ಈ ಕುರಿತು ಮಾತನಾಡಿದ ಅರಣ್ಯ ಇಲಾಖೆ ಸಿಬ್ಬಂದಿ ಎಂ.ಎಸ್. ನಾವಿ, ‘ಮೊಸಳೆ ಮರಿಗಳನ್ನು ಹಿಡಿಯಲು ಬಾವಿಯತ್ತ ಹೋದರೆ ಅವು ನೀರಿನಲ್ಲಿ ಮುಳುಗುತ್ತವೆ. ಮಳೆಗಾಲವಾದ್ದರಿಂದ ಬಾವಿ ಸಂಪೂರ್ಣ ತುಂಬಿದೆ. ಇದರಿಂದ ಅವುಗಳನ್ನು ಹಿಡಿಯಲು ಕಷ್ಟ. ದಿನವಿಡಿ ಕಾಯುತ್ತ ಕುಳಿತು ಮೀನಿನ ಬಲೆ ಬಳಸಿ ಹಿಡಿಯಬೇಕು. ಇದಲ್ಲದೆ ನಮ್ಮಲ್ಲಿ ಇಬ್ಬರೇ ಸಿಬ್ಬಂದಿ ಇರುವುದರಿಂದ ಸ್ಥಳೀಯ ಖಾಸಗಿ ಮೀನುಗಾರರನ್ನು ಬಳಸಿಕೊಳ್ಳಬೇಕಾಗಿದೆ. ಹಾಗಾಗಿ ಅವರಿಗೆ ಹಣ ನೀಡಲು ಹೇಳಲಾಗಿದೆ. ಸಿಬ್ಬಂದಿಗೆ ಹಣ ಕೇಳಿಲ್ಲ. ಇಲಾಖೆಯಿಂದ ಇದಕ್ಕೆ ಹಣ ನೀಡಲಾಗುವುದಿಲ್ಲ. ಸಾಗಣೆ ವೆಚ್ಚ ಮಾತ್ರ ಇಲಾಖೆ ನೀಡುತ್ತದೆ. ಕೆಲವು ಗ್ರಾಮ ಪಂಚಾಯಿತಿ ಹಾಗೂ ಪುರಸಭೆ ವ್ಯಾಪ್ತಿಯಲ್ಲಿ ಮಂಗಗಳನ್ನು ಹಿಡಿಯಲು ಪಂಜರ ಮಾತ್ರ ನೀಡಲಾಗುತ್ತದೆ. ಸ್ಥಳೀಯ ಸಂಸ್ಥೆಗಳೇ ಅವುಗಳನ್ನು ಹಿಡಿಯುವ ವೆಚ್ಚ ಭರಿಸಬೇಕಿದೆ’ ಎಂದರು.