ಮದ್ದೂರು: ಧರ್ಮಾಚರಣೆ ಮೂಲಕ ಸತ್ಪ್ರಜೆಗಳಾಗಬೇಕು ಎಂದು ಸನಾತನ ಸಂಸ್ಥೆಯ ಜಿಲ್ಲಾ ಸಮನ್ವಯ ಅಧಿಕಾರಿ ಸುಮಾ ಮಂಜೇಶ್ ಹೇಳಿದರು. ತಾಲ್ಲೂಕಿನ ಚಾಮನಹಳ್ಳಿ ಗ್ರಾಮದಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬೆಸಗರಹಳ್ಳಿ ವಲಯದ ವತಿಯಿಂದ ಭಾನುವಾರ ನಡೆದ ಸಾಮೂಹಿಕ ಸತ್ಯಾನಾರಾಯಣಸ್ವಾಮಿ ಪೂಜೆ, ಧಾರ್ಮಿಕ ಉಪನ್ಯಾಸದಲ್ಲಿ ಅವರು ಮಾತಾನಾಡಿದರು.
‘ಧರ್ಮಾಚರಣೆಯಿಂದ ಭಗವಂತನ ಸಂಪೂರ್ಣ ಕೃಪಾ ದೃಷ್ಟಿ ದೊರೆಯುತ್ತದೆ. ಇಂದಿನ ಯುವಪೀಳಿಗೆಯನ್ನು ರಾಷ್ಟ್ರದ ಉತ್ತಮ ಪ್ರಜೆಗಳನ್ನಾಗಿ ರೂಪಿಸಬೇಕಾಗಿದೆ. ಅದರಲ್ಲೂ ಪ್ರಮುಖವಾಗಿ ತಾಯಂದಿರು ಈ ಜವಾಬ್ದಾರಿಯನ್ನು ನಿಭಾಯಿಸಬೇಕು.
ಶಿವಾಜಿ ಮಾತೆ ಜೀಜಾ ಬಾಯಿ ಮಗನನ್ನು ಹೇಗೆ ಬೆಳೆಸಿದಳೋ ಅದೇ ರೀತಿಯಾಗಿ ಪ್ರತಿಯೊಬ್ಬ ತಾಯಿ ತಮ್ಮ ಮಕ್ಕಳನ್ನು ರೂಪಿಸಬೇಕು. ನಮ್ಮ ದೇಶದ ಪರಂಪರೆಯನ್ನು ತಪ್ಪದೇ ಮುನ್ನಡೆಸಬೇಕು. ಇತಂಹ ಕೆಲಸವನ್ನು ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನಾ ಸಂಸ್ಥೆ ಮಾಡುತ್ತಿದೆ’ ಎಂದು ತಿಳಿಸಿದರು.
ಜಿಲ್ಲಾ ಪಂಚಾಯಿತಿ ಸದಸ್ಯೆ ನಾಗರತ್ನ ಸ್ವಾಮಿ ಮಾತಾನಾಡಿ ಮಹಿಳೆಯರು ಆರ್ಥಿಕವಾಗಿ ಸಂಘಟಿತರಾಗಲು ಸ್ವ ಉದ್ಯೋಗ ಕೈಗೊಳ್ಳಬೇಕು. ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮೀಣ ಅಭಿವೃದ್ಧಿ ಸಂಸ್ಥೆ ಸಹಾಯದಿಂದ ತಮ್ಮ ಸ್ವಂತ ಕಾಲ ಮೇಲೆ ನಿಂತು ಜೀವನ ನಡೆಸಲು ಮಹಿಳೆಯರು ಮುಂದಾಗಬೇಕು’ ಎಂದು ಹೇಳಿದರು.
ನಿವೃತ್ತ ಸೈನಿಕ ಸಿ.ಕೆ. ಸತೀಶ್ ಮಾತಾನಾಡಿ ‘ಗ್ರಾಮೀಣ ಭಾಗದ ರೈತರಿಗೆ, ಮಹಿಳೆಯರಿಗೆ, ನಿರುದ್ಯೋಗ ಸಮಸ್ಯೆಯನ್ನು ಹೋಗಲಾಡಿಸುವಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆ ಕಾರ್ಯ ನಿರ್ವಹಿಸುತ್ತಿದೆ. ಸಂಸ್ಥೆ ಆರ್ಥಿಕ ಸಹಾಯ ನೀಡುವ ಮೂಲಕ ಎಷ್ಟೋ ರೈತ ಕುಟುಂಬಗಳ ಜೀವ ಉಳಿಸುವಲ್ಲಿ ಪ್ರಮುಖ ಪಾತ್ರ ವಹಿಸಿದೆ ಎಂದು ಹೇಳಿದರು.
ಗ್ರಾಮ ಪಂಚಾಯಿತಿ ಅಧ್ಯಕ್ಷ ಕೆ. ದಾಸಪ್ಪ ಅಧ್ಯಕ್ಷತೆ ವಹಿಸಿದ್ದರು, ಜಿಲ್ಲಾ ಪಂಚಾಯಿತಿ ಸದಸ್ಯ ಮರಿಹೆಗಡೆ, ಎ. ನಾಗೇಶ್, ಪಿ. ಜಯಾನಂದ್, ಶಾಂತಾಕುಚೇಲ, ಮುನೇಶ್, ಶಿವಲೀಲಾ, ಮುರಳೀಧರ್ ಇದ್ದರು.