ರಾಂಪುರ: ‘ಸಾಮೂಹಿಕ ವಿವಾಹಗಳು ನಿರ್ಗತಿಕರ ಮದುವೆಗಳಲ್ಲ. ಅವು ಭಾಗ್ಯವಂತರ ಮದುವೆಗಳು’ ಎಂದು ಬಿಲ್ ಕೆರೂರ ಹಿರೇಮಠದ ಸಿದ್ಧಲಿಂಗ ಶಿವಾಚಾರ್ಯ ಹೇಳಿದರು.
ಬಾಗಲಕೋಟೆ ತಾಲ್ಲೂಕಿನ ಶಿರೂರ ಪಟ್ಟಣದಲ್ಲಿ ಜಾತ್ರಾ ಮಹೋತ್ಸವದ ಅಂಗವಾಗಿ ಸ್ನೇಹ ಸಿಂಚನ ಗೆಳೆಯರ ಬಳಗ ಬುಧವಾರ ಹಮ್ಮಿಕೊಂಡಿದ್ದ ಉಚಿತ ಸಾಮೂಹಿಕ ವಿವಾಹ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.
‘ಇಲ್ಲಿ ಮದುವೆಯಾಗುವ ವಧು ವರರಿಗೆ ಹರ ಗುರು ಚರಮೂರ್ತಿಗಳು, ಸಹಸ್ರಾರು ಜನ ಅಕ್ಷತೆ ಹಾಕಿ ಹರಸುತ್ತಾರೆ. ಇಂತಹ ಭಾಗ್ಯ ಬೇರೆಡೆ ಸಿಗುವುದಿಲ್ಲ. ಹೀಗಾಗಿ ಇವು ಭಾಗ್ಯವಂತರ ಮದುವೆಗಳು’ ಎಂದು ಹೇಳಿದರು.
‘ಜಾತ್ರೆಗಳು ಮೋಜು, ಮಸ್ತಿಗಳಿಗೆ ಸೀಮಿತವಾಗದೇ ಸಾಮಾಜಿಕ ಕಳಕಳಿಯ ಕಾರ್ಯಕ್ರಮಗಳನ್ನು ಹಮ್ಮಿಕೊಂಡರೆ ಅದರಿಂದ ಸಮಾಜಕ್ಕೆ ಒಳ್ಳೆಯದಾಗಿ ಜಾತ್ರೆಯೂ ಅರ್ಥಪೂರ್ಣವಾಗುತ್ತದೆ’ ಎಂದು ಹೇಳಿದರು.
ಅಮೀನಗಡದ ಶಂಕರರಾಜೇಂದ್ರ ಸ್ವಾಮೀಜಿ, ‘ಲಿಂ.ಸಿದ್ಧಲಿಂಗೇಶ್ವರ ಶ್ರೀ ಹಾಗೂ ಲಿಂ.ಚನ್ನವೀರ ಶ್ರೀ ಆಶೀರ್ವಾದದ ಫಲದಿಂದ ಇಂದು ಶಿರೂರಿನಲ್ಲಿ ಇಂತಹ ಸಾಮಾಜಿಕ ಕಳಕಳಿಯ ಕಾರ್ಯಗಳು ನಡೆಯುತ್ತಿವೆ’ ಎಂದು ಹೇಳಿದರು.
ಕಮತಗಿಯ ಹೊಳೆ ಹುಚ್ಚೇಶ್ವರ ಸ್ವಾಮೀಜಿ ಹಾಗೂ ಶಿರೂರಿನ ಮರಿಮಹಾಂತ ಚನ್ನವೀರ ದೇವರು ಮಾತನಾಡಿದರು.
ಗುಳೇದಗುಡ್ಡದ ಅಭಿನವ ಕಾಡಸಿದ್ದೇಶ್ವರ ಶ್ರೀ, ರಬಕವಿಯ ಪ್ರಭುದೇವರು, ಶಿಶು ಅಭಿವೃದ್ಧಿ ಇಲಾಖೆಯ ಜಯಶ್ರೀ ಕಟಗಿ, ಹೇಮಾವತಿ ಭಗವತಿ ಇದ್ದರು. ವಾದಿರಾಜ್ ಕಡಿವಾಲ, ವೈ.ಎಸ್.ಮಾವರಾಣಿ, ಸಂಜಯ ನಡುವಿನಮನಿ ನಿರ್ವಹಿಸಿದರು.
ಶಿರೂರ ಪಟ್ಟಣದಲ್ಲಿ ಬುಧವಾರ ನಡೆದ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ನವಜೀವನಕ್ಕೆ ಕಾಲಿಟ್ಟ ವಧು ವರರು
ಶಿರೂರ ಪಟ್ಟಣದಲ್ಲಿ ಬುಧವಾರ ನಡೆದ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ನವಜೀವನಕ್ಕೆ ಕಾಲಿಟ್ಟ ವಧು ವರರು
ಶಿರೂರ ಪಟ್ಟಣದಲ್ಲಿ ಬುಧವಾರ ಜರುಗಿದ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಜನರು
Cut-off box - ಸಪ್ತಪದಿ ತುಳಿದ 30 ಜೋಡಿ
ವಿವಾಹ ಕಾರ್ಯಕ್ರಮದಲ್ಲಿ 30 ಜೋಡಿ ವಧು ವರರು ಸಪ್ತಪದಿ ತುಳಿದು ಹೊಸ ಬಾಳಿಗೆ ಕಾಲಿಟ್ಟರು. ಶ್ರೀಗಳು ಅಕ್ಷತೆ ಹಾಕಿ ನವದಂಪತಿಯನ್ನು ಹರಸಿದರು. ವಧು ವರರಿಗೆ ಬಟ್ಟೆ ತಾಳಿ ಕಾಲುಂಗುರ ಸೇರಿದಂತೆ ಮದುವೆಗೆ ಬೇಕಾದ ವಸ್ತುಗಳನ್ನು ನೀಡಿದ 184 ದಾನಿಗಳನ್ನು ಸನ್ಮಾನಿಸಲಾಯಿತು.