ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾರ ಭವಿಷ್ಯ: 31-10-2021ರಿಂದ 06-11-2021ರವರೆಗೆ

Last Updated 30 ಅಕ್ಟೋಬರ್ 2021, 19:30 IST
ಅಕ್ಷರ ಗಾತ್ರ

ಡಾ.ಎಂ.ಎನ್. ಲಕ್ಷ್ಮೀನರಸಿಂಹಸ್ವಾಮಿ, ಜ್ಯೋತಿಷ್ಯ ಪದ್ಮಭೂಷಣ
ಸಂಪರ್ಕ: 8197304680

***

ಮೇಷ ರಾಶಿ( ಅಶ್ವಿನಿ ಭರಣಿ ಕೃತಿಕ 1)

ಕೃಷಿಭೂಮಿಯ ಖರೀದಿ ಬಗ್ಗೆ ಮನೆಯವರೊಡನೆ ಚರ್ಚೆ ಮಾಡುವಿರಿ. ಕೆಟ್ಟು ನಿಂತಿದ್ದ ಯಂತ್ರೋಪಕರಣಗಳ ದುರಸ್ತಿಯಿಂದ ಉದ್ದಿಮೆಯಲ್ಲಿ ತಯಾರಿಕೆ ಹೆಚ್ಚುತ್ತದೆ. ಮನೆಯವರಿಗೆ ಹೊಸ ವಸ್ತ್ರಗಳನ್ನು ಕೊಂಡುಕೊಳ್ಳುವಿರಿ. ನಿಮ್ಮದೇ ತಪ್ಪಿನಿಂದ ಶತ್ರುಬಾಧೆ ಉಲ್ಬಣಗೊಳ್ಳುವ ಸಾಧ್ಯತೆಗಳಿವೆ. ವ್ಯವಹಾರಗಳ ಮಾತುಕತೆಯ ನಿಮಿತ್ತ ದೂರ ಪ್ರಯಾಣ ಮಾಡುವ ಸಾಧ್ಯತೆಗಳಿವೆ. ವೈದ್ಯಕೀಯ ಕ್ಷೇತ್ರದಲ್ಲಿ ಸಂಶೋಧನೆ ಮಾಡುತ್ತಿರುವವರಿಗೆ ಆಶಾಕಿರಣವೊಂದು ಗೋಚರಿಸಿ ಸಂತಸವಾಗುತ್ತದೆ. ಔಷಧಿ ವಿತರಕರಿಗೆ ವೃತ್ತಿಯಲ್ಲಿ ಹೆಚ್ಚಿನ ಲಾಭ ಬರುತ್ತದೆ. ಆದಾಯದಷ್ಟೇ ಖರ್ಚು ಸಹ ಇರುತ್ತದೆ. ವಿದೇಶಿ ಉದ್ದಿಮೆಗಳಿಗೆ ವಸ್ತುಗಳನ್ನು ಪೂರೈಕೆ ಮಾಡುವವರಿಗೆ ಹೆಚ್ಚಿನ ಆದೇಶ ದೊರೆಯುತ್ತದೆ.

ವೃಷಭರಾಶಿ(ಕೃತಿಕಾ2 3 4 ರೋಹಿಣಿ ಮೃಗಶಿರಾ1 2)

ಸಂಪತ್ತಿನಲ್ಲಿ ಸ್ವಲ್ಪ ವೃದ್ಧಿಯನ್ನು ಕಂಡುಕೊಳ್ಳುವಿರಿ. ನೌಕಾಪಡೆಯಲ್ಲಿ ಕೆಲಸ ಮಾಡುವ ಕೆಲವರಿಗೆ ಬಡ್ತಿ ದೊರೆಯುತ್ತದೆ. ಕೆಲವು ಹಿರಿಯ ಅಧಿಕಾರಿಗಳಿಗೆ ರಾಜಕಾರಣಿಗಳಿಂದ ಕಿರಿಕಿರಿ ಉಂಟಾಗಬಹುದು. ಮಕ್ಕಳು ಉದ್ಯೋಗದ ನಿಮಿತ್ತ ದೂರ ಪ್ರಯಾಣ ಮಾಡಬೇಕಾದ ಅನಿವಾರ್ಯತೆ ಇರುತ್ತದೆ. ಮಹಿಳೆಯರಿಗೆ ಆರ್ಥಿಕ ಸಬಲತೆಗೆ ಬೇಕಾದ ಅನುಕೂಲತೆಗಳು ಒದಗಿಬರುತ್ತವೆ. ಗೃಹ ಕೈಗಾರಿಕೆಯನ್ನು ನಡೆಸುವ ಸ್ತ್ರೀಯರಿಗೆ ಸೂಕ್ತ ಸಾಲ ಸೌಲಭ್ಯಗಳು ದೊರೆಯುತ್ತವೆ. ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಹಣ ಹೊಂದಿಸಬೇಕಾದ ಅನಿವಾರ್ಯತೆ ಇರುತ್ತದೆ. ಹೊಸ ಬಂಧುವಿನ ಪರಿಚಯದಿಂದ ನೀವು ಬಯಸುತ್ತಿದ್ದ ಪಿತ್ರಾರ್ಜಿತ ಆಸ್ತಿಯ ವಿವರಗಳು ತಿಳಿಯುತ್ತವೆ.

ಮಿಥುನ ರಾಶಿ(ಮೃಗಶಿರಾ 3.4 ಆರಿದ್ರಾ ಪುನರ್ವಸು 1 2 3)

ಆರ್ಥಿಕ ಸಂಪನ್ಮೂಲಗಳು ನಿಮ್ಮ ಶ್ರಮದಿಂದ ನಿಧಾನವಾಗಿ ಏರಿಕೆ ಆಗುತ್ತವೆ. ಹಣಕಾಸಿನ ವಿಚಾರದಲ್ಲಿ ಬಹಳ ಎಚ್ಚರಿಕೆಯನ್ನು ವಹಿಸುವುದು ಒಳ್ಳೆಯದು. ಸಮಸ್ಯೆಗಳನ್ನು ಮೆಟ್ಟಿನಿಲ್ಲುವ ಸಾಮರ್ಥ್ಯ ನಿಮಗೆ ಒದಗುತ್ತದೆ. ವ್ಯವಹಾರಗಳಲ್ಲಿ ರಾಜಿಯಾಗದೆ ನಿಮ್ಮದೇ ಅಭಿಪ್ರಾಯವನ್ನು ಮುಂದುವರೆಸಿದಲ್ಲಿ ನಿಮಗೆ ಲಾಭವಿದೆ. ಕೃಷಿ ಕ್ಷೇತ್ರದಲ್ಲಿ ಹೂಡಿಕೆಯನ್ನು ಹೆಚ್ಚು ಮಾಡುವ ಅವಕಾಶಗಳಿವೆ. ವಿದ್ಯಾರ್ಥಿಗಳಿಗೆ ಅವರ ಪರೀಕ್ಷಾ ತಯಾರಿಯ ಬಗ್ಗೆ ಭರವಸೆ ಇರುತ್ತದೆ. ನಿಮ್ಮ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ಇರಲಿ. ನಿಮ್ಮ ಸಂಗಾತಿ ಕೊಡುವ ಸಲಹೆಗಳಲ್ಲಿ ಕೆಲವೊಂದು ಬಹಳ ಉಪಯೋಗಕ್ಕೆ ಬರುತ್ತದೆ ಹಾಗೂ ಅವರಿಂದ ಧನಸಹಾಯವೂ ಸಿಗುತ್ತದೆ.

ಕಟಕ ರಾಶಿ( ಪುನರ್ವಸು 4 ಪುಷ್ಯ ಆಶ್ಲೇಷ)

ಆರ್ಥಿಕ ಸ್ಥಿತಿಯು ಈ ವಾರ ಉತ್ತಮವೆನಿಸುವಷ್ಟು ಇರುತ್ತದೆ. ಹಳೆಯ ಬಾಕಿ ಹಣ ವಸೂಲಾಗಿ ಮನಸ್ಸಿಗೆ ಹಿತವೆನಿಸುತ್ತದೆ. ಬಂಧುಗಳಿಂದ ಬರುವ ಕೆಲವು ನಿಂದನೆಗಳನ್ನು ಅನಿವಾರ್ಯ ಕಾರಣಗಳಿಂದಾಗಿ ತಡೆದುಕೊಳ್ಳಬೇಕಾದೀತು. ನೂತನ ಪಾಲುದಾರರಿಂದ ನಿಮ್ಮ ಯೋಜನೆಗಳಿಗೆ ಸೂಕ್ತ ಸಹಕಾರ ದೊರೆಯುತ್ತದೆ. ಯಾವುದೇ ವಿಚಾರದಲ್ಲೂ ಅವಸರದ ನಿರ್ಧಾರಗಳು ಬೇಡವೇಬೇಡ. ವ್ಯಾಪಾರದ ವಿಚಾರದಲ್ಲಿ ಮನಸ್ಸಿಗೆ ಉಲ್ಲಾಸ ತರುವ ಸುದ್ದಿಯೊಂದನ್ನು ಕೇಳುವಿರಿ. ಉದ್ಯಮಿಗಳಿಗೆ ಸರ್ಕಾರದಿಂದ ಬರಬೇಕಾಗಿದ್ದ ಸಹಾಯಧನ ಒದಗಿಬರುತ್ತವೆ. ಕೈಗಾರಿಕೆಗಳಲ್ಲಿ ತಯಾರಿಕಾ ಮಟ್ಟ ಹೆಚ್ಚಾಗಿ ಲಾಭದತ್ತ ಮುಖ ಮಾಡುತ್ತವೆ. ದುಂದುವೆಚ್ಚಗಳಿಗೆ ಕಡಿವಾಣ ಹಾಕುವುದು ಅತೀ ಅಗತ್ಯ.

ಸಿಂಹ ರಾಶಿ( ಮಖ ಪೂರ್ವಪಲ್ಗುಣಿ ಉತ್ತರ ಫಲ್ಗುಣಿ 1)

ಕೆಲವರಿಗೆ ಅವರ ಹವ್ಯಾಸವೇ ವೃತ್ತಿಯಾಗಿ ಪರಿವರ್ತನೆಗೊಂಡು ಆದಾಯ ತರುತ್ತದೆ. ಅನವಶ್ಯಕ ವ್ಯವಹಾರಗಳಲ್ಲಿ ಭಾಗಿಯಾಗುವುದರಿಂದ ನಷ್ಟದ ಜೊತೆಗೆ ಆರೋಪಗಳನ್ನೂ ಎದುರಿಸಬೇಕಾದ ಸಂದರ್ಭವಿದೆ. ಆದ್ದರಿಂದ ಯೋಚಿಸಿ ವ್ಯವಹಾರಕ್ಕೆ ಕೈ ಹಾಕಿರಿ. ದೂರ ಪ್ರಯಾಣದ ವೇಳೆ ನಿಮ್ಮ ಜೊತೆಗಿರುವ ವಸ್ತುಗಳ ಬಗ್ಗೆ ಬಹಳ ಎಚ್ಚರವಿರಲಿ. ಹಣ್ಣುಗಳ ಸಗಟು ವ್ಯಾಪಾರಿಗಳಿಗೆ ಲಾಭವಿರುತ್ತದೆ. ವ್ಯವಹಾರಕ್ಕಾಗಿ ಗಣಕ ಯಂತ್ರಗಳನ್ನು ಖರೀದಿಸುವಿರಿ. ನಿಮ್ಮ ಮುಂದಿನ ಜೀವನದ ನಿರ್ವಹಣೆಗಾಗಿ ಹೊಸ ಆರ್ಥಿಕ ಮೂಲವೊಂದು ಗೋಚರಿಸಬಹುದು. ಈ ನಿಮಿತ್ತ ದೂರ ಪ್ರಯಾಣದ ಸಾಧ್ಯತೆಗಳಿವೆ. ಉದರ ಸಂಬಂಧಿ ಕಾಯಿಲೆಗಳು ಕಿರಿಕಿರಿ ಉಂಟುಮಾಡಬಹುದು.

ಕನ್ಯಾ ರಾಶಿ( ಉತ್ತರ ಫಲ್ಗುಣಿ 2 3 4 ಹಸ್ತಾ ಚಿತ್ತಾ 1.2)

ಕಲಾವಿದರುಗಳು ತಮ್ಮ ಆಕರ್ಷಣೀಯ ನಡವಳಿಕೆಯಿಂದಾಗಿ ಹೆಚ್ಚು ಅಭಿಮಾನಿಗಳನ್ನು ಹೊಂದುವರು. ವೃತ್ತಿಯಲ್ಲಿ ಹೆಚ್ಚಿನ ಒತ್ತಡವಿದ್ದರೂ ತೋರಿಸಿಕೊಳ್ಳದೆ ಸಮಾಧಾನವಾಗಿ ಕೆಲಸ ಮಾಡುವಿರಿ. ಸಮರ್ಥ ಕಾರ್ಯಯೋಜನೆಗಳನ್ನು ಯಶಸ್ವಿಯಾಗಿ ನಿರ್ವಹಿಸಿ ಗೌರವ ಪಡೆಯುವಿರಿ. ಸರ್ಕಾರಿ ನೌಕರರಿಗೆ ಅನಿರೀಕ್ಷಿತ ತಪಾಸಣೆಯಿಂದ ಮುಜುಗರ ಉಂಟಾಗುವುದು. ಈ ದಿಸೆಯಲ್ಲಿ ಸ್ವಲ್ಪ ಅಗೌರವ ಸಹ ಬರಬಹುದು. ವ್ಯವಹಾರಗಳು ಸ್ವಲ್ಪ ಅಭಿವೃದ್ಧಿಯತ್ತ ತಿರುಗಿ ಸಹಜ ಸ್ಥಿತಿಗೆ ಮರಳುವ ನಿರೀಕ್ಷೆ ಇರುತ್ತದೆ. ಮಿತ್ರರೊಂದಿಗೆ ಆರ್ಥಿಕ ಸಂಬಂಧಿತ ವಿಷಯಗಳಿಂದಾಗಿ ವಿರಸ ಮೂಡಬಹುದು. ಹಣದ ಹರಿವು ನಿಮ್ಮ ಅವಶ್ಯಕತೆಗಳನ್ನು ಪೂರೈಸುತ್ತದೆ. ಶೀತ ಬಾಧೆಯ ಬಗ್ಗೆ ಸ್ವಲ್ಪ ಎಚ್ಚರ ವಹಿಸಿರಿ.

ತುಲಾ ರಾಶಿ( ಚಿತ್ತಾ 3 4 ಸ್ವಾತಿ ವಿಶಾಖ 1 2 3)

ವ್ಯವಸಾಯದಲ್ಲಿನ ಅಭಿವೃದ್ಧಿಯಿಂದಾಗಿ ಆದಾಯದಲ್ಲಿ ಹೆಚ್ಚಳ ಕಾಣಬಹುದು. ಸಹೋದ್ಯೋಗಿಗಳೊಂದಿಗೆ ವಿನಾಕಾರಣ ಮನಃಸ್ತಾಪ ಮಾಡಿಕೊಳ್ಳುವಿರಿ. ಮಹಿಳಾ ಸಹೋದ್ಯೋಗಿಗಳು ನಿಮ್ಮ ವಿರುದ್ಧ ತಿರುಗಿಬೀಳುವ ಸಾಧ್ಯತೆಗಳಿವೆ. ನಿಮ್ಮ ಗುರಿ ಸಾಧನೆಯಲ್ಲಿ ಯಶಸ್ಸನ್ನು ಕಾಣಲು ಕಷ್ಟ ಪಡುವಿರಿ. ಮಹಿಳೆಯರ ಮನೋಭಿಲಾಷೆಗಳು ಈಡೇರುತ್ತವೆ. ಇತರರನ್ನು ಅಪಹಾಸ್ಯ ಮಾಡಲು ಹೋಗಿ ನೀವೇ ಅಪಹಾಸ್ಯಕ್ಕೆ ಒಳಗಾಗುವಿರಿ. ಮಕ್ಕಳ ನಡವಳಿಕೆಯ ಬಗ್ಗೆ ಹೆಚ್ಚಿನ ಗಮನ ಅತಿಅಗತ್ಯ. ನಿಮ್ಮ ವಿರೋಧಿಗಳ ಜೊತೆ ನೀವು ಹೊಂದಾಣಿಕೆಯನ್ನು ಮಾಡಿಕೊಳ್ಳುವುದು ಒಳಿತು. ಹಣದ ಒಳಹರಿವು ಅಗತ್ಯಕ್ಕೆ ತಕ್ಕಷ್ಟು ಇದ್ದೇ ಇರುತ್ತದೆ.

ವೃಶ್ಚಿಕ ರಾಶಿ( ವಿಶಾಖಾ 4 ಅನುರಾಧ ಜೇಷ್ಠ)

ಉದ್ಯಮ ನಡೆಸುವವರಿಗೆ ಸಾಕಷ್ಟು ಪ್ರತಿಸ್ಪರ್ಧಿಗಳು ಎದುರಾದರೂ ಆತಂಕವಿರುವುದಿಲ್ಲ. ಸರ್ಕಾರದ ಉನ್ನತ ಹುದ್ದೆಯಲ್ಲಿರುವ ವ್ಯಕ್ತಿಯಿಂದ ನಿಮ್ಮ ಉದ್ಯಮಕ್ಕೆ ಸಾಕಷ್ಟು ಸಹಾಯ ಹರಿದುಬರುತ್ತದೆ. ನಿಮ್ಮ ಕಾರ್ಯಯೋಜನೆ ಯಶಸ್ಸಿಗಾಗಿ ಅನೇಕ ಸಲಹೆಗಳು ಬಂದರೂ ಅವುಗಳನ್ನು ತುಲನೆ ಮಾಡಿ ನೋಡುವುದು ಉತ್ತಮ. ಜಮೀನು, ಆಸ್ತಿಗಳಿಗೆ ಸಂಬಂಧಿಸಿದ ನೋಂದಣಿ ಕಾರ್ಯಗಳು ನಿಮ್ಮ ಅನಿಸಿಕೆಯಂತೆ ಆಗುತ್ತವೆ. ಸಭೆಯೊಂದರಲ್ಲಿ ಭಾಗವಹಿಸಿ ಕೆಲವೊಂದು ವಿಷಯ ಮಂಡನೆ ಮಾಡುವ ಅವಕಾಶ ದೊರೆಯುತ್ತದೆ. ಧನದ ಒಳಹರಿವು ನಿಮ್ಮ ನಿರೀಕ್ಷೆಯ ಮಟ್ಟಕ್ಕೇರುತ್ತದೆ. ಆದರೂ ಅನಗತ್ಯ ವೆಚ್ಚಗಳನ್ನು ಕಡಿಮೆ ಮಾಡುವುದು ಉತ್ತಮ. ಹೊಸ ವ್ಯವಹಾರಕ್ಕೆ ಆಹ್ವಾನ ಬರಬಹುದು.

ಧನಸ್ಸು ರಾಶಿ( ಮೂಲ ಪೂರ್ವಾಷಾಢ ಉತ್ತರಾಷಾಢ 1 )

ವ್ಯವಹಾರದಲ್ಲಿ ಸೋದರರಿಂದ ಸಹಕಾರ ದೊರೆಯುತ್ತದೆ. ಪ್ರಮುಖ ಯೋಜನೆಗಳ ಆಗುಹೋಗುಗಳ ಬಗ್ಗೆ ಪರಿಣತರೊಂದಿಗೆ ಸಮಾಲೋಚನೆ ನಡೆಸುವಿರಿ ಮತ್ತು ಸರಿಯಾದ ನಿರ್ಧಾರವನ್ನು ತೆಗೆದುಕೊಂಡು ಪ್ರಶಂಸೆಗೆ ಪಾತ್ರರಾಗುವಿರಿ. ವೃತ್ತಿಯಲ್ಲಿ ಅತ್ಯಂತ ಧಾವಂತದ ಕೆಲಸಗಳು ಎದುರಾಗಬಹುದು. ಶುಭ ಸಮಾರಂಭಗಳ ಸಲುವಾಗಿ ದೂರ ಪ್ರಯಾಣ ಮಾಡುವಿರಿ. ಸಾಲ ವಸೂಲಾತಿ ಈಗ ಆಗುವ ಸಂದರ್ಭವಿದೆ. ಪ್ರೇಮಿಗಳ ನಡುವೆ ವಿರಸ ಉಂಟಾಗಬಹುದು. ಅದಿರು ಉತ್ಪಾದಕರಿಗೆ ಮಾರುಕಟ್ಟೆ ವಿಸ್ತರಣೆಯಾಗುತ್ತದೆ. ಆಸ್ತಿಗೆ ಸಂಬಂಧಿಸಿದ ಜಿಜ್ಞಾಸೆಗಳಲ್ಲಿ ಪರಿಹಾರ ದೊರೆಯುತ್ತದೆ. ನಿಮ್ಮ ಮಕ್ಕಳ ವಿದ್ಯಾಭ್ಯಾಸದ ಬಗ್ಗೆ ಹೆಚ್ಚು ಹಣ ಹೊಂದಿಸಬೇಕಾಗಬಹುದು. ಧನದ ಒಳಹರಿವು ಸಾಮಾನ್ಯವಾಗಿರುತ್ತದೆ.

ಮಕರ ರಾಶಿ( ಉತ್ತರಾಷಾಢ 2 3 4 ಶ್ರವಣ ಧನಿಷ್ಠ 1.2)

ಒಮ್ಮೆಗೇ ಹಲವಾರು ಕಾರ್ಯಗಳನ್ನು ಆರಂಭಿಸುವುದು ಬೇಡ. ಒಂದರ ನಂತರ ಒಂದನ್ನು ಆರಂಭಿಸಿ. ಸಂಗೀತ ಕಲಾವಿದರಿಗೆ ಸಾರ್ವಜನಿಕ ಪ್ರದರ್ಶನದ ಭಾಗ್ಯ ದೊರೆಯುವುದರ ಜೊತೆಗೆ ಸಂಭಾವನೆಯೂ ಸಿಗುತ್ತದೆ. ಕೊಟ್ಟ ಸಾಲ ಈಗ ವಾಪಸ್ ಬರುತ್ತದೆ. ಕರಕುಶಲ ವಸ್ತುಗಳ ಮಾರಾಟ ಮಾಡುವವರಿಗೆ ವ್ಯಾಪಾರದಲ್ಲಿ ಅಭಿವೃದ್ಧಿ ಇರುತ್ತದೆ. ಆರಕ್ಷಕರು ಪದೋನ್ನತಿಯ ಸಲುವಾಗಿ ದೇಹದಾರ್ಢ್ಯತೆಯನ್ನು ಕಾಪಾಡಿಕೊಳ್ಳುವುದು ಅಗತ್ಯ. ರಾಜಕೀಯ ಪ್ರೇರಿತ ಕೆಲಸಗಳಲ್ಲಿ ಸ್ವಲ್ಪ ಯಶಸ್ಸನ್ನು ಕಾಣಬಹುದು. ಉನ್ನತ ಹುದ್ದೆಯನ್ನು ಅಲಂಕರಿಸಿರುವ ಅಧಿಕಾರಿಗಳಿಗೆ ವರ್ಗಾವಣೆಯ ಭಾಗ್ಯ ಇದೆ. ನಿಮ್ಮ ಅಗತ್ಯವನ್ನು ಪೂರೈಸುವಷ್ಟು ಹಣದ ಒಳಹರಿವು ಇರುತ್ತದೆ.

ಕುಂಭ ರಾಶಿ( ಧನಿಷ್ಠ 3.4 ಶತಭಿಷಾ ಪೂರ್ವಭಾದ್ರ 1 2 3)

ಹಿರಿಯರು ತೆಗೆದುಕೊಳ್ಳುವ ನಿರ್ಧಾರಗಳು ಬಹಳ ಯಶಸ್ವಿಯಾಗುತ್ತವೆ. ವಿದ್ಯಾರ್ಥಿಗಳಿಗೆ ಓದಿನಲ್ಲಿ ಪ್ರಗತಿ ಇರುತ್ತದೆ. ಸಾಮಾಜಿಕ ಕಾರ್ಯಗಳನ್ನು ಮಾಡುವವರಿಗೆ ವಿಶೇಷ ಗೌರವ ಇರುತ್ತದೆ. ಮನೆಯ ನವೀಕರಣ ಕಾರ್ಯವನ್ನು ಕೈಗೆತ್ತಿಕೊಳ್ಳುವಿರಿ. ಯುವಕರಿಗೆ ಪ್ರೇಮಿಗಳು ಕೈ ಕೊಡುವ ಸಾಧ್ಯತೆ ಇದೆ. ಕೆಲವು ಅಧಿಕಾರಿಗಳಿಗೆ ಬಡ್ತಿ ಸಿಗುವ ಸಾಧ್ಯತೆ ಇದೆ. ರೈತರು ಬ್ಯಾಂಕ್ ಅಧಿಕಾರಿಗಳಿಂದ ವಂಚನೆಗೊಳ್ಳುವ ಸಾಧ್ಯತೆಗಳಿವೆ. ದಿನಸಿ ವಸ್ತುಗಳನ್ನು ರಫ್ತು ಮಾಡುವ ಅವಕಾಶ ದೊರೆಯುವ ಸಾಧ್ಯತೆ ಇದೆ. ವಿಶ್ವಾಸಿಗಳಿಗೆ ಅನಿವಾರ್ಯವಾಗಿ ಧನ ಸಹಾಯ ಮಾಡಬೇಕಾದ ಅವಶ್ಯಕತೆ ಬರುತ್ತದೆ. ವೃತ್ತಿಯಲ್ಲಿ ಸಾಕಷ್ಟು ಯಶಸ್ಸು ಇರುತ್ತದೆ. ಜಾಣ್ಮೆಯಿಂದ ಆರ್ಥಿಕ ಸಮತೋಲನವನ್ನು ಕಾಯ್ದುಕೊಳ್ಳುವಿರಿ.

ಮೀನ ರಾಶಿ( ಪೂರ್ವಭಾದ್ರ 4 ಉತ್ತರಾಭಾದ್ರ ರೇವತಿ)

ಮಹಿಳೆಯರ ಯಾತ್ರಾ ಇಷ್ಟಾರ್ಥಗಳು ನೆರವೇರುವ ಸಾಧ್ಯತೆಗಳಿವೆ. ಕುಟುಂಬದವರೊಡನೆ ಧಾರ್ಮಿಕ ಕ್ಷೇತ್ರಗಳನ್ನು ಸಂದರ್ಶಿಸಬಹುದು. ಉದ್ಯೋಗದಲ್ಲಿ ಯಾವುದೋ ಹಳೆಯ ಪ್ರಕರಣವೊಂದು ಹೊರಬಂದು ಶಿಸ್ತು ಕ್ರಮಕ್ಕೆ ಗುರಿಯಾಗುವಿರಿ. ಶೀತ ಸಂಬಂಧಿ ಕಾಯಿಲೆಗಳು ಉಲ್ಬಣವಾಗುವ ಲಕ್ಷಣಗಳಿವೆ. ನಿಮ್ಮ ನೆರೆಹೊರೆಯ ಜನರೊಂದಿಗೆ ವಿನಾಕಾರಣ ನಿಷ್ಠುರವನ್ನು ಮಾಡಿಕೊಳ್ಳುವಿರಿ. ಆರ್ಥಿಕ ಸ್ಥಿತಿಯು ತಕ್ಕಮಟ್ಟಿಗೆ ಇರುತ್ತದೆ. ಕೋರ್ಟ್ ಕಚೇರಿ ಹತ್ತಿದ್ದ ವ್ಯಾಜ್ಯಗಳು ನಿಧಾನವಾಗಿ ಪರಿಹಾರವಾಗುತ್ತವೆ. ಮಧ್ಯವರ್ತಿ ಕೆಲಸ ಮಾಡುವವರಿಗೆ ಹೆಚ್ಚಿನ ಕಮಿಷನ್ ಹಣ ದೊರೆಯುತ್ತದೆ. ವ್ಯಾಪಾರ-ವ್ಯವಹಾರಗಳಲ್ಲಿ ನಿಮ್ಮ ಮಾತಿಗೆ ಹೆಚ್ಚುಬೆಲೆ ಬಂದು ಅದರಂತೆ ಉಳಿದವರು ದನಿಗೂಡಿಸಿವರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT