ಬಾಗಲಕೋಟೆ: ಜಿಲ್ಲೆಯ ಮಹಾಲಿಂಗಪುರದ ಭ್ರೂಣಹತ್ಯೆ ಪ್ರಕರಣದ ಆರೋಪಿ ಕವಿತಾ ಬಾಡನವರ ಮೊಬೈಲ್ ಫೋನ್ನಲ್ಲಿ ‘ಸಾಹೇಬರು’ ಎಂಬ ಹೆಸರಿನಲ್ಲಿ ದಾಖಲಿಸಿಕೊಂಡಿರುವ ವ್ಯಕ್ತಿ ಯಾರು? ಹಣಕಾಸಿನ ವ್ಯವಹಾರ ನಡೆದಿದ್ದು ಹೇಗೆ? ಹಿಂದೆ ಎರಡು ಬಾರಿ ಸಿಕ್ಕಿ ಬಿದ್ದಾಗಲೂ ರಕ್ಷಣೆ ನೀಡಿದ್ದು ಯಾರು ಎಂಬ ಬಗ್ಗೆ ಪೊಲೀಸರು ತನಿಖೆ ನಡೆಸಿದ್ದಾರೆ.
ದಾಳಿಯ ಸುಳಿವು ಸಿಕ್ಕಿತ್ತೇ?: ಮಹಾರಾಷ್ಟ್ರದ ಸೋನಾಲಿ ಕದಮ್ಗೆ ಗರ್ಭಪಾತ ಮಾಡಿದ ಬಳಿಕ ರಕ್ತಸ್ರಾವ ಶುರುವಾಯಿತು. ಇದು ಮಾಮೂಲು ಎಂದು ಹೇಳಿದ ಆರೋಪಿ, ಕೆಲ ಗುಳಿಗೆಗಳನ್ನು ನೀಡಿ ಕರೆದೊಯ್ಯಲು ತಿಳಿಸಿದ್ದು ಮತ್ತು ಕೆಲ ಹೊತ್ತಿನಲ್ಲಿ ಸೋನಾಲಿ ಮೃತಪಟ್ಟಿದ್ದು ಪ್ರಾಥಮಿಕ ತನಿಖೆಯಿಂದ ಗೊತ್ತಾಗಿದೆ.
ಜಿಲ್ಲಾ ಆರೋಗ್ಯ ಇಲಾಖೆ ಅಧಿಕಾರಿಗಳಿಂದ ದಾಳಿ ನಡೆಯುವುದರ ಬಗ್ಗೆ ಆರೋಪಿಗೆ ಸುಳಿವು ಸಿಕ್ಕಿತ್ತೆ ಎಂಬ ಬಗ್ಗೆಯೂ ಪರಿಶೀಲನೆ ನಡೆದಿದೆ. ಮೊಬೈಲ್ನ ವಾಟ್ಸ್ಆ್ಯಪ್ ನಲ್ಲಿ ಕೆಲ ಮಾಹಿತಿ ‘ಡಿಲೀಟ್’ ಆಗಿದ್ದು ಅನುಮಾನಕ್ಕೆ ಆಸ್ಪದ ನೀಡಿದೆ. ವಿಧಿ ವಿಜ್ಞಾನ ಪ್ರಯೋಗಾಲಯ (ಎಫ್ಎಸ್ಎಲ್) ಅಧಿಕಾರಿಗಳು ಮಾದರಿ ಸಂಗ್ರಹಣೆ ಕಾರ್ಯದಲ್ಲಿ ತೊಡಗಿದ್ದಾರೆ.
ಅಧಿಕಾರಿಗಳ ಮೇಲೆ ಒತ್ತಡ: 2022ರಲ್ಲಿ ದಾಳಿ ನಡೆದಾಗ ಮನೆಯಲ್ಲಿ ಸುಸಜ್ಜಿತ ವೈದ್ಯಕೀಯ ಕೊಠಡಿ ಇರುವುದು ಪತ್ತೆ ಯಾಗಿತ್ತು. ಆಗ ಆರೋಗ್ಯ ಇಲಾಖೆ ಅಧಿ ಕಾರಿಗಳು ಕಠಿಣ ಕ್ರಮಕ್ಕೆ ಮುಂದಾ ದಾಗ, ‘ಕಂದಾಯ ಇಲಾಖೆಯ ಅಧಿಕಾರಿ ಮತ್ತು ರಾಜಕೀಯ ನಾಯಕರು ಮಧ್ಯೆ ಪ್ರವೇಶಿಸಿ, ಪರಿಸ್ಥಿತಿ ತಣ್ಣಗಾಗಿಸಿದ್ದರು’ ಎಂದು ಮೂಲಗಳು ತಿಳಿಸಿವೆ.
ಸಾಲ ತೀರಿಸಲು ಗುರಿ ನಿಗದಿ: ‘ಬ್ಯಾಂಕ್ನಿಂದ ಲಕ್ಷಾಂತರ ರೂಪಾಯಿ ಸಾಲ ಪಡೆದು, ಕೆಲ ವರ್ಷಗಳ ಹಿಂದೆ ದೊಡ್ಡ ಮನೆ ಕಟ್ಟಿಸಿಕೊಂಡ ಕವಿತಾ ಬಾಡನವರಗೆ ಸಾಲದ ಹೊರೆ ಕಡಿಮೆ ಮಾಡಿಕೊಳ್ಳುವ ಇಚ್ಛೆ ಇತ್ತು. ಅದಕ್ಕೆ ವಾರದಲ್ಲಿ ಮೂರು ಅಥವಾ ನಾಲ್ಕು ಗರ್ಭಪಾತ ಮಾಡುವುದು ಆಕೆಯ ಗುರಿಯಾಗಿತ್ತು’ ಎಂಬುದು ತನಿಖೆಯಿಂದ ಗೊತ್ತಾಗಿದೆ.
ಇಬ್ಬರು ಆರೋಪಿಗಳು ಪೊಲೀಸ್ ವಶಕ್ಕೆ
ಭ್ರೂಣಹತ್ಯೆ ಪ್ರಕರಣದಆರೋಪಿ ಗಳಾದ ಕವಿತಾ ಬಾಡನವರ ಹಾಗೂ ಮೃತ ಸೋನಾಲಿ ಕದಮ್ ಅವರ ಸಹೋದರ ವಿಜಯ ಗೌಳಿ ಅವರನ್ನು ಶನಿವಾರ ನ್ಯಾಯಾಲಯವು ಪೊಲೀಸ್ ವಶಕ್ಕೆ ನೀಡಿದೆ.
‘ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆಗಾಗಿ ಆರೋಪಿಗಳನ್ನು 10 ದಿನ ಪೊಲೀಸ್ ವಶಕ್ಕೆ ನೀಡಲು ಜಮಖಂಡಿಯ ಒಂದನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯಕ್ಕೆ ಕೋರಲಾಗಿತ್ತು. ಮೂರು ದಿನಗಳ ವಿಚಾರಣೆಗೆ ನ್ಯಾಯಾಲಯವು ಆರೋಪಿಗಳನ್ನು ಪೊಲೀಸರ ವಶಕ್ಕೆ ನೀಡಿದೆ’ ಎಂದು ಜಿಲ್ಲಾ ಪೊಲೀಸ್ ವರಿಷ್ಠ ಅಮರನಾಥ ರೆಡ್ಡಿ ತಿಳಿಸಿದರು.
ಆರೋಪಿ ಕವಿತಾ ವಶಕ್ಕೆ ಪಡೆದು ವಿಚಾರಣೆ ನಡೆಸ ಲಾಗುವುದು. ಮೊಬೈಲ್ನಲ್ಲಿನ ಮಾಹಿತಿ ಸಂಗ್ರಹಣೆಗೆ ಎಫ್ಎಸ್ಎಲ್ ನೆರವು ಪಡೆಯಲಾಗುವುದು.ಅಮರನಾಥ ರೆಡ್ಡಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ಬಾಗಲಕೋಟೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.