ಹೊಸಪೇಟೆ: ‘ಹೋದಲ್ಲಿ ಬಂದಲ್ಲಿ ಚೊಂಬು ಹಿಡಿದು ಓಡಾಡುತ್ತಿರುವ ರಾಹುಲ್ ಗಾಂಧಿ ಅವರು ಚುನಾವಣೆ ಫಲಿತಾಂಶದ ನಂತರ ಶಾಶ್ವತವಾಗಿ ಚೊಂಬು ಹಿಡಿದು ಓಡಾಡಬೇಕಾಗುತ್ತದೆ’ ಎಂದು ಬಳ್ಳಾರಿ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಬಿ. ಶ್ರೀರಾಮುಲು ವ್ಯಂಗ್ಯವಾಡಿದ್ದಾರೆ.
ಹೊಸಪೇಟೆಯಲ್ಲಿ ಭಾನುವಾರ ಆಯೋಜಿಸಿದ್ದ ಬಿಜೆಪಿ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ‘ಕಾಂಗ್ರೆಸ್ ಪರಿಸ್ಥಿತಿ ಏನಾಗಿದೆ, ರಾಹುಲ್ ಕತೆ ಏನಾಗಿದೆ ಎಂಬುದನ್ನು ಎಲ್ಲರೂ ಗಮನಿಸಬೇಕು. ಚೊಂಬು ಹಿಡಿದು ಓಡಾಡುತ್ತಿರುವ ರಾಹುಲ್ ಗಾಂಧಿ ಅವರನ್ನು ದೇಶದ 130 ಕೋಟಿ ಜನ ‘ಚೊಂಬು ಗಾಂಧಿ’ ಎಂದು ಕರೆಬೇಕು‘ ಎಂದು ಗೇಲಿ ಮಾಡಿದರು.
‘ಇತ್ತೀಚೆಗೆ ಬಳ್ಳಾರಿಯಲ್ಲಿ ನಡೆದ ಸಮಾವೇಶದಲ್ಲಿ ಪಾಲ್ಗೊಳ್ಳಲೆಂದು ರಾಹುಲ್ ಜಿಂದಾಲ್ ವಿಮಾನ ನಿಲ್ದಾಣಕ್ಕೆ ಬಂದಿದ್ದರು. ಆದರೆ, ಸಮಾವೇಶದಲ್ಲಿ ಜನರಿಲ್ಲದ ಕಾರಣಕ್ಕೆ ವಾಪಸಾಗಲು ಸಜ್ಜಾಗಿದ್ದರು. ನಂತರ ಅವರನ್ನು ಮನವೊಲಿಸಿ ಬಳ್ಳಾರಿಗೆ ಕರೆಸಿಕೊಂಡರು. ಬಳ್ಳಾರಿ ಜನ ರಾಹುಲ್ ಗಾಂಧಿಗೆ ಮಂಗಳಾರತಿ ಮಾಡಿದ್ದಾರೆ. ಚುನಾವಣೆ ನಂತರ ಮಹಾ ಮಂಗಳಾರತಿ ಮಾಡುತ್ತಾರೆ‘ ಎಂದು ಹೇಳಿದರು.
‘ಶಿವನ ತ್ರಿಶೂಲದಲ್ಲಿ ಮೂರು ಶೂಲಗಳಿವೆ. ಅದರಂತೆ, ಬಿಜೆಪಿ ,ಜೆಡಿಎಸ್ ಮತ್ತು ಜನಾರ್ದನ ರೆಡ್ಡಿ ಅವರು ತ್ರಿಶೂಲದಂತೆ ಕೆಲಸ ಮಾಡಿ ಕಾಂಗ್ರೆಸ್ ಅನ್ನು ಸೋಲಿಸುತ್ತೇವೆ. ಮೋದಿ ರಾಮರಾಜ್ಯ ಕಟ್ಟಲು ಹೊರಟಿದ್ದಾರೆ. ಕಾಂಗ್ರೆಸ್ಸಿಗರು ರಾವಣನ ರಾಜ್ಯ ಕಟ್ಟಲು ಹೋರಟಿದಿದ್ದಾರೆ. ಈ ಚುನಾವಣೆಯಲ್ಲಿ ರಾವಣ ಸರ್ವನಾಶವಾಗುತ್ತಾನೆ‘ ಎಂದರು.
‘ಕಾಂಗ್ರೆಸ್ ಪಕ್ಷ ಬ್ರೈನ್ ಡೆಡ್ ಪಾರ್ಟಿಯಾಗಿದೆ. ಅವರಿಗೆ ಸೋಲುವುದು ಗೊತ್ತಾಗಿದೆ. ಅಧಿಕಾರಕ್ಕೆ ಬರಬೇಕಿದ್ದರೆ ಅಗತ್ಯವಿರುವ ಸರಳ ಬಹುತದ ಸ್ಥಾನಗಳಿಗಿಂತಲೂ ಕಡಿಮೆ ಸ್ಥಾನಗಳಲ್ಲಿ ಕಾಂಗ್ರೆಸ್ ಸ್ಪರ್ಧೆ ಮಾಡಿದೆ. ಅದರಲ್ಲಿ 25 ಸ್ಥಾನಗಳನ್ನು ಕಾಂಗ್ರೆಸ್ ಗೆಲ್ಲಬಹುದು. ಇನ್ನು ಅವರು ಅಧಿಕಾರಕ್ಕೆ ಬರಲು ಸಾಧ್ಯವೇ‘ ಎಂದೂ ಅವರು ಪ್ರಶ್ನೆ ಮಾಡಿದರು.
‘ರಾಮುಲು ಕಷ್ಟಕಾಲದಲ್ಲಿದ್ದಾನೆ. ಈ ಚುನಾವಣೆಯಲ್ಲಿ ಸೋತರೆ, ಎಲ್ಲವನ್ನೂ ಕಳೆದುಕೊಳ್ಳಬೇಕಾಗುತ್ತದೆ. ಕಷ್ಟಕಾಲದಲ್ಲಿದ್ದೇನೆ, ಕೈ ಹಿಡಿಯಿರಿ ತಾಯಾಂದಿರೇ‘ ಎಂದೂ ಅವರು ಮನವಿ ಮಾಡಿಕೊಂಡರು.