ಬಾಗಲಕೋಟೆ: ಕನಿಷ್ಠಕೂಲಿ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಜಿಲ್ಲೆಯ ಅಂಗನವಾಡಿ ಕಾರ್ಯಕರ್ತೆಯರು ಸಿಐಟಿಯು ನೇತೃತ್ವದಲ್ಲಿ ಶುಕ್ರವಾರ ನವನಗರದ ಜಿಲ್ಲಾಡಳಿತ ಭವನದ ಎದುರು ಪ್ರತಿಭಟನೆ ನಡೆಸಿದರು.
ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಕೆಲಸ ಕಾಯಂಗೊಳಿಸಿ, ಸಾಮಾಜಿಕ ಭದ್ರತೆ ನೀಡಬೇಕು, ಕನಿಷ್ಠ ರೂ 10 ಸಾವಿರ ವೇತನ ನೀಡಬೇಕು ಎಂದು ಆಗ್ರಹಿಸಿದರು.
ಐಸಿಡಿಎಸ್ ಖಾಸಗೀಕರಣ ನಿಲ್ಲಿಸಬೇಕು, ಪ್ರತಿ ತಿಂಗಳು 5ನೇ ತಾರೀಕಿನೊಳಗೆ ಗೌರವಧನ ಸಂದಾಯ ಮಾಡಬೇಕು, ಹೆಚ್ಚುವರಿ ರೂ 500 ಗೌರವಧನ ನೀಡಬೇಕು, ಕಟ್ಟಿಗೆ ಹಣ ರೂ 100 ರಿಂದ ರೂ 500ಕ್ಕೆ ಹೆಚ್ಚಿಸಬೇಕು, ಅಂಗನವಾಡಿ ಕೇಂದ್ರದ ಬಾಡಿಗೆ ಹಣ ಹೆಚ್ಚಿಸಬೇಕು, ಮಕ್ಕಳಿಗೆ ಸಮವಸ್ತ್ರ ನೀಡಬೇಕು, ಬೇರೆ ಇಲಾಖೆ ಹೆಚ್ಚುವರಿ ಕೆಲಸ ವಹಿಸಬಾರದು ಎಂದರು.
ಪ್ರತಿ ಹಳ್ಳಿ, ನಗರ ಪ್ರದೇಶದಲ್ಲಿ ಅಂಗನವಾಡಿ ಕಟ್ಟಡಗಳನ್ನು ಕೂಡಲೇ ಕಟ್ಟಿಸಬೇಕು, ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕಿಯರಿಗೆ ನಿವೇಶನ ನೀಡಬೇಕು, ಬಿಪಿಎಲ್ ಕಾರ್ಡ್ ವಿತರಿಸಬೇಕು, ಭಾಗ್ಯಲಕ್ಷ್ಮಿ ಮತ್ತು ಸ್ತ್ರೀಶಕ್ತಿ ಸಂಘಗಳ ಪ್ರೋತ್ಸಾಹಧನ ನೀಡಬೇಕು ಎಂದರು.
ಕಾರ್ಯಕರ್ತೆಯರು ಮತ್ತು ಸಹಾಯಕಿಯರಿಗೆ ಗುಣಮಟ್ಟದ ಸಮವಸ್ತ್ರ ನೀಡಬೇಕು, ಪ್ರತಿಕೇಂದ್ರಕ್ಕೂ ಗ್ಯಾಸ್ ಸಿಲಿಂಡರ್ ಕೊಡಬೇಕು, ಪ್ರತಿ ತಿಂಗಳು ಸಭೆಗೆ ಬರಲು ಬಸ್ ಪ್ರಯಾಣ, ಊಟದ ಖರ್ಚು ನೀಡಿ, ಬೇಸಿಗೆ ರಜೆ ಹೆಚ್ಚಿಸಬೇಕು ಎಂದು ಒತ್ತಾಯಿಸಿದರು.
ಅಂಗನವಾಡಿ ನೌಕರರ ಸಂಘದ ಬಾಗಲಕೋಟೆ ತಾಲ್ಲೂಕು ಘಟಕದ ಎ. ಗೌಡರ, ಕೆ.ಯಾವಗಲ್, ಎಚ್.ಕೆ. ದಾಸರ, ಜಿ.ಬಿ. ದೇಶಪಾಂಡೆ, ಬೀಳಗಿ ಘಟಕದ ಎಂ.ಸಿ. ಶಹಾಪುರ, ವಿ.ಬಿ. ಅಣ್ಣೆಪ್ಪನವರ, ಹುನಗುಂದ ಘಟಕದ ಎಂ.ಪಿ. ಗಾಳಪೂಜಿಮಠ, ಎಸ್.ಬಿ. ಮೇಟಿ, ಮುಧೋಳ ಘಟಕದ ಎ.ಎಂ. ತಿಪ್ಪಿಮಠ, ಆರ್.ಎಸ್. ಸ್ವಾಮಿ, ಜಮಖಂಡಿ ಘಟಕದ ಎ. ಕಾಮರೆಡ್ಡಿ, ಆರ್. ಪೂಜಾರಿ ಮತ್ತಿತರರು ಇದ್ದರು.