ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾರ ಭವಿಷ್ಯ: 30-01-2022 ರಿಂದ 5-2-2022 ರವರೆಗೆ

ಅಕ್ಷರ ಗಾತ್ರ

ಎಂ.ಎನ್.ಲಕ್ಷ್ಮೀನರಸಿಂಹಸ್ವಾಮಿ, ಮಾದಾಪುರ,
ಜ್ಯೋತಿಷ್ಯ ವಿಶಾರದ, ಸಂಪರ್ಕಕ್ಕೆ: 8197304680

***

ಮೇಷ ರಾಶಿ(ಅಶ್ವಿನಿ ಭರಣಿ ಕೃತಿಕ 1)

ಹಣದ ಒಳಹರಿವು ಉತ್ತಮವಾಗಿರುತ್ತದೆ. ನಿರೀಕ್ಷಿತ ಮೂಲಗಳಿಂದ ಆದಾಯ ಇರುತ್ತದೆ. ವಿದೇಶಿ ವ್ಯವಹಾರಗಳನ್ನು ಮಾಡುವವರಿಗೆ ಲಾಭವಿರುತ್ತದೆ. ಕುಟುಂಬದಲ್ಲಿ ಮಹಿಳೆಯರ ನಡುವೆ ಮನಃಸ್ತಾಪ ತಲೆದೋರಬಹುದು. ಅತಿಯಾದ ಮನಸ್ಸಿನ ಚಾಂಚಲ್ಯ ಎಡೆಬಿಡಂಗಿತನಕ್ಕೆ ಕಾರಣವಾಗಬಹುದು. ಸಿಹಿ ಪದಾರ್ಥಗಳನ್ನು ಮಾರಾಟ ಮಾಡುವವರಿಗೆ ಲಾಭವಿದೆ. ವಿದ್ಯಾರ್ಥಿಗಳಿಗೆ ಅಧ್ಯಯನದಲ್ಲಿ ಸಾಕಷ್ಟು ಯಶಸ್ಸು ಇರುತ್ತದೆ. ಅತಿಯಾದ ಬಂಡವಾಳವನ್ನು ಆಕರ್ಷಿಸುವ ವ್ಯವಹಾರಗಳನ್ನು ಈಗ ಆರಂಭಿಸಬೇಡಿರಿ. ಕುಕ್ಕುಟೋದ್ಯಮವನ್ನು ಮಾಡುತ್ತಿರುವವರಿಗೆ ಬೇಡಿಕೆ ಇರುತ್ತದೆ. ಹಿರಿಯರ ಆಸ್ತಿಯನ್ನು ಪಡೆದುಕೊಳ್ಳಬಹುದು. ಹಿರಿಯರ ಆರೋಗ್ಯ ಸುಧಾರಣೆಯತ್ತ ಸಾಗುತ್ತದೆ.

ವೃಷಭರಾಶಿ(ಕೃತಿಕಾ2 3 4 ರೋಹಿಣಿ ಮೃಗಶಿರಾ1 2)

ಆರ್ಥಿಕ ಸಂಪನ್ಮೂಲಗಳು ಸಮಾಧಾನ ಪಡುವಷ್ಟು ಇರುತ್ತದೆ. ಉದ್ಯೋಗದಲ್ಲಿ ಸ್ವಲ್ಪ ಏರಿಳಿತಗಳನ್ನು ಕಾಣಬಹುದು. ಭೂವ್ಯವಹಾರ ಮಾಡುವವರಿಗೆ ಆದಾಯ ಹೆಚ್ಚುತ್ತದೆ. ಮಾತಿನ ಬಗ್ಗೆ ಗೃಹಿಣಿಯರು ಅತ್ಯಂತ ಜಾಗರೂಕರಾಗಿರುವುದು ಬಹಳ ಒಳ್ಳೆಯದು. ರೈತಾಪಿ ವರ್ಗದವರಿಗೆ ಜಮೀನು ಕೃಷಿ ಮಾಡಲು ಇದ್ದ ಕಾನೂನು ತೊಡಕು ನಿವಾರಣೆಯಾಗುತ್ತವೆ. ಉಪನ್ಯಾಸಕರಿಗೆ ಉತ್ತಮ ಗೌರವ ಸಿಗುವ ಸಾಧ್ಯತೆಗಳಿವೆ. ಸೇನೆಯಲ್ಲಿರುವ ಕೆಲವರು ವಹಿಸುವ ಮುಂಜಾಗ್ರತೆ ಅವರನ್ನು ಹುದ್ದೆಯ ಸ್ಥಾನದಲ್ಲಿ ಮೇಲೇರಿಸುತ್ತದೆ. ಮಕ್ಕಳ ಆರೋಗ್ಯದ ಬಗ್ಗೆ ಹೆಚ್ಚಿನ ಗಮನ ಅಗತ್ಯ. ತಂದೆ ಮತ್ತು ಮಕ್ಕಳ ನಡುವೆ ಕಾವೇರಿದ ಮಾತುಗಳು ಆಗಬಹುದು. ಸ್ವಲ್ಪ ಸಮಾಧಾನವಾಗಿರುವುದು ಒಳ್ಳೆಯದು.

ಮಿಥುನ ರಾಶಿ(ಮೃಗಶಿರಾ 3.4 ಆರಿದ್ರಾ ಪುನರ್ವಸು 1 2 3)

ವಾರದ ಆರಂಭದಲ್ಲಿ ಬಹಳ ಸಂತೋಷವಿರುತ್ತದೆ. ಬಂಧುಗಳ ಮಕ್ಕಳ ನಡುವೆ ಪ್ರೀತಿ ಪ್ರೇಮ ಬೆಳೆಯಬಹುದು. ಸ್ವಂತ ಉದ್ದಿಮೆ ಸ್ಥಾಪಿಸುವ ಬಗ್ಗೆ ಸಾಕಷ್ಟು ಆಲೋಚನೆ ನಡೆಯುತ್ತದೆ. ನಿಮ್ಮ ಕೆಲವು ಸಮಸ್ಯೆಗಳನ್ನು ನೀವೇ ಕುಳಿತು ಬಗೆಹರಿಸಿಕೊಳ್ಳುವಿರಿ. ಕಟ್ಟಡ ನಿರ್ಮಾಣ ಕಾರ್ಯದಲ್ಲಿ ಇರುವ ಎಂಜಿನಿಯರ್‌ಗಳಿಗೆ ಉತ್ತಮ ಬೇಡಿಕೆ ಬರುತ್ತದೆ. ಅತಿಯಾದ ರಾಜಕೀಯ ಆಸಕ್ತಿಯನ್ನು ಹೊಂದಿರುವವರಿಗೆ ರಾಜಕೀಯ ಸೇರುವ ಅವಕಾಶ ಒದಗಿಬರುತ್ತದೆ. ಸರ್ಕಾರಿ ವ್ಯವಹಾರಗಳನ್ನು ಮಾಡುವವರಿಗೆ ಆದಾಯದಲ್ಲಿ ಸಾಕಷ್ಟು ವೃದ್ಧಿಯನ್ನು ಕಾಣಬಹುದು. ಷೇರುಪೇಟೆ ವ್ಯವಹಾರದಲ್ಲಿ ಅಭಿವೃದ್ಧಿ ಕಂಡರೂ ಹೆಚ್ಚಿನ ಬಂಡವಾಳ ಹೂಡಬೇಡಿರಿ. ಹಣದ ಒಳಹರಿವು ಸಾಮಾನ್ಯವಾಗಿರುತ್ತದೆ.

ಕಟಕ ರಾಶಿ(ಪುನರ್ವಸು 4 ಪುಷ್ಯ ಆಶ್ಲೇಷ)

ಗೌರವಾನ್ವಿತ ಜನರ ಸಂಪರ್ಕಗಳು ದೊರೆಯುತ್ತವೆ. ಮಹಿಳೆಯರೊಂದಿಗೆ ವ್ಯವಹಾರ ಮಾಡುವಾಗ ಎಚ್ಚರ ಇರಲಿ. ಮೋಸ ಹೋಗುವ ಸಾಧ್ಯತೆಗಳಿವೆ. ಬಾಂಧವರ ನಡುವೆ ಸಂಪರ್ಕ ಹೆಚ್ಚಾಗುತ್ತದೆ. ಕೆಲಸಗಳಲ್ಲಿ ಹೆಚ್ಚಿನ ಒತ್ತಡ ಕಂಡು ಬಂದರೂ ಅದನ್ನು ನಿಭಾಯಿಸುವ ಶಕ್ತಿ ಇರುತ್ತದೆ. ಮಿತವ್ಯಯವನ್ನು ಸಾಧಿಸುವುದು ನಿಮಗೆ ಉತ್ತಮ. ಬುದ್ಧಿವಂತಿಕೆಯಿಂದ ಕಾರ್ಯ ಕೌಶಲವನ್ನು ಸಾಧಿಸಿ ಸಂತೋಷ ಪಡುವಿರಿ. ವಂಶಪಾರಂಪರ್ಯದ ವ್ಯವಹಾರಗಳಲ್ಲಿ ಹೆಚ್ಚಿನ ಲಾಭ ಇರುತ್ತದೆ. ಆರೋಗ್ಯದಲ್ಲಿ ಹೆಚ್ಚಿನ ಸುಧಾರಣೆಯನ್ನು ಕಾಣಬಹುದು. ಲೇವಾದೇವಿ ವ್ಯವಹಾರವನ್ನು ಮಾಡುವವರು ಅಲ್ಪ ಯಶಸ್ಸನ್ನು ಕಾಣಬಹುದು. ಆರೋಗ್ಯದಲ್ಲಿ ಏನು ತೊಂದರೆ ಇರುವುದಿಲ್ಲ.

ಸಿಂಹ ರಾಶಿ(ಮಖಪೂರ್ವಪಲ್ಗುಣಿ ಉತ್ತರ ಫಲ್ಗುಣಿ 1)

ಕಮಿಷನ್ ಏಜೆಂಟರುಗಳಿಗೆ ಉತ್ತಮ ಕಮಿಷನ್ ದೊರೆಯುವ ಸಂದರ್ಭ. ಹಣದ ಒಳಹರಿವು ಸಾಮಾನ್ಯವಾಗಿರುತ್ತದೆ. ಉದ್ಯೋಗಿಗಳಿಗೆ ಹಿತಶತ್ರುಗಳ ಕಾಟ ಇರುತ್ತದೆ. ಕುಟುಂಬದಲ್ಲಿ ಹೆಚ್ಚಿನ ಸಂತೋಷವನ್ನು ಕಾಣುವಿರಿ. ಕಟ್ಟಡ ನಿರ್ಮಾಣ ಸಾಮಗ್ರಿಗಳನ್ನು ಮಾರಾಟ ಮಾಡುವವರಿಗೆ ಹೆಚ್ಚಿನ ಲಾಭ ಇರುತ್ತದೆ. ಹೊಸ ಉದ್ಯೋಗದ ಬಗ್ಗೆ ಸಾಕಷ್ಟು ಮಾತುಕತೆ ನಡೆಯುತ್ತದೆ. ಅತಿಯಾಗಿ ಮಾತನಾಡಲು ಹೋಗಿ ತೊಂದರೆಗೆ ಸಿಲುಕಿಕೊಳ್ಳುವ ಸಾಧ್ಯತೆ ಇದೆ. ಮಾರಾಟ ಮಾಡಬೇಕೆಂದಿದ್ದ ಆಸ್ತಿಯನ್ನು ಈಗ ಮಾರಾಟ ಮಾಡಬಹುದು. ಮಕ್ಕಳ ವಿದ್ಯಾಭ್ಯಾಸದಲ್ಲಿ ಸಾಕಷ್ಟು ಪ್ರಗತಿ ಇರುತ್ತದೆ. ಸಂಗಾತಿಯ ಆದಾಯದಲ್ಲಿ ಹೆಚ್ಚಳ ಕಾಣಬಹುದು. ವಿದೇಶದಲ್ಲಿ ಉದ್ಯೋಗದಲ್ಲಿರುವವರು ಪ್ರಗತಿಯನ್ನು ಕಾಣಬಹುದು.

ಕನ್ಯಾ ರಾಶಿ(ಉತ್ತರ ಫಲ್ಗುಣಿ 2 3 4 ಹಸ್ತಾ ಚಿತ್ತಾ 1.2)

ಉದ್ಯೋಗ ಕ್ಷೇತ್ರದಲ್ಲಿ ಸ್ವಲ್ಪಮಟ್ಟಿಗೆ ಹೊಂದಾಣಿಕೆಯನ್ನು ಮಾಡಿಕೊಳ್ಳುವುದು ಬಹಳ ಉತ್ತಮ. ವಿದ್ಯಾರ್ಥಿಗಳು ಉತ್ತಮ ಫಲಿತಾಂಶಕ್ಕಾಗಿ ಹೆಚ್ಚಿನ ಶ್ರಮ ವಹಿಸಬೇಕು. ಹೊಸ ವಸ್ತ್ರಗಳನ್ನು ಕೊಳ್ಳುವ ಯೋಗವಿದೆ. ರಾಜಕೀಯ ವ್ಯಕ್ತಿಗಳಿಗೆ ಅವರ ಹಿಂಬಾಲಕರಿಂದ ಸ್ವಲ್ಪಮಟ್ಟಿನ ಹಿನ್ನಡೆಯಾಗಬಹುದು. ಶೃಂಗಾರ ಸಾಮಗ್ರಿಗಳ ಸಗಟು ವ್ಯಾಪಾರಿಗಳಿಗೆ ಹೆಚ್ಚಿನ ಲಾಭವಿರುತ್ತದೆ. ಸರಕು ಸಾಗಣೆ ವ್ಯವಹಾರದಲ್ಲಿ ಹೆಚ್ಚಿನ ಆದಾಯವಿರುತ್ತದೆ. ಮಿತ್ರರ ಸಹಾಯದಿಂದ ಧನ ಲಾಭ ಆಗುತ್ತದೆ. ಉದಯೋನ್ಮುಖ ಕೈಗಾರಿಕೋದ್ಯಮಿಗಳಿಗೆ ಹೆಚ್ಚಿನ ಪ್ರಾಶಸ್ತ್ಯ ದೊರೆಯುತ್ತದೆ. ಅವರಿಗೆ ಬೇಕಾದ ಹಣಕಾಸಿನ ನೆರವುಗಳು ಸಂಸ್ಥೆಗಳಿಂದ ದೊರೆಯುತ್ತವೆ.

ತುಲಾ ರಾಶಿ(ಚಿತ್ತಾ 3 4 ಸ್ವಾತಿ ವಿಶಾಖ 1 2 3)

ಪತ್ನಿಯಿಂದ ನಿಮ್ಮ ಕೆಲಸಗಳಿಗೆ ಹೆಚ್ಚಿನ ಪ್ರೋತ್ಸಾಹ ದೊರೆಯುತ್ತದೆ. ಕೆಲವು ರಾಜಕೀಯ ವ್ಯಕ್ತಿಗಳಿಂದ ಕಿರುಕುಳ ಬರಬಹುದು. ಆಪ್ತ ಸ್ನೇಹಿತನ ದ್ವಂದ್ವ ನಿಲುವಿನಿಂದಾಗಿ ವ್ಯವಹಾರದಲ್ಲಿ ಸಲ್ಪ ಹಿನ್ನಡೆಯಾಗಬಹುದು. ಸಂಗಾತಿಯ ಶೃಂಗಾರ ಸಾಮಗ್ರಿಗಳಿಗಾಗಿ ಹೆಚ್ಚಿನ ಹಣ ಖರ್ಚಾಗುವುದು. ಹಣದ ಒಳಹರಿವು ಸಾಮಾನ್ಯ ಮಟ್ಟದಲ್ಲಿರುತ್ತದೆ. ಖರ್ಚನ್ನು ಕಡಿಮೆ ಮಾಡುವುದು ಅತಿ ಮುಖ್ಯ. ಸ್ಥಿರಾಸ್ತಿಯನ್ನು ಮಾಡುವಾಗ ದ್ವಂದ್ವ ನಿಲುವುಗಳು ಖಂಡಿತ ಬೇಡ. ಉಕ್ಕನ್ನು ಕರಗಿಸುವ ತಾಂತ್ರಿಕ ತಜ್ಞರಿಗೆ ಹೆಚ್ಚಿನ ಬೇಡಿಕೆ ಬರುತ್ತದೆ. ನಿಮ್ಮ ಒರಟು ಮಾತಿನಿಂದ ಕೆಲವು ಸಣ್ಣ ಸಹಾಯಗಳು ನಿಲ್ಲಬಹುದು. ಸರ್ಕಾರಿ ಲೆಕ್ಕಪತ್ರಗಳಲ್ಲಿ ಇದ್ದ ಗೊಂದಲಗಳು ನಿವಾರಣೆಯಾಗುತ್ತವೆ. ವೈಯಕ್ತಿಕ ಆರೋಗ್ಯದ ಬಗ್ಗೆ ಗಮನ ಇರಲಿ.

ವೃಶ್ಚಿಕ ರಾಶಿ(ವಿಶಾಖಾ 4ಅನುರಾಧ ಜೇಷ್ಠ)

ದೈನಂದಿನ ಕೆಲಸಕಾರ್ಯಗಳಲ್ಲಿ ಉತ್ಸಾಹದಿಂದ ಪಾಲ್ಗೊಳ್ಳುವಿರಿ. ಇಂಧನ ಇಲಾಖೆಯಲ್ಲಿ ಕೆಲಸ ಮಾಡುವವರು ಎಚ್ಚರ ವಹಿಸಿರಿ. ಆರ್ಥಿಕ ಸ್ಥಿತಿಯಲ್ಲಿ ಚೇತರಿಕೆಯನ್ನು ಕಾಣಬಹುದು. ಉದ್ಯಮಿಗಳಿಗೆ ಇದ್ದ ಕಾರ್ಮಿಕರ ಸಮಸ್ಯೆ ಬಗೆಹರಿಯುವುದು. ಸರ್ಕಾರಿ ಅಧಿಕಾರಿಗಳಿಂದ ಸಹಾಯ ದೊರೆತು ನಿಮ್ಮ ವ್ಯವಹಾರದಲ್ಲಿದ್ದ ಗೋಜಲುಗಳು ಪರಿಹಾರವಾಗುತ್ತವೆ. ಮೇಲಿನ ಅಧಿಕಾರಿಗಳೊಡನೆ ವಿರೋಧ ಕಟ್ಟಿ ಕೊಳ್ಳುವುದು ಬೇಡವೇ ಬೇಡ. ವಿದ್ಯಾರ್ಥಿಗಳಿಗೆ ಅಧ್ಯಯನದಲ್ಲಿ ಹೆಚ್ಚಿನ ಯಶಸ್ಸು ಇರುತ್ತದೆ. ನಿಮ್ಮ ಸಹೋದ್ಯೋಗಿಗಳಿಂದ ದೊರೆತ ಸಲಹೆ ನಿಮ್ಮನ್ನು ತೊಂದರೆಗಳಿಂದ ಪಾರು ಮಾಡುತ್ತದೆ. ಸಾವಯವ ಕೃಷಿಯನ್ನು ಮಾಡುವವರ ಬೆಳೆಗಳಿಗೆ ಉತ್ತಮ ಬೇಡಿಕೆ ಬರುತ್ತದೆ.

ಧನಸ್ಸು ರಾಶಿ(ಮೂಲ ಪೂರ್ವಾಷಾಢ ಉತ್ತರಾಷಾಢ 1)

ಹಿರಿಯರ ಒಡವೆಗಳನ್ನು ಖರೀದಿಸುವ ಸಾಧ್ಯತೆ ಇದೆ. ಆರ್ಥಿಕ ಸ್ಥಿತಿಯಲ್ಲಿ ಅಂತಹ ಹಿಂಜರಿಕೆ ಇರುವುದಿಲ್ಲ. ಕೋರ್ಟ್ ಕಚೇರಿ ಸಂಬಂಧದ ಕೆಲಸಗಳಲ್ಲಿ ಮುನ್ನಡೆ ಇರುತ್ತದೆ. ಮಂದಗತಿಯ ಆರ್ಥಿಕ ಸ್ಥಿತಿಗೆ, ಸಂಬಂಧಪಟ್ಟ ಸಂಸ್ಥೆಗಳಿಂದ ಸಾಲ ಪಡೆದು ಸರಿದೂಗಿಸುವಿರಿ. ರಂಗ ಕಲಾವಿದರುಗಳಿಗೆ ಕೆಲವು ಸಂಸ್ಥೆಗಳಿಂದ ಗೌರವ ದೊರೆಯುತ್ತದೆ. ಕೀಲು ನೋವು ಬಾಧಿಸಬಹುದು. ಸಂಗಾತಿ ಕಡೆಯವರ ವ್ಯಾಪಾರದಲ್ಲಿ ಪಾಲ್ಗೊಳ್ಳಲು ಆಹ್ವಾನ ಬರುತ್ತದೆ. ನೂತನ ಕೃಷಿಯನ್ನು ಮಾಡುವವರಿಗೆ ಸಲಹೆ ಮತ್ತು ಸಹಾಯ ದೊರೆಯುತ್ತದೆ. ಬೆಳ್ಳಿಯ ಕುಸುರಿ ಕೆಲಸ ಮಾಡುವವರಿಗೆ ಹೆಚ್ಚಿನ ಬೇಡಿಕೆ ಇರುತ್ತದೆ. ಕರಿದ ತಿಂಡಿಗಳನ್ನು ಮಾರುವವರ ವ್ಯವಹಾರ ವಿಸ್ತರಿಸುತ್ತದೆ. ವಿದೇಶಿ ಉತ್ಪನ್ನಗಳನ್ನು ತರಿಸಿ ಮಾರುವವರ ವ್ಯಾಪಾರದಲ್ಲಿ ಹೆಚ್ಚಳವಾಗುತ್ತದೆ.

ಮಕರ ರಾಶಿ(ಉತ್ತರಾಷಾಢ 2 3 4 ಶ್ರವಣ ಧನಿಷ್ಠ 1.2)

ಪುರಾತನ ವಸ್ತುಗಳನ್ನು ಮಾರಾಟ ಮಾಡುವವರ ಆದಾಯ ಹೆಚ್ಚುತ್ತದೆ. ವಾಹನಗಳ ಬಿಡಿಭಾಗಗಳನ್ನು ಮಾರಾಟ ಮಾಡುವವರ ವ್ಯವಹಾರದಲ್ಲಿ ವಿಸ್ತರಣೆಯಾಗುತ್ತದೆ. ಷೇರು ಮಾರುಕಟ್ಟೆಯ ಮಧ್ಯವರ್ತಿಗಳಿಗೆ ಆದಾಯ ಹೆಚ್ಚುತ್ತದೆ. ಮಾಧ್ಯಮ ಮಿತ್ರರಿಗೆ ಕೆಲವು ಮೂಲಗಳಿಂದ ಧನ ಲಾಭವಿರುತ್ತದೆ. ಯಂತ್ರೋಪಕರಣಗಳ ಬಿಡಿಭಾಗಗಳನ್ನು ತಯಾರಿಸಿ ಮಾರುವವರಿಗೆ ಹೆಚ್ಚಿನ ಪೂರೈಕೆಗಾಗಿ ಹೊಸ ಆದೇಶಗಳು ದೊರೆಯುತ್ತದೆ. ಹಣದ ಒಳಹರಿವು ಉತ್ತಮವಾಗಿರುತ್ತದೆ. ವಿದೇಶಿ ಭಾಷಾ ಕಲಿಯುವವರಿಗೆ ಅವರ ಕಚೇರಿಯಿಂದ ಉತ್ತಮ ಪ್ರೋತ್ಸಾಹ ದೊರೆಯುತ್ತದೆ. ಕೃಷಿಕರ ಆದಾಯದಲ್ಲಿ ಸ್ವಲ್ಪ ವ್ಯತ್ಯಾಸಗಳಾಗಬಹುದು. ಸಂಗಾತಿಯ ವೆಚ್ಚದಲ್ಲಿ ಏರಿಕೆಯಾಗಬಹುದು.

ಕುಂಭ ರಾಶಿ(ಧನಿಷ್ಠ 3.4 ಶತಭಿಷಾ ಪೂರ್ವಭಾದ್ರ 1 2 3)

ಕೆಲವು ಕಲಾವಿದರುಗಳಿಗೆ ಉತ್ತಮ ಪ್ರೋತ್ಸಾಹ ದೊರೆಯುವುದು. ಆರ್ಥಿಕವಾಗಿ ಚೇತರಿಕೆ ಕಾಣಬಹುದು. ಹೊಸ ಸ್ಥಿರಾಸ್ತಿ ಕೊಳ್ಳುವ ಬಗ್ಗೆ ಸಾಕಷ್ಟು ಆಲೋಚನೆಯನ್ನು ಮಾಡುವಿರಿ. ಉಪನ್ಯಾಸಕರಿಗೆ ಉತ್ತಮ ಸ್ಥಾನ ದೊರಕುತ್ತದೆ. ಸಂಶೋಧನಾ ಕ್ಷೇತ್ರದಲ್ಲಿರುವವರಿಗೆ ಹೊಸ ಆಶಾಕಿರಣವೊಂದು ಗೋಚರಿಸುತ್ತದೆ. ಕುಟುಂಬದಲ್ಲಿ ಮುಸುಕಿನ ಗುದ್ದಾಟ ನಡೆಯಬಹುದು. ಕೃಷಿ ಕ್ಷೇತ್ರದಲ್ಲಿರುವವರಿಗೆ ಹೆಚ್ಚಿನ ಪ್ರಗತಿ ಇರುತ್ತದೆ. ವಿದೇಶದಲ್ಲಿರುವವರಿಗೆ ಅವರ ಜೀವನಮಟ್ಟವನ್ನು ಹೆಚ್ಚಿಸಿಕೊಳ್ಳುವ ಅವಕಾಶ ದೊರೆಯುತ್ತದೆ. ಮಠಮಾನ್ಯಗಳಲ್ಲಿ ಹೊಸ ರೀತಿಯ ಸಾಮಾಜಿಕ ಚಟುವಟಿಕೆಗಳು ಆರಂಭಗೊಳ್ಳುತ್ತವೆ. ರೇಷ್ಮೆ ಬಟ್ಟೆಯನ್ನು ನೇಯುವವರಿಗೆ ಹೊಸ ಹೊಸ ಅವಕಾಶಗಳು ದೊರೆಯುತ್ತವೆ.

ಮೀನ ರಾಶಿ(ಪೂರ್ವಭಾದ್ರ 4 ಉತ್ತರಾಭಾದ್ರ ರೇವತಿ)

ಸಿದ್ಧ ವಸ್ತ್ರ ಉಡುಪುಗಳನ್ನು ಮಾರಾಟ ಮಾಡುವವರಿಗೆ ಆದಾಯ ಹೆಚ್ಚುತ್ತದೆ. ವ್ಯವಹಾರಗಳ ಮಧ್ಯವರ್ತಿ ಕೆಲಸವನ್ನು ಮಾಡುವವರಿಗೆ ಅವರ ಕೆಲಸದಲ್ಲಿ ಯಶಸ್ಸು ಇರುತ್ತದೆ. ಕ್ರೀಡಾಪಟುಗಳಿಗೆ ಅನಿರೀಕ್ಷಿತವಾಗಿ ವಿದೇಶಯಾನ ದೊರೆಯಬಹುದು. ಮಣ್ಣಿನ ಅಲಂಕಾರಿಕ ಗೊಂಬೆಗಳನ್ನು ತಯಾರಿಸುವವರಿಗೆ ಬೇಡಿಕೆ ಹೆಚ್ಚುತ್ತದೆ. ಸಾಹಸ ಕಲಾವಿದರುಗಳಿಗೆ ನಿಂತಿದ್ದ ಸಂಭಾವನೆ ಈಗ ಬರುತ್ತವೆ. ವೈಯಕ್ತಿಕ ಆರೋಗ್ಯದಲ್ಲಿ ಸ್ಥಿರತೆಯನ್ನು ಕಾಣಬಹುದು. ಒಡಹುಟ್ಟಿದವರಿಂದ ಹೊಸ ರೀತಿಯ ಆಮಿಷಗಳು ಬರುತ್ತವೆ. ತವರು ಮನೆಯವರು ನಡೆಸುವ ವ್ಯವಹಾರಗಳ ಲಾಭದಲ್ಲಿ ನಿಮಗೆ ಸ್ವಲ್ಪ ಭಾಗ ಸಿಗುತ್ತದೆ. ಆಹಾರ ವಸ್ತುಗಳನ್ನು ಮಾರಾಟ ಮಾಡುವವರ ವ್ಯವಹಾರದಲ್ಲಿ ಹೆಚ್ಚಳ ಆಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT