ಬಳ್ಳಾರಿ: ನಾಲ್ಕು ಗೋಡೆಗಳ ಮಧ್ಯೆ ಅಡುಗೆ ಮಾಡುವ ಮಹಿಳೆಯರಿಗೆ ಸರ್ಕಾರ ಬದಲಿಸುವ ಶಕ್ತಿಯೂ ಇದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಬಿ.ನಾಗೇಂದ್ರ ಹೇಳಿದರು.
ಇಲ್ಲಿನ ಮೋಕಾ ರಸ್ತೆ ಬಳಿ ಖಾಸಗಿ ಸಭಾಂಗಣದಲ್ಲಿ ಕಾಂಗ್ರೆಸ್ನಿಂದ ಮಂಗಳವಾರ ಏರ್ಪಡಿಸಿದ್ದ ‘ನಾರಿ ಶಕ್ತಿ’ ಮಹಿಳಾ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು.
‘ಎಲ್ಲಿದ್ದರೂ ನನ್ನ ಕುಟುಂಬ ಚೆನ್ನಾಗಿರಬೇಕು ಎನ್ನುವ ಮನೋಭಾವ ಹೆಣ್ಣುಮಕ್ಕಳಲ್ಲಿ ಇರುತ್ತದೆ. ಬದ್ಧತೆ ಪ್ರದರ್ಶನದಲ್ಲೂ ಮಹಿಳೆಯರು ಪುರುಷರಿಗಿಂತ ಮುಂದು. ಮಹಿಳೆಯರಿಗಾಗಿಯೇ ಸರ್ಕಾರ ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸಿದೆ ಎಂದರು.
ಗೀತಾ ಶಿವರಾಜಕುಮಾರ್ ಮಾತನಾಡಿ, ಮಹಿಳೆಯರಿಗಾಗಿ ರೂಪಿಸಿದ ಪಕ್ಷದ ಕಾರ್ಯಕ್ರಮವೇ ನಾರಿ ಶಕ್ತಿ. ಒಂದು ದೇಶ, ಕುಟುಂಬದ ಯಶಸ್ಸಿನಲ್ಲಿ ಮಹಿಳೆಯರ ಪಾತ್ರ ಮುಖ್ಯ. ಸಂವಿಧಾನ ಮತ್ತು ಕಾನೂನು ಮಹಿಳೆಯರಿಗೆ ಸಮಾನತೆ ನೀಡಬೇಕೆಂದು ಹೇಳುತ್ತವೆ. ಈ ನಿಟ್ಟಿನಲ್ಲಿ ಸರ್ಕಾರ ಕಾರ್ಯಕ್ರಮಗಳನ್ನು ಜಾರಿಗೆ ತಂದಿದೆ ಎಂದು ತಿಳಿಸಿದರು.
ಮಹಿಳೆಯರು, ಮಕ್ಕಳ ಪೌಷ್ಟಿಕಾಂಶ ಕೊರತೆ ನೀಗಿಸಲು ಹಲವು ಯೋಜನೆಗಳನ್ನು ಜಾರಿಗೊಳಿಸಿದೆ. ರಾಜ್ಯದಲ್ಲಿ ಸಾಧಕ ಮಹಿಳೆಯರನ್ನು ಗುರುತಿಸಲು ಕಿತ್ತೂರು ರಾಣಿ ಚನ್ನಮ್ಮ ಪ್ರಶಸ್ತಿ ಕೊಡಮಾಡಲಾಗುತ್ತಿದೆ ಎಂದರು.
ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್ ಅವರ ನೇತೃತ್ವದಲ್ಲಿ ರಾಜ್ಯದಲ್ಲಿ ಸರ್ಕಾರ ಅಸ್ತಿತ್ವಕ್ಕೆ ಬಂದಿದೆ. ಜನರು ಆಶೀರ್ವಾದ ಮಾಡಿದರೆ ಮುಂಬರುವ ಲೋಕಸಭಾ ಚುನಾವಣೆಯಲ್ಲಿಯೂ ಕಾಂಗ್ರೆಸ್ ಗೆಲುವು ಸಾಧಿಸಲಿದೆ ಎಂದು ಅಭಿಪ್ರಾಯಪಟ್ಟರು.
‘ನಮ್ಮ ಶಕ್ತಿಧಾಮದಲ್ಲೂ ಅನೇಕ ಸಾಮಾಜಿಕ ಕಾರ್ಯಕ್ರಮಗಳು ನಡೆಯುತ್ತಿವೆ. ಹೆಣ್ಣುಮಕ್ಕಳಿಗೆ ಕೌಶಲ ತರಬೇತಿ, ಆರ್ಥಿಕ ನೆರವು ನೀಡಲಾಗುತ್ತಿದೆ. ಪ್ರಸ್ತುತ 200 ಜನ ಹೆಣ್ಣು ಮಕ್ಕಳು ಇದ್ದಾರೆ’ ಎಂದು ಗೀತಾ ಶಿವರಾಜ್ಕುಮಾರ್ ತಿಳಿಸಿದರು.
ಶಾಸಕ ನಾರಾ ಭರತ್ ರೆಡ್ಡಿ ಮಾತನಾಡಿ, ನಮ್ಮ ಪಕ್ಷ, ಸರ್ಕಾರ ಮಹಿಳೆಯರ ಪರ ಇದೆ. ಈಗ ಚರ್ಚೆಯಲ್ಲಿ ಇರುವ ಮಹಿಳಾ ಮೀಸಲಾತಿ ನಮ್ಮ ಪಕ್ಷದ ನಾಯಕಿ ಸೋನಿಯಾ ಗಾಂಧಿ ಅವರ ಕನಸು ಎಂದು ಹೇಳಿದರು.
ಮೇಯರ್ ಡಿ.ತ್ರಿವೇಣಿ, ಉಪ ಮೇಯರ್ ಬಿ.ಜಾನಕಿ, ಪಾಲಿಕೆ ಸದಸ್ಯರು, ಪಕ್ಷದ ಮುಖಂಡರು ಇದ್ದರು.
ಬಳ್ಳಾರಿಯ ಮೋಕಾ ರಸ್ತೆಯ ಖಾಸಗಿ ಸಭಾಂಗಣದಲ್ಲಿ ಕಾಂಗ್ರೆಸ್ ವತಿಯಿಂದ ಮಂಗಳವಾರ ಏರ್ಪಡಿಸಿದ್ದ ನಾರಿ ಶಕ್ತಿ ಮಹಿಳಾ ಸಮಾವೇಶದಲ್ಲಿ ಗೀತಾ ಶಿವರಾಜ್ ಕುಮಾರ್ ಮಾತನಾಡಿದರು.