ಬಾಗಲಕೋಟೆ: ‘ಸಮಗ್ರ ಕರ್ನಾಟಕದ ಅಭಿವೃದ್ಧಿಗೆ ಹೋರಾಟ ನಡೆಸಬೇಕಾದ ರಾಜ್ಯ ರೈತ ಸಂಘದ ಮುಖಂಡರು ಉತ್ತರ ಕರ್ನಾಟಕದ ಅಭಿವೃದ್ಧಿಯ ವಿಷಯದಲ್ಲಿ ಹಿಂದೇಟು ಹಾಕುತ್ತಿದ್ದಾರೆ. ಹಾಗಾಗಿ ಉತ್ತರ ಕರ್ನಾಟಕ ರೈತ ಸಂಘ ಸ್ಥಾಪಿಸಲಾಗಿದೆ’ ಎಂದು ಸಂಘದ ರಾಜ್ಯ ಘಟಕದ ಅಧ್ಯಕ್ಷ ಬಸವರಾಜ ಕರಿಗಾರ ತಿಳಿಸಿದರು.
ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಕರ್ನಾಟಕ ರಾಜ್ಯ ಸಂಘದೊಂದಿಗೆ ಸುಮಾರು 40 ವರ್ಷಗಳಿಂದ ಹೋರಾಟ ಮಾಡುತ್ತಾ ಬರಲಾಗಿತ್ತು. ದಕ್ಷಿಣ ಕರ್ನಾಟಕ ಹಾಗೂ ಕಾವೇರಿ ವಿಷಯಕ್ಕೆ ನೀಡುವ ಪ್ರಾಮುಖ್ಯತೆಯನ್ನು ಉತ್ತರ ಕರ್ನಾಟದ ಅಭಿವೃದ್ಧಿಗೆ ನೀಡುತ್ತಿಲ್ಲ’ ಎಂದರು.
‘ಉತ್ತರ ಕರ್ನಾಟಕ ರೈತ ಸಂಘದ ಮೂಲಕ ಈ ಭಾಗದ ರೈತರು ಸ್ವಾಭಿಮಾನಿಗಳಾಗಿ ಒಕ್ಕೂಟತೆಯನ್ನು ತೋರಿಸಬೇಕಿದೆ. ಎಲ್ಲರೂ ಒಂದು ಎಂಬ ಭಾವನೆ ಮೂಡಿಸಬೇಕಿದೆ. ಸರ್ಕಾರ ಉತ್ತರ ಕರ್ನಾಟಕಕ್ಕೆ ಪ್ರತ್ಯೇಕ ಬಜೆಟ್ ಮಂಡಿಸಬೇಕು. ಈ ಭಾಗದ ಎಲ್ಲ ಸಮಸ್ಯೆಗಳಿಗೆ ಶೀಘ್ರ ಪರಿಹಾರ ರೂಪಿಸಬೇಕು’ ಎಂದು ಆಗ್ರಹಿಸಿದರು.
‘ಸರ್ಕಾರ ಮಹದಾಯಿ ಸಮಸ್ಯೆ ಯನ್ನು ಶೀಘ್ರ ಬಗೆಹರಿಸಬೇಕು. ರಾಷ್ಟ್ರೀಕೃತ ಬ್ಯಾಂಕ್ಗಳಲ್ಲಿನ ರೈತರ ಸಂಪೂರ್ಣ ಸಾಲಮನ್ನಾ ಮಾಡಬೇಕು. ರೈತ ಮಹಿಳೆಯರಿಗೆ ಹೆಚ್ಚಿನ ಸವಲತ್ತು ನೀಡಬೇಕು. ಸರ್ಕಾರದ ನಿರ್ಲಕ್ಷ್ಯ ಭಾವನೆ ಇದೇ ರೀತಿ ಮುಂದು ವರಿದರೆ ಚುನಾವಣೆಯಲ್ಲಿ ತಕ್ಕಪಾಠ ಕಲಿಸಬೇಕಾಗುತ್ತದೆ’ ಎಂದು ಎಚ್ಚರಿಸಿದರು.
ಸಂಘದ ಗೌರವಾಧ್ಯಕ್ಷ ಎಲ್.ಎಸ್.ಗೌಡರ, ಉಪಾಧ್ಯಕ್ಷ ಸೋಮಶೇಖರ ಬರಗೊಂಡಿ, ರಾಜ್ಯ ಪ್ರಧಾನ ಕಾರ್ಯದರ್ಶಿ ಅಣ್ಣಪ್ಪಗೌಡ ದೇಸಾಯಿ, ಎಸ್.ಎಸ್.ಸರಗಣಾಚಾರಿ, ಹನುಮಂತ ಸೊನ್ನದ ಹಾಜರಿದ್ದರು.