ಬಾಗಲಕೋಟೆ: ‘ವಿಜ್ಞಾನದ ಸಾಧ್ಯತೆಗಳನ್ನು ಹೇಳುತ್ತಲೇ ಅದರ ಮಿತಿ ಗುರುತಿಸುವ ಸಂಗತಿಯಿಂದಾಗಿಯೇ ಡಾ.ಎಸ್.ಎಲ್.ಭೈರಪ್ಪ ಅವರ ಯಾನ ಕಾದಂಬರಿಯ ವಸ್ತು ವಿಷಯ ಓದುಗರನ್ನು ಸೆಳೆಯುತ್ತದೆ’ ಎಂದು ಲೇಖಕ ದಿವಾಕರ ಹೆಗಡೆ ಅಭಿಪ್ರಾಯಪಟ್ಟರು.
ಇಲ್ಲಿನ ಬಿ.ವಿ.ವಿ ಸಂಘದ ಬಸವೇಶ್ವರ ಕಲಾ ಮಹಾವಿದ್ಯಾಲಯದಲ್ಲಿ ಶುಕ್ರವಾರ ನಡೆದ ಡಾ.ಎಸ್.ಎಲ್.ಭೈರಪ್ಪ ಅವರ ಸಾಹಿತ್ಯ ಕುರಿತಾದ ವಿಚಾರ ಸಂಕಿರಣದಲ್ಲಿ ‘ಯಾನದೊಳಗಿನ ಯಾನಗಳು’ ವಿಷಯದ ಬಗ್ಗೆ ಮಾತನಾಡಿದರು.
‘ವಿಜ್ಞಾನಿ ದೇವಸ್ಥಾನಕ್ಕೆ ಹೋಗಬಾರದೇ ಎಂಬ ವಿಚಾರ ವಿಜ್ಞಾನ ಕ್ಷೇತ್ರದಲ್ಲಿ ಎತ್ತರಕ್ಕೆ ಹೋದಂತೆ ನಮ್ಮನ್ನು ಅನಿವಾರ್ಯವಾಗಿ ಕಾಡುತ್ತದೆ. ಈ ತಾತ್ವಿಕ ಪ್ರಶ್ನೆಯನ್ನು ಯಾನ ಕಾದಂಬರಿಯಲ್ಲಿ ಕಾಣುತ್ತೇವೆ. ಬಹಿರಂಗದ ಲಾಭ ನೋಡುತ್ತಲೇ ಅಂತರಂಗವನ್ನು ಪ್ರಶ್ನಿಸಿಕೊಳ್ಳಲು ಸಾಹಿತ್ಯ ದೊಡ್ಡ ಅವಕಾಶವಾಗಿದೆ. ಎಲ್ಲದಕ್ಕೂ ಪರ್ಯಾಯ ಇಲ್ಲವೇ ತಾಂತ್ರಿಕ ಪರಿಹಾರ ಶೋಧನೆ ಮಾಡುತ್ತಾ ಹೋದರೆ ನಾವು ಸಹಜ ಪ್ರವೃತ್ತಿ ಕಳೆದುಕೊಳ್ಳುತ್ತೇವೆ ಎಂಬ ಎಚ್ಚರ ‘ಯಾನ’ದ ಆಶಯವಾಗಿದೆ’ ಎಂದರು.
‘ಅನಾದಿಯಿಂದ ಅನಂತದವರೆಗೆ ನಡೆದುಕೊಂಡು ಹೋಗುವ ಹಾದಿಯಲ್ಲಿ ಯಾನ ಪರಿಕಲ್ಪನೆ ಮಹತ್ವದ್ದಾಗಿದೆ. ಫ್ರಾಕ್ಸಿಮಾ ಸೆಂಟಾರಿಯ ಬಳಿಗೆ ರೊಬೊಗಳನ್ನು ಕಳುಹಿಸಿದ್ದರೆ ಅದು ಕೇವಲ ಮಾಹಿತಿ ಆಗುತ್ತಿತ್ತು. ಆದರೆ ಮಾಹಿತಿಯೊಂದಿಗೆ ಮನುಷ್ಯ ತೊಡಗಿಕೊಂಡಾಗ ಅದು ಕಥೆಯಾಗುತ್ತದೆ ಎಂಬುದು ಕಾದಂಬರಿಯಿಂದ ವೇದ್ಯವಾಗುತ್ತದೆ’ ಎಂದರು.
‘ಡಾ.ಎಸ್.ಎಲ್.ಭೈರಪ್ಪನವರ ಕಾದಂಬರಿಗಳಲ್ಲಿ ಸ್ತ್ರೀ’ ವಿಷಯದ ಬಗ್ಗೆ ಮಾತನಾಡಿದ ಅಂಕಣಕಾರ್ತಿ ಸಹನಾ ವಿಜಯಕುಮಾರ, ‘ಭೈರಪ್ಪನವರ ಕಾದಂಬರಿಗಳಲ್ಲಿನ ಸ್ತ್ರೀ ಪಾತ್ರಗಳು ಅವರ ಜೀವನ ದರ್ಶನದಿಂದಲೇ ಸಾಕ್ಷಾತ್ಕಾರಗೊಂಡವು. ಆದ್ದರಿಂದ ಆ ಪಾತ್ರಗಳು ಎಲ್ಲಾ ಕಾಲಕ್ಕೂ ದೇಶ–ಭಾಷೆಗಳ ಗಡಿ ಮೀರಿ ಪ್ರಸ್ತುತವಾಗುತ್ತವೆ. ಇದಕ್ಕೆಲ್ಲಾ ಭೈರಪ್ಪನವರ ಮೇಲೆ ಕಡು–ಕಷ್ಟಗಳ ನಡುವೆ ಸಕಾರಾತ್ಮಕ ಧೋರಣೆ ಹೊಂದಿದ್ದ ತಾಯಿ ಗೌರಮ್ಮನವರ ಪ್ರಭಾವವೇ ಕಾರಣ’ ಎಂದರು. ‘ತಾಯಿಯೊಬ್ಬರ ನಿಷ್ಠೆ, ಬುದ್ಧಿ, ತಾಳ್ಮೆ, ವಿವೇಚನೆ ಮಗನಿಗೆ ಕಷ್ಟಸಾಧ್ಯವಾದ ಗಮ್ಯವನ್ನು ತಲುಪುವ ಭಾವಶಕ್ತಿ ಆಕೆಯ ಅನುಪಸ್ಥಿತಿಯಲ್ಲಿ ನೀಡಬಲ್ಲುದು ಎಂಬುದಕ್ಕೆ ಸ್ವತಃ ಭೈರಪ್ಪ ನವರೇ ಸಾಕ್ಷಿ’ ಎಂದರು.
‘ಭೈರಪ್ಪನವರ ಕಾದಂಬರಿಗಳಲ್ಲಿ ವಸ್ತು ಮತ್ತು ತಂತ್ರದ ಹೊಂದಾಣಿಕೆ’ ವಿಷಯದ ಬಗ್ಗೆ ಮಾತನಾಡಿದ ಲೇಖಕ ಡಾ.ಅಜಕ್ಕಳ ಗಿರೀಶ ಭಟ್, ‘ಕಥಾವಸ್ತು ಹೇಗೆ ಓದುಗನನ್ನು ತಲುಪುತ್ತದೆ ಎಂಬುದು ಮುಖ್ಯ. ಈ ದಾಟಿಕೊಂಡು ಬರುವ ಪ್ರಕ್ರಿಯೆಯೇ ತಂತ್ರ’ ಎಂದರು.
ಭೈರಪ್ಪ ಅವರ ಕಾದಂಬರಿಗಳಲ್ಲಿ ಸಮಾನಾಂತರ ಕಥೆ, ಉಪಕಥೆ, ನಂಬಿಕೆ, ಕಥೆಯೊಳಗಿನ ಕಥೆ ಹೀಗೆ ಒಂದಲ್ಲಾ ಒಂದು ಸತ್ಯದ ಶೋಧನೆ ಕಾಣಲು ಸಾಧ್ಯವಾಗಿದೆ.ಇತಿಹಾಸ, ವರ್ತಮಾನ ಹೀಗೆ ಎಲ್ಲಾ ಸಂದರ್ಭಗಳಲ್ಲೂ ಸತ್ಯಕ್ಕೆ ಪ್ರಾಶಸ್ತ್ಯ ನೀಡಲಾಗಿದೆ. ಸುಳ್ಳನ್ನು ಮೌಲ್ಯವಾಗಿ ತತ್ಕಾಲದ ಅವಶ್ಯಕತೆಯಾಗಿ ಒಪ್ಪಿಕೊಂಡರೆ ಅದು ಇಡೀ ಮೌಲ್ಯ ವ್ಯವಸ್ಥೆಯ ದಾರಿ ತಪ್ಪಿಸುವ ಸಾಧ್ಯತೆ ಇದೆ ಎಂಬ ಎಚ್ಚರವನ್ನು ಅವರ ಕಾದಂಬರಿಗಳ ವಸ್ತು–ವಿಷಯಗಳು ಒಳಗೊಂಡಿವೆ’ ಎಂದರು.
‘ಸೃಜನೇತರ ಸಾಹಿತ್ಯದಲ್ಲಿ ಚಿಂತನೆಯ ನೆಲೆಗಳು’ ವಿಷಯದ ಬಗ್ಗೆ ಡಾ.ಶ್ರೀಧರ ಹೆಗಡೆ ಭದ್ರನ್ ಮಾತನಾಡಿದರು. ನಂತರ ‘ಮಂದ್ರ’ ಕಾದಂಬರಿ ಆಧಾರಿತ ಹಿಂದೂಸ್ತಾನಿ ಶಾಸ್ತ್ರೀಯ ರಾಗಗಳನ್ನು ಹುಬ್ಬಳ್ಳಿಯ ರಾಜೇಶ್ವರಿ ಪಾಟೀಲ ಪ್ರಸ್ತುತ ಪಡಿಸಿದರು. ರಾಗ, ಅರ್ಥ ಹಾಗೂ ಭಾವದ ವಿಶ್ಲೇಷಣೆಯನ್ನು ದಿವಾಕರ ಹೆಗಡೆ ಮಾಡಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.