ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾರ ಭವಿಷ್ಯ | 2023ರ ಫೆಬ್ರುವರಿ 12 ರಿಂದ 18ರವರೆಗೆ

Last Updated 11 ಫೆಬ್ರುವರಿ 2023, 19:31 IST
ಅಕ್ಷರ ಗಾತ್ರ

ಮೇಷ ರಾಶಿ (ಅಶ್ವಿನಿ ಭರಣಿ ಕೃತಿಕ 1)
ಪ್ರಭಾವಿ ವ್ಯಕ್ತಿಯೊಬ್ಬರ ಸಹಾಯದಿಂದ ನಿಮ್ಮ ವೈಯಕ್ತಿಕ ಕೆಲಸಗಳನ್ನು ಮಾಡಿಕೊಳ್ಳುವಿರಿ. ಸಂಸ್ಥೆಯ ಸಲಹೆಗಾರರು ಆಗಿರುವವರಿಗೆ ಒತ್ತಡ ಹೆಚ್ಚಾಗಬಹುದು. ಜನರನ್ನು ನೀವು ನೋಡುವ ರೀತಿ ಬದಲಾದಾಗ ಜನರು ನಿಮಗೆ ಒಳ್ಳೆಯವರಂತೆ ಕಾಣುವರು. ಹಿತಶತ್ರುಗಳ ಬಗ್ಗೆ ಹೆಚ್ಚು ಎಚ್ಚರವಹಿಸಿರಿ. ಹಣದ ಒಳಹರಿವು ಕಡಿಮೆ ಇದ್ದು ಆದಾಯಕ್ಕಿಂತ ಖರ್ಚು ಹೆಚ್ಚಾಗುವ ಸಂದರ್ಭವಿದೆ. ಕೃಷಿಯಿಂದ ಆದಾಯವಿರುತ್ತದೆ. ಮಹಿಳೆಯರ ಶೃಂಗಾರ ವಸ್ತುಗಳನ್ನು ಮಾರಾಟ ಮಾಡುವವರಿಗೆ ವ್ಯಾಪಾರ ಹೆಚ್ಚುತ್ತದೆ. ಹಿರಿಯ ಅಧಿಕಾರಿಗಳನ್ನು ಹೆಚ್ಚು ಓಲೈಕೆ ಮಾಡಿ ವಿಶ್ವಾಸ ಗಳಿಸಿಕೊಳ್ಳುವಿರಿ. ಮಕ್ಕಳ ಒಳಿತಿಗಾಗಿ ದೈವ ಕಾರ್ಯವನ್ನು ಮನೆಯಲ್ಲಿ ಹಮ್ಮಿಕೊಳ್ಳುವಿರಿ. ಆಸ್ತಿ ವಿಚಾರದಲ್ಲಿ ಒಂದು ಹೆಜ್ಜೆ ಮುಂದಡಿ ಇಡುವಿರಿ.

ವೃಷಭ ರಾಶಿ (ಕೃತಿಕಾ2 3 4 ರೋಹಿಣಿ ಮೃಗಶಿರಾ1 2)
ಉದ್ಯೋಗ ಆಕಾಂಕ್ಷಿಗಳಿಗೆ ಸಂದರ್ಶನದ ಕರೆಗಳು ಬರಬಹುದು. ಅದಕ್ಕೆ ಬೇಕಾದ ತಯಾರಿ ಮಾಡಿಕೊಳ್ಳಿ. ನಿಮ್ಮ ಅಂತಃಚಕ್ಷುವಿನ ಕೆಲವು ಸ್ಪಷ್ಟ ತೀರ್ಮಾನಗಳು ಗೆಲುವು ತರುತ್ತವೆ. ವೃತ್ತಿಯಲ್ಲಿ ಕಾರ್ಯಸಾಧನೆ ಮಾಡಿ ಹೆಸರು ಗಳಿಸುವಿರಿ. ತಾಯಿ ಆರೋಗ್ಯದಲ್ಲಿ ಚೇತರಿಕೆ ಕಾಣಬಹುದು. ಬರಹಗಾರರು ತಮ್ಮ ಹೊಸ ಬರವಣಿಗೆಯನ್ನು ಆರಂಭ ಮಾಡುವರು. ಕೆಲವೊಂದು ಸಮಸ್ಯೆಗಳಿಂದ ಹೊರಬಂದು ನೆಮ್ಮದಿ ಕಾಣುವಿರಿ. ಹಣದ ಒಳಹರಿವು ನಿಮ್ಮ ನಿರೀಕ್ಷೆಯನ್ನು ತಲುಪುತ್ತದೆ. ವಿದೇಶದಲ್ಲಿರುವ ವಿದ್ಯಾರ್ಥಿಗಳ ಖರ್ಚು ಹೆಚ್ಚಾಗುವ ಸಾಧ್ಯತೆ ಇದೆ. ಕೃಷಿಕರಿಗೆ ಬೇಕಾದ ಸೂಕ್ತ ಮಾರ್ಗದರ್ಶನ ಇಲಾಖೆ ವತಿಯಿಂದ ದೊರೆಯುತ್ತದೆ. ತಂದೆಯಿಂದ ವ್ಯವಹಾರಗಳ ಬಗ್ಗೆ ತಿಳಿದುಕೊಳ್ಳುವ ಸಂದರ್ಭವಿದೆ. ಅದಿರು ವ್ಯಾಪಾರಿಗಳಿಗೆ ಲಾಭವಿದೆ.

ಮಿಥುನ ರಾಶಿ (ಮೃಗಶಿರಾ 3.4 ಆರಿದ್ರಾ ಪುನರ್ವಸು 1 2 3)
ಉದ್ದಿಮೆದಾರರು ಹೊಸ ಯಂತ್ರೋಪಕರಣಗಳನ್ನು ಖರೀದಿ ಮಾಡುವ ಸಂದರ್ಭವಿದೆ. ವಾಹನದ ಬಿಡಿಭಾಗಗಳನ್ನು ಮಾರಾಟ ಮಾಡುವವರ ವ್ಯವಹಾರ ಸಾಕಷ್ಟು ವಿಸ್ತರಣೆಯಾಗಿ ಲಾಭ ಹೆಚ್ಚುತ್ತದೆ. ಲಲಿತ ಕಲೆಯನ್ನು ಕಲಿಯುತ್ತಿರುವವರಿಗೆ ಸೂಕ್ತ ಗುರುಗಳ ಜೊತೆ ಸಫಲತೆ ದೊರೆಯುತ್ತದೆ. ರಬ್ಬರಿನಿಂದ ತಯಾರಿಸುವ ಉಪ ಉತ್ಪಾದನೆಗಳನ್ನು ಮಾರಾಟ ಮಾಡುವವರಿಗೆ ವ್ಯವಹಾರ ಸಾಕಷ್ಟು ನಡೆಯುತ್ತದೆ. ಹೊಸ ನಂಬಿಕಸ್ಥ ಪಾಲುದಾರರು ನಿಮ್ಮ ವ್ಯವಹಾರಕ್ಕೆ ದೊರೆತು ನಿಮಗೆ ಸಂತಸವಾಗುವುದು. ಲೇವಾದೇವಿ ವ್ಯವಹಾರ ಮಾಡುವವರಿಗೆ ನಿರೀಕ್ಷಿಸಿದಷ್ಟು ಅಭಿವೃದ್ಧಿ ಇರುವುದಿಲ್ಲ. ಸಾಲ ಕೊಡುವ ಮುನ್ನ ಎರಡೆರಡು ಬಾರಿ ಆಲೋಚನೆ ಮಾಡಿರಿ. ನಿಮ್ಮ ಧನ ಆದಾಯವೂ ಸಾಮಾನ್ಯವಾಗಿರುತ್ತದೆ. ಹೆಣ್ಣುಮಕ್ಕಳಿಗೆ ತಂದೆಯಿಂದ ಪಿತ್ರಾರ್ಜಿತ ಆಸ್ತಿ ಸಿಗುವ ಸಂದರ್ಭವಿದೆ.

ಕಟಕ ರಾಶಿ (ಪುನರ್ವಸು 4 ಪುಷ್ಯ ಆಶ್ಲೇಷ)
ನ್ಯಾಯಾಲಯದ ಹೋರಾಟಗಳಲ್ಲಿ ಸ್ವಲ್ಪಮಟ್ಟಿನ ಹಿನ್ನಡೆಯಾಗುವ ಸಂದರ್ಭವಿದೆ. ಆದರೆ, ನಿಮ್ಮ ನಿಲುವಿನಿಂದ ಹಿಂದೆ ಸರಿದಲ್ಲಿ ಸಂಪೂರ್ಣ ನಷ್ಟವಾಗುತ್ತದೆ. ಉನ್ನತ ವಿದ್ಯಾಭ್ಯಾಸ ಮಾಡಬೇಕೆಂದಿರುವವರಿಗೆ ಪರಿಚಿತರ ಮೂಲಕ ಧನಸಹಾಯ ಸಿಗುವ ಸಾಧ್ಯತೆಗಳಿವೆ. ಕೈಮಗ್ಗದ ವಸ್ತುಗಳನ್ನು ತಯಾರಿಸಿ ಮಾರಾಟ ಮಾಡುವವರಿಗೆ ವ್ಯವಹಾರ ಹೆಚ್ಚಾಗುತ್ತದೆ. ಕೆಲಸಗಳಲ್ಲಿ ಯಶಸ್ಸು ಸಾಕಷ್ಟು ಖಚಿತವೆಂದಿದ್ದರೂ ಮೈಮರೆಯುವುದು ಬೇಡ. ವೃತ್ತಿಯಲ್ಲಿ ವರ್ಗಾವಣೆ ಬಯಸುತ್ತಿರುವವರಿಗೆ ಅಪೇಕ್ಷಿತ ಸ್ಥಳಕ್ಕೆ ವರ್ಗಾವಣೆ ದೊರೆಯುತ್ತದೆ. ನಿಮ್ಮ ಯೋಜನೆಗೆ ತಾಯಿ, ತಂಗಿ, ಸಂಗಾತಿ ಮೊದಲಾದವರಿಂದ ಸಹಾಯ ದೊರೆಯುತ್ತದೆ. ಸಮಾಜಸೇವೆ ಮಾಡಿ ಹೆಸರು ಗಳಿಸುವ ಇಚ್ಛೆ ಇರುತ್ತದೆ. ಕೆಮ್ಮು ಮತ್ತು ಕಫ ಇರುವವರು ಹೆಚ್ಚು ಎಚ್ಚರವಹಿಸಿರಿ.

ಸಿಂಹ ರಾಶಿ (ಮಖ ಪೂರ್ವಪಲ್ಗುಣಿ ಉತ್ತರ ಫಲ್ಗುಣಿ 1)
ನಿಮ್ಮ ಸಂಕಷ್ಟಗಳಿಗೆ ಹಿರಿಯರಿಂದ ನೆರವು ಸಿಗಲಿದೆ. ಉಳಿತಾಯದ ವಿಷಯದಲ್ಲಿ ಹಣ ಹೆಚ್ಚು ಕಡಿಮೆಯಾಗಿ ನಷ್ಟ ಆಗಬಹುದು. ಹಣದ ಒಳಹರಿವು ಮಂದಗತಿಯಲ್ಲಿರುತ್ತದೆ. ರಾಜಕೀಯದಲ್ಲಿರುವವರಿಗೆ ಮೇಲುಗೈ ಸಾಧಿಸಲು ಪೂರಕವಾದ ವಾತಾವರಣವೂ ದೊರೆಯುತ್ತದೆ. ವಿದ್ಯಾರ್ಥಿಗಳಿಗೆ ಅಧ್ಯಯನದಲ್ಲಿ ಸ್ವಲ್ಪ ಹಿನ್ನಡೆ ಆಗಬಹುದು. ಸ್ವಂತ ವ್ಯಾಪಾರದಲ್ಲಿ ತಕ್ಷಣದಲ್ಲಿ ಲಾಭವಿಲ್ಲದಿದ್ದರೂ ನಂತರ ಲಾಭ ದೊರೆಯುತ್ತದೆ. ಅವಶ್ಯಕತೆಗಿಂತ ಹೆಚ್ಚು ಮಾತಾಡುವುದು ನಿಮಗೆ ಒಳಿತಲ್ಲ. ಕೆಲವೊಂದು ಅಭಿವೃದ್ಧಿ ಕೆಲಸಗಳಲ್ಲಿ ನಿಮಗೆ ಮುನ್ನಡೆ ಕಾಣುತ್ತದೆ. ಬಂಧುಗಳೊಡನೆ ಕೆಲವೊಂದು ವಿಚಾರಗಳಲ್ಲಿ ಭಿನ್ನಾಭಿಪ್ರಾಯ ಉಂಟಾಗಬಹುದು. ಕರಕುಶಲ ವಸ್ತುಗಳನ್ನು ತಯಾರಿಸಿ ಮಾರುವವರಿಗೆ ಹೆಚ್ಚಿನ ಲಾಭವಿರುತ್ತದೆ. ಕೃಷಿ ವ್ಯವಹಾರಗಳಲ್ಲಿ ಹೆಚ್ಚಿನ ಲಾಭವಿರುತ್ತದೆ.

ಕನ್ಯಾ ರಾಶಿ (ಉತ್ತರ ಫಲ್ಗುಣಿ 2 3 4 ಹಸ್ತಾ ಚಿತ್ತಾ 1.2)
ಬದುಕಿನಲ್ಲಿ ಅತಿ ವಿಲಾಸಿತನ ಬೇಡ. ಕೆಲಸಗಳ ಮೇಲುಸ್ತುವಾರಿಯನ್ನು ನೋಡಿಕೊಳ್ಳುತ್ತಿರುವವರಿಗೆ ಕಾರ್ಮಿಕರ ಅಸಹಕಾರ ಬಹಳ ಕಷ್ಟ ತರಬಹುದು. ಹಣದ ಒಳಹರಿವು ಮಂದಗತಿಯಲ್ಲಿರುತ್ತದೆ. ಬಂಧುಗಳ ಸಹಾಯ ನಿಮ್ಮ ಕಷ್ಟದಲ್ಲಿ ಒದಗಿ ಬರುತ್ತದೆ. ವಿದ್ಯಾರ್ಥಿಗಳಿಗೆ ಅಧ್ಯಯನದಲ್ಲಿ ಯಶಸ್ಸು ದೊರೆಯುತ್ತದೆ. ಅವರಿಗೆ ಬರಬೇಕಾದ ಸಹಾಯಧನ ಹರಿದು ಬರುತ್ತದೆ. ಮೂತ್ರ ಸಂಬಂಧಿ ಕಾಯಿಲೆ ಇರುವವರು ಚಿಕಿತ್ಸೆ ಪಡೆಯುವುದು ಒಳ್ಳೆಯದು. ಸಂಗಾತಿ ಆದಾಯದಲ್ಲಿ ಹೆಚ್ಚಳ ಕಂಡರೂ ಅಷ್ಟೇ ಖರ್ಚು ಇರುತ್ತದೆ. ವಿದೇಶದಲ್ಲಿ ಉದ್ಯೋಗದಲ್ಲಿರುವವರಿಗೆ ಅನುಕೂಲತೆಗಳು ಒದಗಿ ಬರುತ್ತವೆ. ಕೃಷಿ ಪಂಡಿತರು ವಿದೇಶಕ್ಕೆ ಹೋದಲ್ಲಿ ಹೆಚ್ಚು ಮಾನ್ಯತೆಯು ದೊರೆಯುತ್ತದೆ. ಉದ್ಯೋಗದಲ್ಲಿದ್ದ ತೊಂದರೆಗಳು ನಿಧಾನವಾಗಿ ಕಡಿಮೆಯಾಗುತ್ತವೆ.

ತುಲಾ ರಾಶಿ (ಚಿತ್ತಾ 3 4 ಸ್ವಾತಿ ವಿಶಾಖ 1 2 3)
ಬಂದ ಅವಕಾಶಗಳನ್ನು ಯುವಕರು ಸಮರ್ಥವಾಗಿ ಬಳಸಿಕೊಳ್ಳಿರಿ. ಉನ್ನತ ವಿದ್ಯಾಭ್ಯಾಸ ಮಾಡಬೇಕೆನ್ನುತ್ತಿರುವವರಿಗೆ ಸೂಕ್ತ ಮಾರ್ಗದರ್ಶನ ದೊರೆಯುತ್ತದೆ. ಸಂಗಾತಿಯೊಡನೆ ಸಾಮರಸ್ಯ ಕಾಪಾಡಿಕೊಳ್ಳುವುದು ಉತ್ತಮ. ನ್ಯಾಯಾಲಯದಲ್ಲಿನ ದಾವೆಗಳು ನಿಮ್ಮ ವಿರುದ್ಧವಾಗಬಹುದು, ಸ್ವಲ್ಪ ಎಚ್ಚರವಹಿಸಿರಿ. ಕಾರ್ಮಿಕರಿಗೆ ಶ್ರಮಕ್ಕೆ ತಕ್ಕ ಫಲ ಈಗ ದೊರೆಯುತ್ತದೆ. ಸಾಲದ ಮರುಪಾವತಿ ಇದ್ದಲ್ಲಿ ಈಗ ಮಾಡಿಕೊಳ್ಳಬಹುದು. ಹಣದ ಹರಿವು ಸಾಮಾನ್ಯವಾಗಿರುತ್ತದೆ. ಕಿರುತೆರೆಯ ಕಲಾವಿದರಿಗೆ ಹೆಚ್ಚಿನ ಅವಕಾಶಗಳು ದೊರೆತು ಸಂಭಾವನೆ ಹೆಚ್ಚುತ್ತದೆ. ಬೇಳೆ ಕಾಳು ವ್ಯಾಪಾರ ಮಾಡುವವರಿಗೆ ವ್ಯವಹಾರ ವಿಸ್ತರಿಸಿ ಲಾಭ ಬರುತ್ತದೆ.

ವೃಶ್ಚಿಕ ರಾಶಿ (ವಿಶಾಖಾ 4 ಅನುರಾಧ ಜೇಷ್ಠ)
ವ್ಯವಹಾರದಲ್ಲಿ ಒದಗಿ ಬಂದ ಹೊಸ ಅವಕಾಶಗಳನ್ನು ಸಮರ್ಥವಾಗಿ ಬಳಸಿಕೊಳ್ಳಿರಿ. ಆರೋಗ್ಯ ವೃದ್ಧಿಗಾಗಿ ದೇಹದಂಡನೆಯ ಅಗತ್ಯವಿದೆ. ವ್ಯಾಪಾರ ವ್ಯವಹಾರಗಳನ್ನು ವಿಸ್ತರಿಸಲು ಸಾಕಷ್ಟು ದೂರ ಪ್ರಯಾಣ ಮಾಡುವಿರಿ. ವ್ಯವಹಾರದ ವಿಷಯದಲ್ಲಿ ಹೆಚ್ಚಿನ ಜಾಗ್ರತೆ ಅಗತ್ಯ. ಹಣದ ಒಳಹರಿವು ಉತ್ತಮವಾಗಿರುತ್ತದೆ. ಹೊಗಳುಭಟ್ಟರನ್ನು ನಿಮ್ಮಿಂದ ದೂರವಿಡಿರಿ. ನಿಮ್ಮ ಮಕ್ಕಳ ಬಗ್ಗೆ ಶುಭ ವಾರ್ತೆಗಳನ್ನು ಕೇಳುವಿರಿ. ಕೆಲವೊಂದು ಆಸ್ತಿಯ ತೀರ್ಮಾನಗಳು ನಿಮ್ಮ ಪರವಾಗುತ್ತದೆ. ನಿಮ್ಮೆಲ್ಲಾ ಒಳ್ಳೆಯ ಕೆಲಸಗಳಿಗೆ ಬಂಧುಗಳ ಸಹಕಾರ ದೊರೆಯುತ್ತದೆ. ವಿದ್ಯಾರ್ಥಿಗಳಿಗೆ ಉತ್ತಮವಾದ ಫಲಿತಾಂಶ ಪಡೆಯುವ ಯೋಗವಿದೆ. ಮೂಳೆ ತಜ್ಞರಿಗೆ ಬೇಡಿಕೆ ಹೆಚ್ಚುತ್ತದೆ. ಕೃಷಿಯಲ್ಲಿ ಹೆಚ್ಚು ಆಸಕ್ತಿ ಮೂಡಿ ಅದಕ್ಕಾಗಿ ಹಣ ವ್ಯಯ ಮಾಡುವಿರಿ.

ಧನಸ್ಸು ರಾಶಿ (ಮೂಲ ಪೂರ್ವಾಷಾಢ ಉತ್ತರಾಷಾಢ 1)
ಕಚೇರಿಯಲ್ಲಿ ನೀವು ಮಾಡುವ ಹೆಚ್ಚಿನ ದುಡಿಮೆ ಮತ್ತು ನಿಸ್ವಾರ್ಥ ಸೇವೆಯನ್ನು ನಿಮ್ಮ ಅಧಿಕಾರಿಗಳು ಪರಿಗಣಿಸುತ್ತಾರೆ. ಸರ್ಕಾರಿ ಸಂಸ್ಥೆಗಳಲ್ಲಿ ವ್ಯಾಪಾರ, ವ್ಯವಹಾರಗಳನ್ನು ನೋಡಿಕೊಳ್ಳುವ ಅಧಿಕಾರಿಗಳಿಗೆ ಹೆಚ್ಚಿನ ಒತ್ತಡ ಇರುತ್ತದೆ. ಯಾವುದೇ ಹೊಸ ಜವಾಬ್ದಾರಿಗಳನ್ನು ತೆಗೆದುಕೊಳ್ಳುವ ಮುನ್ನ ಅದರ ಬಗ್ಗೆ ಸರಿಯಾಗಿ ತಿಳಿಯಿರಿ. ಧನ ಆದಾಯವು ನಿಮ್ಮ ನಿರೀಕ್ಷೆಯನ್ನು ತಲುಪುತ್ತದೆ. ವಿದ್ಯಾರ್ಥಿಗಳು ತಮ್ಮ ಗುರಿ ಮುಟ್ಟುವಲ್ಲಿ ಹೆಚ್ಚಿನ ಪ್ರಯತ್ನ ಮತ್ತು ಶ್ರಮ ಹಾಕಲೇಬೇಕು. ಕುಲುಮೆ ಕೆಲಸಗಾರರು ಮತ್ತು ಬೆಂಕಿಯ ಮುಂದೆ ಕೆಲಸ ಮಾಡುವವರು ಹೆಚ್ಚು ಎಚ್ಚರವಹಿಸಿರಿ. ಸಂಗಾತಿ ಆದಾಯದಲ್ಲಿ ನಿರೀಕ್ಷಿತ ಹೆಚ್ಚಳವನ್ನು ಕಾಣಬಹುದು. ಎಲೆಕ್ಟ್ರಾನಿಕ್‌ ಕ್ಷೇತ್ರದಲ್ಲಿರುವವರಿಗೆ ಉತ್ತಮ ಅಭಿವೃದ್ಧಿ ಇರುತ್ತದೆ. ಸರ್ಕಾರಿ ವೃತ್ತಿಯಲ್ಲಿರುವವರಿಗೆ ಹೊಸ ಸ್ಥಾನಮಾನ ದೊರೆಯುತ್ತದೆ.

ಮಕರ ರಾಶಿ (ಉತ್ತರಾಷಾಢ 2 3 4 ಶ್ರವಣ ಧನಿಷ್ಠ 1.2)
ಹೊಸ ವಸ್ತ್ರಗಳನ್ನು ಖರೀದಿ ಮಾಡುವ ಯೋಗವಿದೆ. ರಾಜಕೀಯದಲ್ಲಿರುವವರು ವರಿಷ್ಠರ ಮಾತಿನಂತೆ ನಡೆಯುವುದು ಉತ್ತಮ. ನೂತನ ಆಸ್ತಿ ಸಂಪಾದನೆ ಬಗ್ಗೆ ಹೆಚ್ಚು ಆಲೋಚನೆ ಮಾಡುವಿರಿ. ಹೊಸ ಅವಕಾಶವೊಂದು ನಿಮ್ಮ ವೃತ್ತಿಯಲ್ಲಿ ಬರುತ್ತದೆ. ಅದನ್ನು ಸರಿಯಾಗಿ ಬಳಸಿಕೊಳ್ಳಿರಿ. ಹಣದ ಒಳಹರಿವು ಸಾಮಾನ್ಯವಾಗಿರುತ್ತದೆ. ಹಿರಿಯರಿಂದ ಸೂಕ್ತ ಮಾರ್ಗದರ್ಶನ ಮತ್ತು ಆಶೀರ್ವಾದ ನಿಮಗೆ ಸದಾ ದೊರೆಯುತ್ತದೆ. ಎಲೆಕ್ಟ್ರಾನಿಕ್ಸ್ ತಂತ್ರಜ್ಞರಿಗೆ ಹೆಚ್ಚಿನ ಬೇಡಿಕೆ ಬರುತ್ತದೆ. ಸಂಗಾತಿಯ ಕೆಲಸಗಳಲ್ಲಿ ಆಲಸ್ಯ ಕಾಣಬಹುದು. ಸರ್ಕಾರಿ ಕಚೇರಿಯ ಕೆಲಸಗಳಲ್ಲಿ ಮುನ್ನಡೆ ಕಾಣಬಹುದು. ವೃತ್ತಿಯಲ್ಲಿ ಸ್ವಲ್ಪ ಒತ್ತಡವಿರುತ್ತದೆ. ಕೃಷಿಗೆ ಸಂಬಂಧಿಸಿದ ಉಪಕರಣಗಳನ್ನು ತಯಾರಿಸಿ ಮಾರುವವರಿಗೆ ಹೆಚ್ಚಿನ ಲಾಭ ಇದೆ.

ಕುಂಭ ರಾಶಿ (ಧನಿಷ್ಠ 3.4 ಶತಭಿಷಾ ಪೂರ್ವಭಾದ್ರ 1 2 3)
ದೈಹಿಕ ಕೆಲಸವನ್ನು ಮಾಡಿ ದುಡಿಯುತ್ತಿರುವವರಿಗೆ ಹೆಚ್ಚಿನ ಕೆಲಸ ದೊರೆಯುತ್ತದೆ. ಅಸೂಯೆ ಪಡುವ ಸಹೋದ್ಯೋಗಿಗಳ ನಡುವೆ ನೀವು ಎಚ್ಚರಿಕೆಯಿಂದ ಕೆಲಸ ಮಾಡಬೇಕಾದ ಪರಿಸ್ಥಿತಿ ಇದೆ. ಹಣದ ಒಳಹರಿವು ನಿರೀಕ್ಷೆಯ ಮಟ್ಟಕ್ಕೆ ಇರುತ್ತದೆ. ವೃತ್ತಿಯಲ್ಲಿ ನಿಮ್ಮ ಆಲಸಿತನವು ನಿಮಗೆ ಮುಳುವಾಗುವ ಸಾಧ್ಯತೆ ಇದೆ. ಕಚೇರಿಯಲ್ಲಿನ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಈಗ ತೆಗೆದುಕೊಳ್ಳುವವರು ಹೆಚ್ಚು ಶ್ರಮ ಹಾಕಲೇಬೇಕು. ಹಿರಿಯರಿಂದ ಧನಸಹಾಯವು ನಿಮ್ಮ ನಿರೀಕ್ಷೆಯಂತೆ ದೊರಕುವುದಿಲ್ಲ. ಹೊಸ ಆಸ್ತಿ ಮಾಡುವ ಚಿಂತೆ ನಿಮ್ಮ ಮನದಲ್ಲಿ ಮೂಡುತ್ತದೆ. ದಿನಸಿ ವ್ಯಾಪಾರಗಳನ್ನು ಮಾಡುವವರಿಗೆ ಹೆಚ್ಚು ವ್ಯವಹಾರ ನಡೆಯುತ್ತದೆ. ಪುಸ್ತಕ ವ್ಯಾಪಾರಿಗಳಿಗೆ ಅನಿರೀಕ್ಷಿತವಾಗಿ ಪುಸ್ತಕ ವ್ಯಾಪಾರ ಹೆಚ್ಚಾಗಬಹುದು. ಹಿರಿಯರ ಆರೋಗ್ಯಕ್ಕಾಗಿ ಹಣ ಖರ್ಚಾಗುವುದು.

ಮೀನ ರಾಶಿ (ಪೂರ್ವಭಾದ್ರ 4 ಉತ್ತರಾಭಾದ್ರ ರೇವತಿ)
ಅತಿಯಾದ ಆತ್ಮಾಭಿಮಾನ ನಿಮ್ಮನ್ನು ಕಾಡಬಹುದು. ಮಾತುಗಳ ಕಾಠಿಣ್ಯತೆಯನ್ನು ಕಡಿಮೆ ಮಾಡಿಕೊಳ್ಳುವುದು ಒಳ್ಳೆಯದು. ವೈಯಕ್ತಿಕ ಅಭಿವೃದ್ಧಿಗಾಗಿ ನೀವು ಮಾಡುವ ಕೆಲಸಗಳನ್ನು ಜನರು ಗಮನಿಸುವರು. ಆರೋಗ್ಯ ಸಲಹೆಗಾರರಿಗೆ ಬೇಡಿಕೆ ಹೆಚ್ಚಾಗಿ ಸಂಪಾದನೆ ಕೂಡ ಹೆಚ್ಚುತ್ತದೆ. ರಿಯಲ್ ಎಸ್ಟೇಟ್ ವ್ಯವಹಾರ ನಡೆಸುವವರಿಗೆ ಆದಾಯ ಹೆಚ್ಚುತ್ತದೆ. ಸರ್ಕಾರಿ ವ್ಯವಹಾರಗಳ ಮಧ್ಯವರ್ತಿಯಾಗಿ ಕೆಲಸ ಮಾಡುವವರಿಗೆ ಕಮಿಷನ್ ಹೆಚ್ಚುತ್ತದೆ. ಪಾಲುದಾರಿಕೆಯ ವ್ಯವಹಾರಗಳಲ್ಲಿ ನಿಮಗೆ ಆಸಕ್ತಿ ಮೂಡಿ ಅದಕ್ಕೆ ತಕ್ಕ ಅವಕಾಶಗಳು ದೊರೆಯುತ್ತದೆ. ಗೃಹ ಅಲಂಕಾರ ವಸ್ತುಗಳನ್ನು ಹೆಚ್ಚು ಖರೀದಿ ಮಾಡುವಿರಿ. ಧಾರ್ಮಿಕ ವ್ಯಕ್ತಿಗಳ ಭೇಟಿಯಿಂದ ನಿಮ್ಮ ಮನ ಪರಿವರ್ತನೆಯಾಗುತ್ತದೆ. ವಾಣಿಜ್ಯ ಸಂಸ್ಥೆಯೊಂದರಲ್ಲಿ ಕಾಂಟ್ರಾಕ್ಟ್ ಪಡೆಯುವ ನಿಮ್ಮ ಪ್ರಯತ್ನದಲ್ಲಿ ಸಫಲರಾಗುವಿರಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT