ಹೊಸಪೇಟೆ: ಪೌರಕಾರ್ಮಿಕರು ಮತ್ತು ಕೊಳೆಗೇರಿ ಮಕ್ಕಳಿಗೆ ಹಮ್ಮಿಕೊಂಡಿರುವ ಇಂಗ್ಲಿಷ್ ಭಾಷೆ ಮಾತನಾಡುವ ಕಲಿಕಾ ತರಬೇತಿ ಕಾರ್ಯಕ್ರಮಕ್ಕೆ ಶುಕ್ರವಾರ ನಗರದಲ್ಲಿ ನಗರಸಭೆ ಪೌರಾಯುಕ್ತ ಮನ್ಸೂರ್ ಅಲಿ ಚಾಲನೆ ನೀಡಿದರು.
ಬಳಿಕ ಮಾತನಾಡಿದ ಮನ್ಸೂರ್, ‘ರೋಟರಿ ಕ್ಲಬ್ ಹಾಗೂ ಸಮಾನತೆ ಟ್ರಸ್ಟ್, ಕೊಳೆಗೇರಿ ಹಾಗೂ ಪೌರ ಕಾರ್ಮಿಕರ ಮಕ್ಕಳ ಏಳಿಗೆಯ ಬಗ್ಗೆ ಯೋಚಿಸಿ ಈ ಕಾರ್ಯಕ್ರಮ ರೂಪಿಸಿರುವುದು ಶ್ಲಾಘನಾರ್ಹ. ಎಲ್ಲ ಮಕ್ಕಳಲ್ಲಿ ಪ್ರತಿಭೆ ಇರುತ್ತದೆ. ಅವರಿಗೆ ಅವಕಾಶಗಳು ಸಿಗಬೇಕಷ್ಟೇ’ ಎಂದರು.
‘ಕ್ರೀಡೆ, ಕಲೆ ಮೂಲಕ ಮಕ್ಕಳ ಬೌದ್ಧಿಕ ಬೆಳವಣಿಗೆಯಾಗುತ್ತದೆ. ಅವರಿಗೆ ಕಲಿಕಾ ಹಂತದಲ್ಲಿ ಉತ್ತಮ ಶಿಕ್ಷಣ ನೀಡಿದರೆ ದೊಡ್ಡ ವ್ಯಕ್ತಿಗಳಾಗಿ ಬದಲಾಗುತ್ತಾರೆ. ಸಾಮಾಜಿಕವಾಗಿ ಹಿಂದುಳಿದ ಮಕ್ಕಳ ಶ್ರೇಯೋಭಿವೃದ್ಧಿಗೆ ನಗರಸಭೆಯಿಂದ ಸಿಗುವ ಎಲ್ಲ ಸೌಲಭ್ಯಗಳನ್ನು ಸಕಾಲಕ್ಕೆ ಸಿಗುವಂತೆ ಮಾಡಲಾಗುವುದು’ ಎಂದು ತಿಳಿಸಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ಪಿ. ಸುನಂದಾ, ‘ಈ ಕಾರ್ಯಕ್ರಮದಿಂದ ಪೌರಕಾರ್ಮಿಕರು, ಸ್ಲಂ ಮಕ್ಕಳು ಮುಖ್ಯವಾಹಿನಿಗೆ ಬರಲು ಅನುಕೂಲವಾಗುತ್ತದೆ. ಈ ರೀತಿಯ ಕಾರ್ಯಕ್ರಮಗಳು ನಿರಂತರವಾಗಿ ನಡೆಯುತ್ತಿರಬೇಕು’ ಎಂದು ಹೇಳಿದರು.
ರೋಟರಿ ಕ್ಲಬ್ ಅಧ್ಯಕ್ಷ ಶ್ರೀಕಾಂತ್ ಮಾತನಾಡಿ, ‘ಪ್ರತಿಯೊಬ್ಬ ಮನುಷ್ಯ ಸುಲಭವಾಗಿ ನಾಲ್ಕು ಭಾಷೆಗಳನ್ನು ಬೆಳೆಯುತ್ತ ಕಲಿಯುತ್ತಾನೆ. ಇಂಗ್ಲಿಷ್ ಕಲಿಯುವುದು ಕಷ್ಟವೇನಲ್ಲ. ಮನಸ್ಸಿನಿಂದ ಕೆಲಸ ಮಾಡಿದರೆ ಯಶಸ್ಸು ಸಿಗುತ್ತದೆ’ ಎಂದರು.
ಸಮಾನತೆ ಟ್ರಸ್ಟ್ನ ರಾಮಚಂದ್ರ, ಹುಲಿಗೆಮ್ಮ. ರೋಟರಿ ಕ್ಲಬ್ ಸದಸ್ಯರಾದ ವೀರಭದ್ರ. ಸತ್ಯನಾರಾಯಣ, ರಮೇಶ್ , ಶೈನಾಜ್, ಸುನೀತಾ, ಹನುಮಂತ, ಕೊಳೆಗೇರಿ, ಪೌರ ಕಾರ್ಮಿಕರ ಮಕ್ಕಳು ಇದ್ದರು.