ಬಳ್ಳಾರಿ: ಉಪ್ಪಾರ ನಿಗಮಕ್ಕೆ ಅಧ್ಯಕ್ಷರು ಮತ್ತು ಸದಸ್ಯರನ್ನು ನೇಮಿಸಿ, ₹100 ಕೋಟಿ ಅನುದಾನ ಮೀಸಲಿಡಬೇಕು ಎಂದು ಕರ್ನಾಟಕ ರಾಜ್ಯ ಉಪ್ಪಾರ ಮಹಾಸಭಾದ ರಾಜ್ಯ ಘಟಕದ ಉಪಾಧ್ಯಕ್ಷ ಬಿ.ಎಂ.ಸಿದ್ದೇಶ್ ಕುಮಾರ್ ಒತ್ತಾಯಿಸಿದರು.
ನಗರದಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ನಿಗಮ ರಚಿಸಿ, ಅಧ್ಯಕ್ಷರನ್ನು ನೇಮಿಸಲಾಗಿತ್ತು. ಅದಾದ ಬಳಿಕ ಈವರೆಗೆ ಅಧ್ಯಕ್ಷರು, ಸದಸ್ಯರನ್ನು ನೇಮಿಸದೇ ಸಮುದಾಯವನ್ನು ಕಡೆಗಣಿಸಲಾಗಿದೆ ಎಂದು ದೂರಿದರು.
ಸಮುದಾಯ ಆರ್ಥಿಕ, ಸಾಮಾಜಿಕ ಮತ್ತು ರಾಜಕೀಯವಾಗಿ ಹಿಂದುಳಿದಿದೆ. ರಾಜಕೀಯ ಪಕ್ಷಗಳು ಚುನಾವಣೆ ಸಮಯದಲ್ಲಿ ಕೇವಲ ಭರವಸೆ ನೀಡಿ, ಅಧಿಕಾರ ನೀಡದೆ ಸಮುದಾಯವನ್ನು ಕಡೆಗಣಿಸುತ್ತಾರೆ. ಬಿಜೆಪಿಗೆ ದುಡಿದ ಉಪ್ಪಾರ ಸಮಾಜದ ಮುಖ್ಯ ವಾಹಿನಿಗೆ ಬರಲು ಮುಖ್ಯಮಂತ್ರಿಗಳು ಸಹಕರಿಸಬೇಕು. ಇತರೆ ನಿಗಮ ಮಂಡಳಿಗಳಿಗೂ ಉಪ್ಪಾರ ಸಮುದಾಯದವರನ್ನು ಆದ್ಯತೆ ಮೇರೆಗೆ ನೇಮಿಸಬೇಕು ಎಂದು ಒತ್ತಾಯಿಸಿದರು.
ಮಹಾಸಭಾದ ಯು.ಕೃಷ್ಣಪ್ಪ, ಹನುಮೇಶ್, ಯು.ತಿಮ್ಮಪ್ಪ, ಪಾಂಡುರಂಗ, ಯರ್ರಿಸ್ವಾಮಿ, ಬಸವರಾಜ, ಮಂಜುನಾಥ ಇದ್ದರು.