ಕಂಪ್ಲಿ: ಕನ್ನಡವನ್ನು ಅನ್ನ, ಅರಿವಿನ ಭಾಷೆಯನ್ನಾಗಿ ರೂಪಿಸಿಕೊಳ್ಳುವ ಜೊತೆಗೆ ಕರುಳ ಭಾಷೆಯನ್ನಾಗಿ ಬಳಸಬೇಕಿದೆ ಎಂದು ಗಂಗಾವತಿ ಎಸ್.ಕೆ.ಎನ್.ಜಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಉಪನ್ಯಾಸಕ ಗುಂಡೂರು ಪವನ್ಕುಮಾರ್ ತಿಳಿಸಿದರು.
ಇಲ್ಲಿನ ವೀರಶೈವ ಸಂಘದ ಆವರಣದಲ್ಲಿ ಕನ್ನಡ ಹಿತರಕ್ಷಕ ಸಂಘ ಮಂಗಳವಾರ ಆಯೋಜಿಸಿದ್ದ ರಾಜ್ಯೋತ್ಸವ ಸಮಾರಂಭದಲ್ಲಿ ಮಾತನಾಡಿ ಅವರು, ಶತಮಾನಗಳಿಂದ ವಿವಿಧ ಸವಾಲುಗಳನ್ನು ಎದುರಿಸುತ್ತ ಬಂದಿರುವ ಕನ್ನಡ ಭಾಷೆಗೆ ಯಾವತ್ತೂ ಅಳಿವಿಲ್ಲ. ಪ್ರತಿಯೊಬ್ಬರೂ ಕನ್ನಡವನ್ನು ಗೌರವಿಸಬೇಕು. ಪ್ರತಿನಿತ್ಯವೂ ಬಳಸಬೇಕಿದೆ, ಬೆಳೆಸಬೇಕಿದೆ, ಉಳಿಸಬೇಕಿದೆ. ಕನ್ನಡ ಭಾಷೆಯ ಮಹತ್ವವನ್ನು ಯುವಪೀಳಿಗೆಗೆ ತಿಳಿಸಬೇಕಿದೆ ಎಂದರು.
ತಹಶೀಲ್ದಾರ್ ಶಿವರಾಜ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಸ್ಥಳೀಯ ಕಲಾವಿದರಾದ ಪಿ.ಪಾಮಯ್ಯ ಶರಣರು, ದಾಸರ ವೆಂಕಟೇಶ, ಎಚ್.ಕೆ. ಕಾರಮಂಚಪ್ಪ ಮತ್ತು ಎಂ.ಎಸ್ಸಿ ಸ್ನಾತಕೋತ್ತರ ಪದವಿಯಲ್ಲಿ ಮೂರು ಚಿನ್ನದ ಪದಕ ಗಳಿಸಿದ ಎಮ್ಮಿಗನೂರಿನ ಎ. ಹಾಜಿರಾಬೀ ಹಾಗೂ ಎಸ್ಎಸ್ಎಲ್ಸಿಯಲ್ಲಿ ಕನ್ನಡ ವಿಷಯದಲ್ಲಿ ಪೂರ್ಣ ಅಂಕ ಗಳಿಸಿದ 17 ವಿದ್ಯಾರ್ಥಿಗಳನ್ನು ಗೌರವಿಸಲಾಯಿತು.
ವಿವಿಧ ಶಾಲಾ–ಕಾಲೇಜು ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಜರುಗಿದವು.
ವೀರಶೈವ ಸಂಘದ ಅಧ್ಯಕ್ಷ ಪಿ.ಮೂಕಯ್ಯಸ್ವಾಮಿ ಅಧ್ಯಕ್ಷತೆ ವಹಿಸಿದ್ದರು. ಕನ್ನಡ ಹಿತರಕ್ಷಕ ಸಂಘದ ಗೌರವಾಧ್ಯಕ್ಷ ಕ.ಮ.ಹೇಮಯ್ಯಸ್ವಾಮಿ, ಅಧ್ಯಕ್ಷ ಬೂದಗುಂಪಿ ಅಂಬಣ್ಣ, ಪದಾಧಿಕಾರಿಗಳಾದ ಬೂದಗುಂಪಿ ಹುಸೇನ್ಸಾಬ್, ಸಿ. ಯಂಕಪ್ಪ, ಮಾ.ಶ್ರೀನಿವಾಸ, ಕ.ಮೆಹಬೂಬ್, ಕ.ಯಂಕಾರೆಡ್ಡಿ, ಕವಿತಾಳ ಬಸವರಾಜ ಇದ್ದರು.