ಹೊಸಪೇಟೆ: ನಗರ ಸೇರಿದಂತೆ ತಾಲ್ಲೂಕಿನ ಹಲವೆಡೆ ಭಾನುವಾರ ಮಧ್ಯಾಹ್ನ ಬಿರುಸಿನ ಮಳೆಯಾಗಿದೆ.
ಮಧ್ಯಾಹ್ನ ಎರಡುವರೆ ಗಂಟೆ ಸುಮಾರಿಗೆ ಆರಂಭಗೊಂಡ ಬಿರುಸಾದ ಮಳೆ ಸತತ ಅರ್ಧಗಂಟೆಗೂ ಹೆಚ್ಚು ಸಮಯ ಸುರಿಯಿತು.
ರಭಸದ ಮಳೆಗೆ ಪಟೇಲ್ ನಗರ, ಚಿತ್ತವಾಡ್ಗಿ ಸೇರಿದಂತೆ ಹಲವೆಡೆ ಚರಂಡಿಗಳು ಉಕ್ಕಿ ಹರಿದವು. ಅಲ್ಲಲ್ಲಿ ರಸ್ತೆ ಮೇಲೆ ನೀರು ಸಹ ನಿಂತುಕೊಂಡಿತ್ತು. ಬೆಳಿಗ್ಗೆಯಿಂದ ದಟ್ಟ ಕಾರ್ಮೋಡ ಇತ್ತು. ಬಿರುಗಾಳಿ ಬೀಸುತ್ತಿತ್ತು. ಮಧ್ಯಾಹ್ನ ಏಕಾಏಕಿ ಭಾರಿ ಮಳೆಯಾಗಿದೆ. ವರ್ಷಧಾರೆಯಿಂದ ವಾತಾವರಣ ಸಂಪೂರ್ಣ ತಂಪಾಗಿದೆ.
ತಾಲ್ಲೂಕಿನ ನಾಗೇನಹಳ್ಳಿ, ಬಸವನದುರ್ಗ, ಧರ್ಮದಗುಡ್ಡ, ಕಾಳಘಟ್ಟ, ಹೊಸೂರು, ಮಲಪನಗುಡಿ, ಕೊಂಡನಾಯಕನಹಳ್ಳಿ, ಹಂಪಿ, ಕಮಲಾಪುರ ಸೇರಿದಂತೆ ಹಲವೆಡೆ ಮಳೆಯಾಗಿದೆ.