ಬಾದಾಮಿ: `ಅಧ್ಯಾತ್ಮ ಮತ್ತು ಸಂಸಾರ ದೇಹಕ್ಕೆ ಆಧಾರ. ದೇಹವಿಲ್ಲದಿದ್ದರೆ ಜೀವನಕ್ಕೆ ಆಶ್ರಯವಿಲ್ಲ. ಜೀವಕ್ಕೆ ಆಶ್ರಯ ಕೊಟ್ಟಿರುವುದು ದೇಹ. ದೇಹದ ದಾಹಕ್ಕೆ ಆಧ್ಯಾತ್ಮ ಅವಶ್ಯ. ಅಧ್ಯಾತ್ಮದಿಂದ ಜೀವನಕ್ಕೆ ಆನಂದ~ ಎಂದು ದಿಂಗಾಲೇಶ್ವರ ಸ್ವಾಮೀಜಿ ಹೇಳಿದರು.
ಅವರು ಇಲ್ಲಿನ ವಿಶ್ವಚೇತನ ಸಂಘದ ಆಶ್ರಯದಲ್ಲಿ ಜರುಗಿದ ಉಪನ್ಯಾಸ ಶಿಬಿರದಲ್ಲಿ `ತನುವಿದನುಳಿದಿಂದ್ರ ಜಾಲದಾಟಗಳುಂಟೆ~ ಎಂಬ ನಿಜಗುಣ ಶಿವಯೋಗಿಗಳ ವಚನದ ಸಾರವನ್ನು ವಿವರಿಸಿದರು.
ನಿಜಗುಣ ಶಿವಯೋಗಿಗಳು ಧರೆಯಲ್ಲಿ ಯಾವುದನ್ನು ನಿಂದಿಸದೆ ನೇರವಾಗಿ ಅಧ್ಯಾತ್ಮವನ್ನು ಬೋಧಿಸಿದರು. ಮಾನವನ ದೇಹ ಸೃಷ್ಟಿಯು ವಿಚಿತ್ರ ಮತ್ತು ಅದ್ಭುತ. ತಾಯಿಯ ಗರ್ಭದಲ್ಲಿ ಮಗುವಿನ ರಚನೆ, ಜನನ ಹಾಗೂ ವಿವಿಧ ಅಂಗಾಂಗಗಳ ಕ್ರಿಯೆ, ಮಾನವನ ಬದುಕು, ವೃದ್ಯಾಪ್ಯ ಹಾಗೂ ಕೊನೆಗೆ ಮಾನವ ದೇಹ ನಶಿಸಿದಾಗ ಮಣ್ಣಿನಲ್ಲಿ ಹೂತು ಹೋಗುವ ಸಂದರ್ಭ ಇದೆಲ್ಲವೂ ಅದ್ಭುತವಾದ ಇಂದ್ರಜಾಲವೆಂದು ವಚನದ ಸಾರವನ್ನು ವಿವರಿಸಿದರು.
`ಸಂಸಾರಿಕ ಜಂಜಾಟದಲ್ಲಿ ಶಾಂತಿ, ನೆಮ್ಮದಿ ಕಳೆದುಕೊಂಡಿದ್ದೇವೆ. ಆತ್ಮದ ಅರಿವಿನ ಅಧ್ಯಯನ ಅವಶ್ಯ~ ಎಂದು ಡಿಡಿಪಿಐ ಎಸ್.ಆರ್. ಮನಹಳ್ಳಿ ಹೇಳಿದರು. ಐ.ಕೆ. ಪಟ್ಟಣಶೆಟ್ಟಿ, ಎಂ.ಬಿ. ಹಂಗರಗಿ, ಮಹಾಂತೇಶ ಮಮದಾಪೂರ ಹಾಗೂ ಅಕ್ಕಲಕೋಟೆ, ಜೇವರಗಿ, ಅಫಜಲಪೂರ ಮತ್ತು ದೇವರ ಹಿಪ್ಪರಗಿಯ ಸ್ವಾಮೀಜಿ ವೇದಿಕೆಯಲ್ಲಿದ್ದರು. ಇಷ್ಟಲಿಂಗ ಶಿರಸಿ ಸ್ವಾಗತಿಸಿದರು.