ಹೊಸಪೇಟೆ: ಜಿಲ್ಲಾಡಳಿತವು ‘ತುಂಗಭದ್ರಾ ನದಿ ಪುಷ್ಕರ ಮಹೋತ್ಸವ’ ಆಯೋಜಿಸಲು ಅನುಮತಿ ನಿರಾಕರಿಸಿದ್ದರೂ ಸಹ ಶುಕ್ರವಾರ ತಾಲ್ಲೂಕಿನ ಹಂಪಿ ತುಂಗಭದ್ರಾ ನದಿಯಲ್ಲಿ ಜನ ಪುಣ್ಯ ಸ್ನಾನ ಮಾಡಿದರು.
ಕಿರಿಯರಿಂದ ಹಿರಿಯರವರೆಗೆ ಎಲ್ಲ ವಯೋಮಾನದವರು ತುಂಗೆಯಲ್ಲಿ ಮಿಂದೆದ್ದರು. ಬಳಿಕ ವಿರೂಪಾಕ್ಷೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿ ವಿರೂಪಾಕ್ಷನ ದರ್ಶನ ಪಡೆದರು. ನಂತರ ಹಂಪಿ ಸ್ಮಾರಕಗಳನ್ನು ಕಣ್ತುಂಬಿಕೊಂಡರು.
ಅಖಿಲ ಕರ್ನಾಟಕ ಕಮ್ಮವಾರಿ ಸಂಘವು ನ. 20ರಿಂದ ಡಿ. 1ರ ವರೆಗೆ ಪುಷ್ಕರ ಆಯೋಜಿಸಲು ಜಿಲ್ಲಾಡಳಿತಕ್ಕೆ ಕೋರಿತ್ತು. ಆದರೆ, ಕೋವಿಡ್ ಕಾರಣಕ್ಕಾಗಿ ಜಿಲ್ಲಾಡಳಿತ ಅನುಮತಿ ನೀಡಿರಲಿಲ್ಲ. ‘ಪುಷ್ಕರ ಇದೆ ಎಂದು ವ್ಯಾಪಕ ಪ್ರಚಾರವಾಗಿತ್ತು. ಹೀಗಾಗಿ ಕೆಲವರು ಬಂದು ನದಿಯಲ್ಲಿ ಪುಣ್ಯ ಸ್ನಾನ ಮಾಡಿದ್ದಾರೆ. ಜನಜಾತ್ರೆ ಇರಲಿಲ್ಲ’ ಎಂದು ಹಿಂದೂ ಧಾರ್ಮಿಕ ದತ್ತಿ ಇಲಾಖೆಯ ಅಧಿಕಾರಿ ಎಂ.ಎಚ್. ಪ್ರಕಾಶ್ ರಾವ್ ‘ಪ್ರಜಾವಾಣಿ’ಗೆ ತಿಳಿಸಿದರು.
ನದಿಗೆ ನೀರು:ಕಂಪ್ಲಿ, ಸಿರುಗುಪ್ಪ ಸೇರಿದಂತೆ ಹಲವೆಡೆ ನದಿ ದಂಡೆಯಲ್ಲಿ ಪುಷ್ಕರ ಹಮ್ಮಿಕೊಂಡಿದ್ದರಿಂದ ಶುಕ್ರವಾರ ಇಲ್ಲಿಗೆ ಸಮೀಪದ ತುಂಗಭದ್ರಾ ಜಲಾಶಯದಿಂದ ನದಿಗೆ ನೀರು ಹರಿಸಲಾಗುತ್ತಿದೆ. ನದಿಗೆ 3,000 ಕ್ಯುಸೆಕ್ ನೀರು ಬಿಡಲಾಗುತ್ತಿದೆ ಎಂದು ತುಂಗಭದ್ರಾ ಜಲಾಶಯ ಆಡಳಿತ ಮಂಡಳಿ ತಿಳಿಸಿದೆ.