ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಬಳ್ಳಾರಿ: ತುಮಟಿ, ವಿಠಲಾಪುರ, ಮಲಪನಗುಡಿಯಲ್ಲಿ ಜಂಟಿ ಸಮೀಕ್ಷೆ

ಅಂತರರಾಜ್ಯ ಗಡಿಯಲ್ಲಿ ವಿವಿಧ ಇಲಾಖೆಗಳ ಅಧಿಕಾರಿಗಳಿಂದ ಪರಿಶೀಲನೆ
Published 29 ಮೇ 2024, 15:36 IST
Last Updated 29 ಮೇ 2024, 15:36 IST
ಅಕ್ಷರ ಗಾತ್ರ

ಬಳ್ಳಾರಿ: ಬಳ್ಳಾರಿ ಜಿಲ್ಲೆಯಲ್ಲಿ ಹಾದು ಹೋಗಿರುವ ಕರ್ನಾಟಕ ಮತ್ತು ಆಂಧ್ರಪ್ರದೇಶ ಮಧ್ಯದ ಅಂತರರಾಜ್ಯ ಗಡಿಯಲ್ಲಿನ ಏಳು ಗಣಿ ಗುತ್ತಿಗೆಗಳ ಜಂಟಿ ಸಮೀಕ್ಷೆ ಕಾರ್ಯ ಬುಧವಾರ ಆರಂಭವಾಯಿತು.  

ಮೊದಲ ದಿನದ ಸಮೀಕ್ಷೆ ಸಂಡೂರಿನ ತುಮಟಿ, ವಿಠಲಾಪುರ ಮತ್ತು ಆಂಧ್ರ ಪ್ರದೇಶದ ಮಲಪನಗುಡಿಯಲ್ಲಿ ಬರುವ ಮೆಹಬೂಬ್‌ ಟ್ರಾನ್ಸ್‌ಪೋರ್ಟ್‌ ಕಂಪನಿಯ (ಎಂಬಿಟಿ) ಗಣಿಯಿಂದ ಆರಂಭವಾಯಿತು. ಇದಕ್ಕೆ ಹೊಂದಿಕೊಂಡಂತಿರುವ ಹಿಂದ್‌ ಟ್ರೇಡರ್ಸ್‌ (ಎಚ್‌ಟಿ) ಮತ್ತು ಟಿ. ನಾರಾಯಣ ರೆಡ್ಡಿ (ಟಿಎನ್‌ಆರ್‌) ಗಣಿ ಗುತ್ತಿಗೆದಾರರ ಪರ ಪ್ರತಿನಿಧಿಗಳು ಮತ್ತು ಸಂಡೂರಿನ ತಹಶೀಲ್ದಾರ್‌ ಅನಿಲ್‌ ಕುಮಾರ್‌ ಸ್ಥಳದಲ್ಲಿ ಇದ್ದರು.

‘ಸಮೀಕ್ಷೆ ಕಾರ್ಯದಲ್ಲಿ ಗಣಿಗಳ ಗಡಿ ಬಿಂದು, ಜಿಪಿಎಸ್‌ ರೀಡಿಂಗ್‌ನ್ನು ಅಧಿಕಾರಿಗಳು ಪಡೆದಿದ್ದಾರೆ. ಅವರು ಅದನ್ನು ಕಂದಾಯ ಇಲಾಖೆ ನಕ್ಷೆಯೊಂದಿಗೆ ಹೋಲಿಕೆ ಮಾಡುವರು. ಅಂತಿಮ ವರದಿಯನ್ನು ಕೇಂದ್ರದ ಉನ್ನತಾಧಿಕಾರಿ ಸಮಿತಿ (ಸಿಇಸಿ)ಗೆ ಸಲ್ಲಿಸುವರು. ಅದರ ಆಧಾರದ ಮೇಲೆ ಗಣಿಗಳ ವರ್ಗೀಕರಣ ನಡೆಯಲಿದೆ’ ಎಂದು ಮೂಲಗಳು ತಿಳಿಸಿವೆ.

ಈ ಏಳು ಗಣಿ ಕಂಪನಿಗಳು 2009ರಲ್ಲೇ ಕಾರ್ಯಾಚರಣೆ ಸ್ಥಗಿತಗೊಳಿಸಿವೆ. ಅಂದಿನಿಂದ ಅಲ್ಲಿ ಯಾವುದೇ ಚಟುವಟಿಕೆ ನಡೆದಿಲ್ಲ. ಹೀಗಾಗಿ ರಸ್ತೆಗಳೆಲ್ಲವೂ ಮುಚ್ಚಿವೆ. ಗುಡ್ಡಗಾಡು ಪ್ರದೇಶದಲ್ಲಿರುವ ಈ ಗಣಿಗಳ ಬಳಿ ತೆರಳಲು ಸಮೀಕ್ಷೆ ತಂಡದ ಸದಸ್ಯರು ಪ್ರಯಾಸಪಟ್ಟರು. ಕಿಲೋಮೀಟರ್‌ ದೂರದಲ್ಲೇ ವಾಹನಗಳನ್ನು ನಿಲ್ಲಿಸಿ, ನಡೆದುಕೊಂಡು ಹೋದರು.

ಸುರತ್ಕಲ್‌ನ ಎನ್‌ಐಟಿಕೆ ಸಂಸ್ಥೆ ಸಮೀಕ್ಷೆ ನಡೆಸುತ್ತಿದೆ. ಎರಡೂ ರಾಜ್ಯಗಳ ಅರಣ್ಯ, ಕಂದಾಯ, ಭೂ ದಾಖಲೆ, ಗಣಿ ಮತ್ತು ಭೂವಿಜ್ಞಾನ ಇಲಾಖೆ ಮತ್ತು ತಾಂತ್ರಿಕ ತಂಡಗಳ ಸದಸ್ಯರು ಸಮೀಕ್ಷೆ ಕಾರ್ಯದಲ್ಲಿ ಪಾಲ್ಗೊಂಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT