ಅನರ್ಹರಾಗುತ್ತೇವೆ. ನಮ್ಮ ಮೇಲಿನ ಶ್ರದ್ಧೆಯನ್ನೂ ಕಳೆದುಕೊಳ್ಳುತ್ತೇವೆ. ಪರಸ್ಪರ ಶ್ರದ್ಧೆ ವಿಶ್ವಾಸಗಳು ಹೊರಟು ಹೋಯಿತೆಂದರೆ ಸಾಮಾಜಿಕ ಜೀವನವೇ ಅಸ್ಥಿರವಾಗುತ್ತದೆ. ಎಲ್ಲರ ಜೀವನವೂ ದುಃಖಮಯವಾಗುತ್ತದೆ. ಈ ರೀತಿ ನಮ್ಮ ಜೀವನವನ್ನು ನಿಯಮಬದ್ಧವನ್ನಾಗಿಸುವುದೇ, ಶಿಸ್ತುಗೊಳಿಸುವುದೇ ನೈತಿಕತೆ, ಪ್ರಾಮಾಣಿಕವಾಗಿರುವುದು, ಸತ್ಯವನ್ನೇ ನುಡಿಯುವುದು, ಕೊಟ್ಟ ಮಾತಿನಂತೆ ನಡೆದುಕೊಳ್ಳುವುದು, ಇತರರ ಆಸ್ತಿಯನ್ನು ನೇರವಾಗಿಯೋ, ಪರೋಕ್ಷವಾಗಿಯೋ ಕದಿಯದಿರುವುದು, ಇತರರನ್ನು ಯಾವುದೇ ರೀತಿಯಲ್ಲಿಯೂ ಹಿಂಸಿಸದಿರುವುದು, ಇಂದ್ರಿಯನಿಗ್ರಹ...ಇತ್ಯಾದಿ ನೈತಿಕ ಗುಣಗಳೆಲ್ಲವೂ ನಾವು ಸಮಾಜದಲ್ಲಿ ಶಾಂತಿಯಿಂದ, ನೆಮ್ಮದಿಯಿಂದ ಸಹಬಾಳ್ವೆ ನಡೆಸುವುದಕ್ಕೆ ಅತ್ಯಂತ ಅವಶ್ಯಕ ಎಂಬುದನ್ನು ಪ್ರತ್ಯೇಕ ಹೇಳಬೇಕಾಗಿಲ್ಲ.