ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಕಷ್ಟಿ: ಕಷ್ಟಗಳ ಪರಿಹಾರಿ

Last Updated 21 ಜೂನ್ 2019, 19:30 IST
ಅಕ್ಷರ ಗಾತ್ರ

ಚ ತುರ್ಥಿತಿಥಿಯಂದು ಆಚರಿಸುವ ವ್ರತಗಳಲ್ಲಿ ಸಂಕಷ್ಟಹರ ಚತುರ್ಥಿಯೂ ಒಂದು. ಹೆಸರೇ ಹೇಳುವಂತೆ ಕಷ್ಟದಿಂದ ಪಾರಾಗಲು ಈ ವ್ರತವನ್ನು ಮಾಡುತ್ತಾರೆ. ಇದನ್ನು ಸಂಕ್ಷಿಪ್ತವಾಗಿ ಕನ್ನಡದಲ್ಲಿ ‘ಸಂಕಷ್ಟಿ’ ಅಥವಾ ‘ಸಂಕಷ್ಟವ್ರತ’ವೆಂದೂ ಹೇಳುತ್ತಾರೆ. ಚತುರ್ಥಿಯು ಒಂದು ತಿಂಗಳಲ್ಲಿ ಎರಡು ಸಲ ಬರುತ್ತದೆ. ಅವುಗಳಲ್ಲಿ ಕೃಷ್ಣಪಕ್ಷದ ಚತುರ್ಥಿಯಂದೇ ಸಂಕಷ್ಟಿಯನ್ನು ಆಚರಿಸುತ್ತಾರೆ. ಅಂದು ಮಂಗಳವಾರವಾದರೆ ‘ಅಂಗಾರಕ ಚತುರ್ಥಿ’ ಎನ್ನುತ್ತಾರೆ. ಅಂಗಾರಕ ಚತುರ್ಥಿಗೆ ಹೆಚ್ಚಿನ ಮಹತ್ತ್ವವಿದೆ.

ಸಂಕಷ್ಟಿಯನ್ನು ಆಚರಿಸುವವರು ಕೃಷ್ಣ ಪಕ್ಷದ ಚತುರ್ಥಿಯಂದು ಉಪವಾಸ ಮಾಡುತ್ತಾರೆ. ಸಂಜೆ ವ್ರತವನ್ನು ಆಚರಿಸಿ, ಚಂದ್ರದರ್ಶನ ಮಾಡುವುದರೊಂದಿಗೆ ಉಪವಾಸ ಕೊನೆಗೊಳ್ಳುತ್ತದೆ. ಒಂದು ವರ್ಷದಲ್ಲಿ ಅಧಿಕ ಮಾಸವಿಲ್ಲದಿದ್ದಾಗ ಚೈತ್ರಮಾಸದಿಂದ ಹನ್ನೆರಡು ಕೃಷ್ಣ ಪಕ್ಷಗಳಿರುತ್ತವೆ. ಹಾಗಾಗಿ ಸಂಕಷ್ಟಿಯ ಸಂಖ್ಯೆಯೂ ಹನ್ನೆರಡು. ಅಧಿಕ ಮಾಸವಿದ್ದಾಗ ಈ ಸಂಖ್ಯೆ ಹದಿಮೂರಕ್ಕೇರುತ್ತದೆ.

ಪೂಜಾ ವಿಧಾನ

ಈ ದಿನ ಬೆಳಿಗ್ಗೆ ಎಳ್ಳನ್ನು ಅರೆದು ನೆಲ್ಲಿಯ ಹಿಟ್ಟಿನೊಂದಿಗೆ ಹಾಲು ಅಥವಾ ಎಣ್ಣೆಯಲ್ಲಿ ಬೆರೆಸಿ ತಲೆಗೆ ಹಚ್ಚಿ ಮಂಗಳಸ್ನಾನ ಮಾಡಬೇಕು. ಸ್ನಾನವಾದ ಮೇಲೆ ಸಂಕಷ್ಟಹರ ಗಣಪತಿ ವ್ರತದ ಸಂಕಲ್ಪ ಮಾಡಬೇಕು. ದಿನವೆಲ್ಲ ಉಪವಾಸ ಇರಬೇಕು. ಅದು ಅಸಾಧ್ಯವಾದರೆ
ಹಾಲು, ಹಣ್ಣು ಸೇವಿಸಬಹುದು. ಕೆಲವರು ಅನ್ನವನ್ನು ಬಿಟ್ಟು ಉಪ್ಪಿಟ್ಟು ಅವಲಕ್ಕಿ ಮುಂತಾದವುಗಳನ್ನು ಸ್ವೀಕರಿಸುತ್ತಾರೆ.

ಪೂಜೆಯ ಮಾಡುವ ಸ್ಥಳವನ್ನು ಗೋಮಯದಿಂದ ಶುದ್ಧಗೊಳಿಸಿ, ಅಷ್ಟದಳ ಗಣಪತಿ ಮಂಡಲವನ್ನು ಬಿಳಿಯ ಮಣ್ಣಿನಿಂದ ಬರೆಯಬೇಕು. ಅರಿಸಿನ ಕುಂಕುಮಗಳಿಂದ ಮಂಡಲವನ್ನು ಅಲಂಕರಿಸಬೇಕು. ಇದರ ಮೇಲೆ ಕಲಶವನ್ನು ಸ್ಥಾಪಿಸುವುದಕ್ಕಾಗಿ ಎರಡು ಕುಡಿಬಾಳೆಯ ಮೇಲೆ ಅಕ್ಕಿಯನ್ನು ಹರಡಬೇಕು. ಅದರ ಮೇಲೆ ಮೃತ್ತಿಕೆ ನಾಣ್ಯ ಮತ್ತು ನೀರು ಹಾಕಿದ ಕಲಶವನ್ನಿಟ್ಟು, ಅದರ ಮೇಲೆ ಮಾವಿನ ಚಿಗುರು ತೆಂಗಿನಕಾಯಿ ನಾಣ್ಯ ಪವಿತ್ರ ಉಪವೀತಗಳನ್ನು ಇಟ್ಟು, ಎದುರಲ್ಲಿ ವೀಳ್ಯದ ಎಲೆ ಅಡಿಕೆ ಬಾಳೆಹಣ್ಣು ಇಡಬೇಕು. ಈ ಕಲಶಕ್ಕೆ ಪೂಜೆ ಮಾಡಿ ಗಣಪತಿಯನ್ನು ಆವಾಹನೆ ಮಾಡಿ, ಷೋಡಶೋಪಚಾರ ಪೂಜೆ ಮಾಡಬೇಕು.

ಆಸನ ಧ್ಯಾನ ಪಾದ್ಯ ಅರ್ಘ್ಯ ಆಚಮನೀಯ ಪಂಚಾಮೃತ ವಸ್ತ್ರ ಉಪವೀತ ಆಭರಣ ಗಂಧ ಅಕ್ಷತೆ ಹೂ ಮುಂತಾದ ಉಪಚಾರಗಳಾದ ಮೇಲೆ ದೂರ್ವೆಗಳಿಂದ (ಎಂದರೆ ಗರಿಕೆಯಿಂದ) ಅಷ್ಟೋತ್ತರ ಶತ ಅಥವಾ ಅಷ್ಟೋತ್ತರ ಸಹಸ್ರನಾಮ ಪೂಜೆ ಮಾಡಬೇಕು.

ಕಥಾಶ್ರವಣ

ಸುಲಭನೆಂಬ ಕ್ಷತ್ರಿಯನು ಸಮುದ್ರೆಯೆಂಬ ಪತ್ನಿಯೊಂದಿಗೆ ಪುರಾಣವನ್ನು ಕೇಳುತ್ತಿದ್ದಾಗ ಮಧುಸೂದನ ಎಂಬವನು ಅಲ್ಲಿಗೆ ಬಂದನು. ಅವನನ್ನು ನೋಡಿ ಸುಲಭನು ನಗೆಯಾಡಲು, ಸಿಟ್ಟಿಗೆದ್ದ ಮಧುಸೂದನನು ಎತ್ತಾಗುವಂತೆ ಸುಲಭನನ್ನು ಶಪಿಸಿದನು. ಇದರಿಂದ ಕೋಪಗೊಂಡ ಸುಲಭೆಯು ಮಧುಸೂದನನು ಕತ್ತೆಯಾಗುವಂತೆ ಶಪಿಸಿದಳು. ಇದರಿಂದ ಇನ್ನೂ ಕೋಪಗೊಂಡ ಮಧುಸೂದನನು ಆಕೆಗೆ ಪತಿತಳಾಗುವಂತೆ ಶಪಿಸಿದನು. ಹೀಗೆ ಮೂವರೂ ಶೋಚನೀಯ ಸ್ಥಿತಿಗೆ ತಲುಪಿ ಸಂಚರಿಸುತ್ತಿರುವಾಗ ದೇವಾಲಯವೊಂದರಲ್ಲಿ ಸಂಕಷ್ಟಹರ ಗಣಪತಿಯ ಪೂಜೆ ನಡೆಯುತ್ತಿದ್ದುದನ್ನು ನೋಡಿದರು. ಈ ಶಾಪಗ್ರಸ್ತರಿಗೆ ಅಲ್ಲಿ ಸ್ಥಳವು ದೊರೆಯದಿದ್ದರೂ ಪರಲೋಕದಲ್ಲಿ ಸುಸ್ವಾಗತವು ದೊರೆಯಿತು.

ಕೌಂಡಿನ್ಯ ಆಶ್ರಯೆ ಎಂಬ ದಂಪತಿಗಳು ದೂರ್ವೆಯ ಮಹಿಮೆಯನ್ನು ಚರ್ಚಿಸುತ್ತಾರೆ. ಯಮಲೋಕದ ಉತ್ಸವವೊಂದರಲ್ಲಿ ಯಮನು ತಿಲೋತ್ತಮೆಯ ನರ್ತನದಿಂದ ಆಕರ್ಷಿತನಾದನು. ಕೂಡಲೇ ಅಲ್ಲಿಂದ ಹೊರಟರೂ ಯಮನ ತೇಜಸ್ಸಿನಿಂದ ಜ್ವಾಲಾಮಾಲಿಯೆಂಬ ಅಯೋನಿಜನು ಜನಿಸಿದನು. ಲೋಕಕಂಟಕನಾದ ಅವನನ್ನು ಕೊಲ್ಲಲು ಗಣಪತಿಯೇ ಬರಬೇಕಾಯಿತು. ಅನಲಾಸುರನನ್ನೂ ಆಗ ಸಂಹರಿಸಿದ ಗಣೇಶನಿಗೆ ಚಂದ್ರ ಸಿದ್ಧಿ ಬುದ್ಧಿ ತಾವರೆ ಶೇಷ ಮುಂತಾದವು ಕೊಡುಗೆಯಾಗಿ ದೊರೆತವು. ಆದರೆ ಅವನಿಗೆ ಮನಃಶಾಂತಿ ದೊರೆಯದೆ, ದೂರ್ವಾರ್ಚನೆ ಮಾಡಿದ ಮೇಲೆಯೇ ಮನಸ್ಸಿಗೆ ಶಾಂತಿ ದೊರೆಯಿತು.

ಮಿಥಿಲೆಯ ರಾಜನಾದ ಜನಕನು ಅಪರಿಮಿತವಾಗಿ ಅನ್ನದಾನ ಮಾಡುತ್ತಿದ್ದರೂ ಅವನ ಸಂಪತ್ತು ಹಾಗೆಯೇ ಇದ್ದಿತು. ಇದರಿಂದ ಗರ್ವಿತನಾದ ರಾಜನನ್ನು ಸಾತ್ವಿಕನನ್ನಾಗಿಸಲು ಗಣಪತಿಯು ಕುಷ್ಠರೋಗಿಯಾಗಿ ಬಂದು ಭೋಜನಶಾಲೆಯಲ್ಲಿ ಉಂಡು ಅನ್ನವಿಲ್ಲದಂತೆ ಮಾಡಿದನು. ಬಡದಂಪತಿಗಳ ದೂರ್ವೆಯೊಂದರಿಂದ ತೃಪ್ತನಾಗಿ ಅವರಿಗೆ ವರದಾನ ಮಾಡಿದ್ದನ್ನು ನೋಡಿದ ಮೇಲೆ ರಾಜನಿಗೆ ಜ್ಞಾನೋದಯವಾಯಿತು.

ಆಶ್ರಯೆಯು ನಾರದರ ಸೂಚನೆಯಂತೆ ದೂರ್ವಾದಳದ ಭಾರಕ್ಕೆ ಸರಿಯಾದ ಚಿನ್ನವನ್ನು ಯಾಚಿಸಲು ಇಂದ್ರ ಕುಬೇರ ವಿಷ್ಣು ಶಿವ ಮುಂತಾದ ಮಹಾಮಹಿಮರೆಲ್ಲರೂ ಅದನ್ನು ನೀಡುವಲ್ಲಿ ವಿಫಲರಾದರು. ಕೃತವೀರ್ಯ ಶೂರಸೇನ ಸ್ಕಂದ ಪಾರ್ವತೀ ದಮಯಂತೀ ನಳ ಪ್ರದ್ಯುಮ್ನ ರುಕ್ಮಿಣೀ ಶ್ರೀಕೃಷ್ಣ ಮುಂತಾದವರು ಆಚರಿಸಿದ ಈ ವ್ರತ ಅಸಾಧಾರಣವಾದುದು.

ಕಥಾಶ್ರವಣವಾದ ಮೇಲೆ ಉತ್ತರಪೂಜೆ ಮಾಡಬೇಕು. ಧೂಪ ದೀಪವಾದ ಮೇಲೆ ನೈವೇದ್ಯಕ್ಕೆ ಕರಿಗಡುಬು, ಮೋದಕ ಇಡಬೇಕು.

ಮೈದಾಹಿಟ್ಟು, ರವೆಯನ್ನು ಕಲಸಿ ಕಣಕ ಮಾಡಿ, ಒಳಗೆ ಹೂರಣ ಸೇರಿಸಿ ಎಣ್ಣೆಯಲ್ಲಿ ಕರಿಯುತ್ತಾರೆ. ಹೂರಣವನ್ನು ಎರಡು ತರಹ ಮಾಡುತ್ತಾರೆ. ಕೊಬ್ಬರಿತುರಿ, ಸಕ್ಕರೆ, ಏಲಕ್ಕಿ ಅಥವಾ ಬೆಲ್ಲ, ಕಾಯಿ ತುರಿ, ಏಲಕ್ಕಿ. ಈ ದಿನ ಕಡುಬು ಮಾಡುವಾಗ ಹೂರಣಕ್ಕೆ ಎಳ್ಳನ್ನು ಸೇರಿಸಬೇಕು. ನೈವೇದ್ಯಕ್ಕೆ ಕನಿಷ್ಠ ಇಪ್ಪತ್ತೊಂದು ಕರಿಗಡಬು ಮತ್ತು ಮೋದಕಗಳನ್ನು ಮಾಡಿಕೊಳ್ಳಬೇಕು. ಪೂಜೆಯ ನಂತರ ಕಡಬು, ಮೋದಕ ದಾನ ಮಾಡಿ, ಉಳಿದ ಕಡಬು, ಮೋದಕಗಳನ್ನು ಪ್ರಸಾದವಾಗಿ ಸ್ವೀಕರಿಸಬೇಕು. ಎಷ್ಟು ಬೇಕೋ ಅಷ್ಟು ಕರಿಗಡುಬು, ಮೋದಕ ಮಾಡಿಕೊಳ್ಳಬಹುದು.

ನೈವೇದ್ಯವಾದ ಮೇಲೆ ಫಲ ಸಮರ್ಪಣ, ದೂರ್ವಾಪೂಜೆ, ಮಂಗಳಾರತಿ, ಮಂತ್ರಪುಷ್ಪ, ಪ್ರದಕ್ಷಿಣ, ನಮಸ್ಕಾರ, ಪ್ರಸನ್ನಾರ್ಘ್ಯ, ಪ್ರಾರ್ಥನೆ ಮಾಡಿ ಪೂಜಾ ಸಮಾಪ್ತಿ ಮಾಡಬೇಕು. ವಾಯನದಾನ, ತೀರ್ಥಪ್ರೋಕ್ಷಣ, ಕಲಶದಾನಗಳಿಂದ ಪೂಜೆ ಸಾಂಗವಾಗಿ ನೆರವೇರುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT