ಬಳ್ಳಾರಿ: ಅಸ್ಸಾಂ ಮೂಲದ ಕಾರ್ಮಿಕನೊಬ್ಬನನ್ನು ಬೆದರಿಸಿ ಹಣ ಕಿತ್ತುಕೊಂಡು ಪರಾರಿಯಾಗಿದ್ದ ಮೂವರು ದರೋಡೆಕೋರರನ್ನು ಘಟನೆ ಸಂಭವಿಸಿದ ಕೆಲವೇ ಗಂಟೆಗಳಲ್ಲಿ ಬಂಧಿಸಿರುವ ಪ್ರಕರಣ ನಗರದ ಹೊರವಲಯದ ಕೊಳಗಲ್ ರಸ್ತೆಯಲ್ಲಿರುವ ಚೆಕ್ಪೋಸ್ಟ್ ಬಳಿ ಶನಿವಾರ ಸಂಜೆ ಸಂಭವಿಸಿದೆ.
ನಗರದಲ್ಲಿ ಸೆಕ್ಯೂರಿಟಿ ಗಾರ್ಡ್ ಆಗಿ ಕೆಲಸ ಮಾಡುವ ಅಸ್ಸಾಂ ರಾಜ್ಯದ ರತ್ನೇಶ್ವರ ಯಂಗಟಿ ಅವರ ಮೇಲೆ ಎರಗಿದ ಮೂವರು ದುಷ್ಕರ್ಮಿಗಳು ಚಾಕು ತೋರಿಸಿ, ಕೊಲೆ ಮಾಡುವುದಾಗಿ ಬೆದರಿಸಿ ರೂ 450 ನಗದಿನೊಂದಿಗೆ ಪರಾರಿಯಾಗಿದ್ದರು. ಕೂಡಲೇ ಕಾರ್ಯಾಚರಣೆ ನಡೆಸಿದ ಪೊಲೀಸರು ಬಳ್ಳಾರಿಯ ಶ್ರೀಕಾಂತ, ತಿರುಮಲೇಶ್, ಸುಭಾಷ್ ಎಂಬುವವರನ್ನು ಬಂಧಿಸಿದ್ದಾರೆ.
ಬಂಧಿತರಿಂದ ಒಂದು ಆಟೊ ರಿಕ್ಷಾ, ರೂ 35 ಸಾವಿರ ಮೌಲ್ಯದ ಮೊಬೈಲ್ ದೂರವಾಣಿ ಉಪಕರಣಗಳನ್ನು ವಶಕ್ಕೆ ಪಡೆಯಲಾಗಿದೆ. ಈ ಕುರಿತು ಕೌಲ್ಬಝಾರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸಿಪಿಐ ವೈ.ಡಿ. ಅಗಸೀಮನಿ ತನಿಖೆ ಮುಂದುವರಿಸಿದ್ದಾರೆ.