ಬಾದಾಮಿ: ಇಲ್ಲಿನ ಪುರಾತತ್ವ ಸ್ಮಾರಕಗಳ ಪರಿಸರದಲ್ಲಿ ವಾಸಿಸುವ ಕೋತಿಗಳಿಗೆ ಭಾನುವಾರ ಎರಡನೇ ದಿನ ಕೃಷಿ ಇಲಾಖೆಯಿಂದ ಒಂದು ಕ್ವಿಂಟಲ್ ಬಾಳೆಹಣ್ಣು ಮತ್ತು ಮೂರು ಡಬ್ಬಿ ಬಿಸ್ಕತ್ತು ಹಂಚಲಾಯಿತು.
ತಹಶೀಲ್ದಾರ್ ಸುಹಾಸ್ ಇಂಗಳೆ , ಕೃಷಿ ಇಲಾಖೆಯ ಅಧಿಕಾರಿಗಳಾದ ಎಂ.ಆರ್. ನಾಗನೂರ, ಎಂ.ಎಸ್. ಚಂದಾವರಿ ಮತ್ತು ಸಿಬ್ಬಂದಿ ಮೇಣಬಸದಿ ಮತ್ತು ಮ್ಯೂಸಿಯಂ ಸಮೀಪದಲ್ಲಿನ ನೂರಾರು ಕೋತಿಗಳಿಗೆ ಆಹಾರ ವಿತರಿಸಿದರು.
ಬಾಳೆಹಣ್ಣು ಮತ್ತು ಬಿಸ್ಕತ್ತುಗಳನ್ನು ಸವಿಯುತ್ತ ಕೋತಿಗಳು ಸಂತಸದಿಂದ ಬೆಟ್ಟದ ಕಡೆಗೆ ನೆರಳಿನ ಆಶ್ರಯಕ್ಕೆ ತೆರಳಿದವು. ನೆರಳಿಗೆ ಹೋದ ನಂತರ ಆಹಾರ ಕೊಟ್ಟವರನ್ನು ದೂರದಿಂದ ವೀಕ್ಷಿಸಿದವು.
ಸ್ಮಾರಕಗಳ ಸಮೀಪದ ಕೋತಿಗಳಿಗೆ ಪ್ರವಾಸಿಗರು ಆಹಾರ ಕೊಡುತ್ತಿದ್ದರು. ಕೋವಿಡ್-19 ಸೋಂಕು ಹರಡುವ ಭೀತಿ ಹಿನ್ನೆಲೆಯಲ್ಲಿ ಪ್ರವಾಸಿಗರಿಗೆ ಸ್ಮಾರಕಗಳ ಪ್ರವೇಶ ನಿರ್ಬಂಧಿಸಲಾಗಿದೆ. ಈಗಾಗಿ ಕೋತಿಗಳು ಆಹಾರಕ್ಕಾಗಿ ಪರ ದಾಡುತ್ತಿರುವ ಬಗ್ಗೆ ಪತ್ರಿಕೆಯಲ್ಲಿ ವರದಿ ಪ್ರಕಟವಾಗಿದ್ದನ್ನು ಸ್ಮರಿಸಬಹುದು.
ಆಹಾರ ಕೊಡುವವರು ಸಂಪರ್ಕಿಸಿ
ಸಂಘ ಸಂಸ್ಥೆ , ಬೇಕರಿಗಳ ಮಾಲೀಕರು, ಕಿರಾಣಿ ಮತ್ತು ತರಕಾರಿ ವರ್ತಕರು ಕೋತಿಗಳಿಗೆ ಆಹಾರ ವಿತರಿಸಲು ಸಹಕರಿಸಬೇಕು ಎಂದು ತಹಶೀಲ್ದಾರ್ ಸುಹಾಸ್ ಇಂಗಳೆ ವಿನಂತಿಸಿಕೊಂಡಿದ್ದಾರೆ. ಕೋತಿಗಳಿಗೆ ಆಹಾರ ಕೊಡುವವರು ತಮ್ಮನ್ನು ಸಂಪರ್ಕಿಸಲು ತಹಶೀಲ್ದಾರ್ ಮನವಿ ಮಾಡಿದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.